ಪುಟ:ಕರ್ನಾಟಕ ಗತವೈಭವ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ನೆಯ ಪ್ರಕರಣ – ಕರ್ನಾಟಕದ ವಿಭೂತಿಗಳು.

೨೩


ನ್ನಡಿಗರೇ, ಉಜ್ವಲವಾದ ನಿಮ್ಮ ಭಾಷೆಯು ಒಂದಾನೊಂದು ಕಾಲಕ್ಕೆ ಉತ್ತರದಲ್ಲಿ ಬಹು ದೂರದ ವರೆಗೆ ಮನೆ ಮಾಡಿಕೊಂಡಿತ್ತೆಂಬ ಸಂಗತಿಯು ನಿಮ್ಮ ಹೃದಯವನ್ನು ಸ್ಪೂರ್ತಿಗೊಳಿಸಲಿ.

೪ನೆಯ ಪ್ರಕರಣ


ಕರ್ನಾಟಕದ ವಿಭೂತಿಗಳು

नांतोस्ति मम दिव्यानां विभूतीनां परंतप ।
एपतूद्देशतः प्रोक्तो विभूतेर्विस्तरो मया ॥

- ಗೀತಾ, ೧೦-೪೦.

ಎಲೆ ಪರಂತಪ ದಿವ್ಯವೆನಿಸುವ| ಹಲವು ಬಗೆಯ ವಿಭೂತಿವಿಭವಕೆ |
ಸಲೆ ಮೊದಲು ಕಡೆಯಿಲ್ಲವೆನ್ನಯ ಯೋಗಮಾಯೆಗಳ ||
ಚೆಲುವೆನಿಸುವ ವಿಭೂತಿವಿಸ್ತರ ಜಲಧಿಯೊಳು ನಾಂ ನಿನಗೆ ಪೇಳ್ವೆನು |
ಕೆಲವ, ಮಿಕ್ಕ ವಿಭೂತಿನಿಭವಕೆ ಲೆಕ್ಕವಿಲ್ಲೆಂದ ||

-ನಾಗರಸ

ನಾ

ವು ಹಿಂದಿನ ಪ್ರಕರಣದಲ್ಲಿ ವರ್ಣಿಸಿದ ಕರ್ನಾಟಕದ ವ್ಯಾಪ್ತಿಯನ್ನು ಓದಿ "ಅಹುದು, ನಿಮ್ಮ ಕರ್ನಾಟಕವು ಅಲ್ಲಿಂದ ಇಲ್ಲಿಯ ವರೆಗೆ ಹಬ್ಬಿರಬಹುದು. ಹಾಗಿದ್ದ ಮಾತ್ರಕ್ಕೆ ನೀವು ಅದರ ವಿಷಯವಾಗಿ ಅಭಿಮಾನಪಡುವುದು ಸರಿಯಾದೀತೋ? ಬರಿಯ ವಿಸ್ತಾರವನ್ನಷ್ಟೆ ತಗೆದುಕೊಂಡರೆ ಆಫ್ರಿಕೆಯೊಳಗಿನ 'ಸಹರಾ' ಬೈಲು ವಿಸ್ತಾರದಲ್ಲೇನು ಕಡಿಮೆಯಾಗಿರುವುದೋ ? ನಿಮ್ಮ ಕರ್ನಾಟಕವೂ ಹಾಗೇ ಇದ್ದರೆ ಅದರಲ್ಲಿ ಯಾರಿಗೆ ತಾನೇ ಅಭಿಮಾನವುಂಟಾಗಬೇಕು? ನಮ್ಮಲ್ಲಿ ದೊಡ್ಡ ದೊಡ್ಡ ಅರಸರಾಗಿ ಹೋದರು; ಕವಿಪುಂಗವರಾಗಿ ಹೋದರು, ಧರ್ಮಸ್ಥಾಪಕರಾಗಿ ಹೋದರು;- ಎಂದು ಸಾಮಾನ್ಯವಾಗಿ ಹೇಳಿದ ಮಾತ್ರಕ್ಕೆ ತೀರಿತೇ ? ಅವರು ಯಾರು, ಅವರು ಮಾಡಿದ ಮಹಾಕಾರ್ಯಗಳು ಯಾವುವು, ಎಂಬ ಜ್ಞಾನವು ನಮಗೆ ಬೇಡವೋ ? ಹಾಗೆ ಜ್ಞಾನವಿಲ್ಲದಿದ್ದರೆ ಅದು ಒಣ ಅಭಿಮಾನ