ಪುಟ:ಕರ್ನಾಟಕ ಗತವೈಭವ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೩೦

ಕರ್ನಾಟಕ-ಗತವೈಭವ


ಏಶಿಯಾಟಿಕ್ ಸೊಸಾಯಿಟಿಯು ೧೭೭೫ರಲ್ಲಿ ಸ್ಥಾಪಿತವಾಯಿತು. ಮುಂಬಯಿ ಸಂಸ್ಥೆಯು ೧೮೦೪ನೆಯ ಇಸ್ವಿಯಲ್ಲಿ ಸ್ಥಾಪನವಾಯಿತು. ೧೮೧೮ನೆಯ ಇಸ್ವಿಯಲ್ಲಿ ಮದ್ರಾಸ್‌ ಸಂಸ್ಥೆಯು ಸ್ಥಾಪಿತವಾಯಿತು, ೧೮೨೫ ನೆಯ ಇಸ್ವಿಯಲ್ಲಿ ಲಂಡನ್ ಸೊಸಾಯಿಟಿಯು ಸ್ಥಾಪಿತವಾಗಿ, ಮೊದಲು ಬೇರೆ ಬೇರೆ ಹೆಸರುಗಳಿಂದ ಕೆಲಸ ಮಾಡುತ್ತಿದ್ದ ಇವೆಲ್ಲ ಸಂಸ್ಥೆಗಳು ಆ ಲಂಡನದ ಮುಖ್ಯ ಸಂಸ್ಥೆಗೆ ಶಾಖೆಗಳಾಗಿ ಮಾಡಲ್ಪಟ್ಟವು. ಡಾ| ಫರ್ಗುಸನ್, ಪ್ರಿನ್ಸೆಸ್, ಇಲಿಯಟ್ ಮುಂತಾದ ಆನೇಕ ವಿದ್ವಾಂಸರು, ಆಯಾ ಸಂಸ್ಥೆಗಳಿಂದ ಹೊರಡಿಸಲ್ಪಟ್ಟ ಮಾಸಪತ್ರಿಕೆಗಳಲ್ಲಿ ಲೇಖಗಳನ್ನು ಬರೆದಿರುವರು. ಆದರೆ ಶಿಲಾಲಿಪಿ ತಾಮ್ರಶಾಸನಗಳನ್ನು ಸಂಶೋಧಿಸುವುದೊಂದೇ ಆ ಸಂಸ್ಥೆಯ ಕೆಲಸವಿರಲಿಲ್ಲ. ಪೌರ್ವಾತ್ಯ ದೇಶಗಳಿಗೆ ಸಂಬಂಧಿಸಿದ ಯಾವದೇ ವಸ್ತುವಿರಲಿ, ಯಾವದೇ ಜ್ಞಾನವಿರಲಿ, ಅವೆಲ್ಲವನ್ನೂ ಸಂಶೋಧಿಸುವುದು ಅವರ ಕೆಲಸವಾಗಿತ್ತು. ಆದಕಾರಣ, ನಮ್ಮ ದೇಶದ ಭೂಗರ್ಭಶಾಸ್ತ್ರ, ಪ್ರಕೃತಿಶಾಸ್ತ್ರ ಮುಂತಾದ ನಾನಾತರದ ವಿಷಯಗಳ ಮೇಲೆ ಲೇಖಗಳು ಬಂದಿರುತ್ತವೆ. ನಡುನಡುವೆ ಶಿಲಾಲಿಪಿ, ತಾಮ್ರಶಾಸನಗಳ ವಿಷಯವಾಗಿಯೂ ಶೋಧನೆಗಳು ದೊರೆಯುತ್ತವೆ. ನಮ್ಮ ಇತಿಹಾಸಕ್ಕೆ ಸಂಬಂಧಿಸಿದ ಲೇಖಗಳು ಬಹುತರವಾಗಿ ಮುಂಬಯಿ ಸಂಸ್ಥೆಯವರು ತೆಗೆದ ಮಾಸಪತ್ರಿಕೆಯಲ್ಲಿಯೇ ವಿಶೇಷವಾಗಿ ದೊರೆಯುತ್ತವೆ, ಅದನ್ನು ವಿಸ್ತಾರವಾಗಿ ಮುಂದೆ ಕೊಡುವವು. ಸದ್ಯಕ್ಕೆ ನೆನಪಿನಲ್ಲಿಡತಕ್ಕ ಸಂಗತಿಯೇನೆಂದರೆ, ಈ ಸಂಸ್ಥೆಗಳಿಂದ ಹೊರಡುವ ಮಾಸಪತ್ರಿಕೆಗಳನ್ನು ಸಂಶೋಧಕರು ಆದಷ್ಟು ಮಟ್ಟಿಗೆ ಸಂಗ್ರಹಿಸಬೇಕೆಂಬುದು.
೧೮೭೨ ನೆಯ ಇಸವಿಯಲ್ಲಿ ಡಾ. ಬರ್ಗೆಸ್ ಎಂಬೊಬ್ಬ ವಿದ್ವಾಂಸರು ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಸ್ವತಂತ್ರವಾದ ಮಾಸಪತ್ರಿಕೆಯನ್ನು ತೆಗೆದರು. ಆಗಿನಿಂದ ಪುರಾಣವಸ್ತು ಸಂಶೋಧನ ವಿಷಯಕವಾದ ಲೇಖಗಳೆಲ್ಲವೂ ಈ ಮಾಸಪತ್ರಿಕೆಯಲ್ಲಿಯೇ ಹೆಚ್ಚಾಗಿ ಬರುತ್ತಿವೆ. ಈ ಮಾಸಪತ್ರಿಕೆಯಲ್ಲಿ ಶಿಲಾಲಿಪಿ ಮುಂತಾದುವುಗಳ ವಿಷಯಕ್ಕೆ ಲೇಖಗಳು ಬಂದಂತ ಮಿಕ್ಕ ವಿಷಯಗಳ ಸಂಬಂಧದಿಂದಲೂ ಲೇಖಗಳು ಬರುತ್ತವೆ. ಅದರ ಲಿಪಿಗಳನ್ನು ಸಂಶೋಧಿಸುವ ಕೆಲಸವು ಬೆಳೆದುದರಿಂದ ಸರಕಾರದವರು