ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಂದುಗಿಡಿ

35

ಚೆ೦ದುಗಿಡಿ- "ಹೌದು, ಹೌದು.”

ಚೆಂದುಗಿಡಿಯ ಮನೆಯಿಂದ ಮೂವರೂ ಹಿಂದೆರಳಿದರು, ದಾರಿಯಲ್ಲಿ ಚೆನ್ನಯನು “ಅಣ್ಣ, ಈ ಚೆಂದುಗಿಡಿಯನ್ನು ನೋಡಿದಾಗ ಯಾರ ನೆನಪಾಗುತ್ತದೆ?” ಎಂದು ಕೇಳಿದನು.

ಕೋಟಿ- "ಅವನು ಗಿಡುಗನ ಹಾಗೆ ಕಾಣುತ್ತಾನೆ,

ಚೆನ್ನಯ-- "ಅವನ ಬಾಯಿ ನೆಗಳೆಯ ಬಾಯ ಹಾಗೆಯೇ ಇದೆ, ಜೋಯಿಸರು ಹೇಳಿದ ನೆಗಳೆಯ ನೆನಪು ಬರುತ್ತದೆ-ಅಲ್ಲವೆ ಅಣ್ಣ?”

ಅಷ್ಟರಲ್ಲಿ ಮನೆಯು ಹತ್ತಿರವಾಯಿತು; ಮೂವರು ಒಳಗೆ ಹೋದರು.

ಸೋಮವಾರ ಸೂರ್ಯೋದಯವಾಯಿತು. ಕೋಟಿಚೆನ್ನಯರು ಹೊತ್ತು ನೆತ್ತಿಗೆ ಬರುವುದರೊಳಗೆ ಮುಂಗೈಗೆ ಮುಟ್ಟುವಂತೆ ಗಂಧವನ್ನು ಲೇಪಿಸಿಕೊಂಡು, ಹಣೆ ತುಂಬುವಂತೆ ತುಳಸಿಕಟ್ಟೆಯ ಮೃತ್ತಿಕೆಯಿಂದ ನಾಮವನ್ನು ಎಳೆದುಕೊಂಡು, ತೊಡೆಯಗಲದ ಚಲ್ಲಣವನ್ನು ಉಟ್ಟು, ಬಲು ಉದ್ದದ ಪಟ್ಟೆಯ ದಟ್ಟಿಯನ್ನು ನಡುವಿಗೆ ಬಿಗಿದು, ಗಿಳಿಬಣ್ಣದ ಟೊಪ್ಪಿಗೆಯಿಂದ ತಲೆಯನ್ನು ಮುಚ್ಚಿ, ರಾಮ ಲಕ್ಷ್ಮಣ ಎಂಬ ಎರಡು ಕತ್ತಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕೇಮರ ಬಲ್ಲಾಳನ ದರ್ಶನಕ್ಕಾಗಿ ಹೊರಟರು.

ಅವರು ದಾರಿಯ ಮೇಲೆ ಮುಟ್ಟುವುದರೊಳಗೆ ಪಯ್ಯಬೈದ್ಯನು ಕಲ್ಲೆಡವಿ ಬಿದ್ದರೂ ಬಿದ್ದಂತೆ ತೋರಿಸಿಕೊಳ್ಳದೆ ಮುಂದೆ ಹೋಗುವವರನ್ನು ಕುರಿತು “ಒಂದು ಗಳಿಗೆ ತಡೆಯಿರಿ. ನನಗೆ ನಿನ್ನೆಯಿಂದ ಅಪಶಕುನಗಳೇ ಕಾಣುತ್ತವೆ. ರಾತ್ರಿ ಕೆಟ್ಟ ಕನಸು ಬಿತ್ತು – ಕಷ್ಟದಲ್ಲಿ ಬಿದ್ದು ಹೊರಳಾಡಿದ ಕಾಡಾನೆಯು ನನ್ನನ್ನು ಸೊಂಡಿಲಲ್ಲಿ ಹಿಡಿದು ನೆಲಕ್ಕೆ ಅಪ್ಪಳಿಸಿ ಬಿಟ್ಟಂತೆ ಕನಸು ಕಂಡೆ. ಎಚ್ಚೆತ್ತು ಹೊರಬರುವಾಗ ಚೆನ್ನಯನು ನಿದ್ದೆಯಲ್ಲಿ “ಅಣ್ಣಾ, ಕೋಟಿ' ಎಂದು ಕನಿಕರದಿಂದ ಕೂಗಿದ್ದನ್ನು ಕೇಳಿದೆ. ಈಗ ದಾರಿಯಲ್ಲಿ ಕಾಲಿಡುವಾಗ ಮುಗ್ಗರಿಸಿದಂತಾದೆ, ಆದುದರಿಂದ ನೀವು ಈ ಕೆಂದಾಳೆಯ ಪದ್ಮಕಟ್ಟೆಯ ಮೇಲೆ ಕುಳಿತುಕೊಂಡು ಅಪಶಕುನವನ್ನು ಕಳೆಯಲೇ ಬೇಕು” ಎಂದನು. ಹೀಗೆ ದುಶ್ಶಕುನಗಳನ್ನು ನಿವಾರಿಸಿಕೊಂಡು ಅವರು ಬೀಡನ್ನು ಮುಟ್ಟುವಾಗ ಹೊತ್ತು ಇಳಿಯಲಿಕ್ಕಾಯಿತು. ಇಳಿ ಹೊತ್ತಿನಲ್ಲಿ

3*