ಪುಟ:ಕ್ರಾಂತಿ ಕಲ್ಯಾಣ.pdf/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೦೪

ಕ್ರಾಂತಿ ಕಲ್ಯಾಣ


ವೇಷದಲ್ಲಿಯೂ ನೀವು ಕರ್ಮಠ ಬ್ರಾಹ್ಮಣರಾಗಿಯೇ ಉಳಿದಿದ್ದೀರಿ. ಸಂದೇಹಗ್ರಸ್ತರಾಗಿ ನಾವು ಕಾರ್ಯ ನಡೆಸಿದರೆ ಏನನ್ನು ಸಾಧಿಸಲೂ ಶಕ್ತರಾಗುವುದಿಲ್ಲ. ಇದು ಪ್ರಾರಂಭ ಮಾತ್ರ ಶರಣಧರ್ಮದ ವಿನಾಶಕ್ಕಾಗಿ ಇಂತಹ ಅನೇಕ ಘೋರಗಳಿಗೆ ನಾವು ಸಿದ್ದರಾಗಬೇಕಾಗುತ್ತದೆ,” ಎಂದು ಕಟಕಿಯಾಡಿದನು.

ತುಸುಹೊತ್ತು ರಥದಲ್ಲಿ ಮೌನ. ಆಮೇಲೆ ಕ್ರಮಿತನು, “ಶರಣಧರ್ಮದ ಮೇಲೆ ನಿಮಗೆ ಇಷ್ಟೊಂದು ವಿದ್ವೇಷವೇಕೆ?” ಎಂದು ಕೇಳಿದನು.

“ಕಸಪಯಾದಿ ದುರ್ಮಂತ್ರಿಗಳಿಂದ ಗಳಕುಳವಾದ ರಾಜ್ಯವನ್ನು ಅಳವಡಿಸಿ, ಅರಸೊತ್ತಿಗೆಯಲ್ಲಿ ಕಲಚೂರ್ಯರನ್ನು ಪ್ರತಿಷ್ಠಿಸಲು ನಾನು ಪಣತೊಟ್ಟಿದ್ದೇನೆ,” -ಎಂದು ಮಾಧವ ದಂಡನಾಯಕನು ಉತ್ತರಿಸಿದನು. ಆರು ವರ್ಷಗಳ ಹಿಂದೆ ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದಾಗ ಪ್ರಚಾರದಲ್ಲಿದ್ದ “ಕಸಪಯ” ಎಂಬ ಹೆಸರನ್ನು ಅವನು ಆಗಲೂ ಮರೆತಿರಲಿಲ್ಲ.

***

ಬಿಜ್ಜಳನೊಡನೆ ಸಂದರ್ಶನ ಮುಗಿಸಿಕೊಂಡು ಲಾವಣ್ಯವತಿ ಮಹಮನೆಗೆ ಹಿಂದಿರುಗಿದಾಗ ನಾಗಲಾಂಬೆ ಎದುರಾಗಿ, “ಇಷ್ಟು ಹೊತ್ತಾದರೂ ಬರಲಿಲ್ಲವೆಂದು ನಿನಗಾಗಿ ಕಾತರಗೊಂಡಿದ್ದೆ, ಲಾವಣ್ಯ. ಹೋದ ಕಾರ್ಯವೇನಾಯಿತು?” ಎಂದು ಕೇಳಿದನು.

ಲಾವಣ್ಯವತಿ ಮುಸುಕು ತೆಗದು ಮುಖದ ಮೇಲಿನ ಸುಟ್ಟ ಗಾಯವನ್ನು ತೋರಿಸಿದಳು.

“ಏಕೆ! ಏನಾಯಿತು?” –ನಾಗಲಾಂಬೆ ಕಾತರದಿಂದ ಕೇಳಿದಳು.

ಲಾವಣ್ಯವತಿ ಹೇಳಿದಳು : “ಬೆಂಕಿಯನ್ನು ಮುಟ್ಟಲು ಹೋದವರು ಕೈಸುಟ್ಟುಕೊಳ್ಳದೆ ಹಿಂದಿರುಗುವರೆ, ಅಕ್ಕಾ? ಬಿಜ್ಜಳರಾಯರು ಸಂತೆಯ ಹರದರಂತೆ ಚೌಕಾಸಿಗೆ ಪ್ರಾರಂಭಿಸಿದರು. ಮೊದಲಲ್ಲಿ ಅವರು ಮೂವರಲ್ಲಿ ನಾನು ಆರಿಸುವ ಇಬ್ಬರನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ನಾನು ನಿರಾಕರಿಸಿದೆ. ಕೊನೆಗೆ ಮೂವರನ್ನೂ ಬಿಡುವುದಾಗಿ ಹೇಳಿದರು. ಆದರೆ ಅದಕ್ಕೆ ಅವರು ಕೇಳಿದ ಬೆಲೆ, ನಾನು ಕೊಡುವಂತಹುದಾಗಿರಲಿಲ್ಲ, ಶರಣರು ಮೆಚ್ಚುವಂತಹುದಾಗಿರಲಿಲ್ಲ. ನಿರಾಶೆಯಿಂದ ಬರಿಗೈಯಲ್ಲಿ ಹಿಂದಿರುಗಿದೆ.”

ನಾಗಲಾಂಬೆ ಮುಂದೆ ಪ್ರಶ್ನಿಸಲಿಲ್ಲ. ವಾಸಗೃಹಕ್ಕೆ ಕರೆದುಕೊಂಡು ಹೋಗಿ, ಸುಟ್ಟ ಗಾಯಗಳಿಗೆ ಎಣ್ಣೆ ಹಚ್ಚಿ "ನೀನು ಇಲ್ಲಿಯೇ ಕೊಂಚ ಹೊತ್ತು ವಿಶ್ರಮಿಸಿಕೊಳ್ಳುತ್ತಿರು, ಲಾವಣ್ಯ. ಯಾರು ಬಂದು ತೊಂದರೆ ಕೊಡದಂತೆ ಹೇಳುತ್ತೇನೆ,”