ಪುಟ:ಕ್ರಾಂತಿ ಕಲ್ಯಾಣ.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೨೦

ಕ್ರಾಂತಿ ಕಲ್ಯಾಣ


ಆಶ್ಚರ್ಯ ಸಂತೋಷಗಳನ್ನು ಅದುಮಿಟ್ಟು, ಜೋಳಿಗೆಯಿಂದ ಎರಡು ಬಿಲ್ವದಳಗಳನ್ನು ತೆಗೆದು ಅಗ್ಗಳನ ಮುಂದಿಟ್ಟು “ನಾನು ಕೂಡಲ ಸಂಗಮಕ್ಕೆ ಯಾತ್ರೆ ಹೋಗುತ್ತೇನೆ. ಶ್ರೀಮಂತರು ದಯಮಾಡಿ ತಮ್ಮ ಕಾಣಿಕೆಯನ್ನು ಕೊಟ್ಟರೆ” -ಎಂದು ಅವನು ಕೈಗಳನ್ನು ಚಾಚಿ ಗಂಭೀರವಾಗಿ ನುಡಿದನು.

ಅಗ್ಗಳನು ಅಷ್ಟೇ ಗಂಭೀರವಾಗಿ, “ನೀವು ಯಾರು, ಅಯ್ಯನವರೇ ನಿಮ್ಮ ಶುಭನಾಮವೇನು ? ನೀವು ಹೋಗುತ್ತಿರುವುದು ಕೃಷ್ಣ ಘಟಪ್ರಭೆಗಳ ಸಂಗಮಕ್ಕೋ? ಕೃಷ್ಣ ಮಲಪ್ರಭೆಗಳ ಸಂಗಮಕ್ಕೋ?” ಎಂದು ಕೇಳಿದನು.

ಬ್ರಹ್ಮಶಿವ ಹೇಳಿದನು : “ಸದ್ಯದಲ್ಲಿ ನನ್ನ ಹೆಸರು ಹರೀಶರುದ್ರ. ಪೂರ್ವಾಶ್ರಮದಲ್ಲಿ ಬ್ರಹ್ಮಶಿವ ಪಂಡಿತನಾಗಿದ್ದೆ. ನನ್ನ ಗುರುಗಳು ಬ್ರಹ್ಮೇಂದ್ರ ಶಿವಯೋಗಿ. ಹಿಂದಿನ ಜನ್ಮದಲ್ಲಿ ಅವರು ನಿಜಗಲ್ಲಿನ ದುರ್ಗಾಧಿಪತಿ ಬೊಮ್ಮರಸರಾಗಿದ್ದರಂತೆ. ಅವರ ಗುರು ಅರಸಾದರೂ ದುರ್ಗಾಧಿಪತಿಯಲ್ಲ. ದುರ್ಗಾಧಿಪತಿಯಾದರೂ ಪಂಡಿತನಲ್ಲ. ಪಂಡಿತನಾದರೂ ನನ್ನಂತೆ ಅರ್ಥವಿಲ್ಲದೆ ಮಾತಾಡುವುದಿಲ್ಲ. ನಾನು ಹೋಗುತ್ತಿರುವುದು ತ್ರಿವೇಣೀ ಸಂಗಮಕ್ಕೆ. ನೀವು ಹೇಳಿದ ಮೂರು ನದಿಗಳು ಅಲ್ಲಿ ಸೇರುವುದೋ ಇಲ್ಲವೋ ಆ ಸಂಗಮನಾಥನೊಬ್ಬನಿಗೆ....”

ಬ್ರಹ್ಮಶಿವನ ಪ್ರವಚನ ಮುಗಿಯುವುದಿಲ್ಲವೆಂದು ತಿಳಿದು ಅಗ್ಗಳನು ಸಮೀಪಕ್ಕೆ ಹೋಗಿ ಕೈಯಿಂದ ಅವನ ಬಾಯಿ ಮುಚ್ಚಿ ಕೊಠಡಿಯೊಳಕ್ಕೆ ಎಳೆತಂದು ಬಾಗಿಲು ಹಾಕಿದನು. ಬಳಿಕ ಎದುರಿಗೆ ಕುಳ್ಳಿರಿಸಿಕೊಂಡು, “ನಾನು ರಾಜಗೃಹವನ್ನು ಬಿಟ್ಟಾಗಿನಿಂದ ಇದುವರೆಗೆ ಅಲ್ಲಿ ನಡೆದುದೆಲ್ಲವನ್ನೂ ದಯಮಾಡಿ ನನಗೆ ತಿಳಿಸಿರಿ, ಬ್ರಹ್ಮಶಿವ ಪಂಡಿತರೆ,” ಎಂದನು.

ಬ್ರಹ್ಮಶಿವನು ಹೇಳಿದನು : “ಅನುಕ್ರಮವಾಗಿ ಎಲ್ಲವನ್ನೂ ವಿವರಿಸಲು ನಾನೇನು ದಿನಚರಿ ಬರೆದಿಟ್ಟಿರುವೆನೆ, ಅಗ್ಗಳ? ನೆನಪಿನಲ್ಲಿರುವಷ್ಟನ್ನು ಹೇಳುತ್ತೇನೆ. ಜಗದೇಕಮಲ್ಲರಸರು ಈಗ ವೈರಾಗ್ಯನಿಧಿಯಾಗಿದ್ದಾರೆ. ಸ್ನಾನ ಪೂಜೆ ಜಪತಪ ಧರ್ಮೋಪದೇಶಗಳಲ್ಲಿ ದಿನವೆಲ್ಲ ಕಳೆಯುತ್ತಾರೆ. ಬ್ರಹ್ಮೇಂದ್ರ ಶಿವಯೋಗಿ ಅರ್ಥಾತ್ ಬೊಮ್ಮರಸರ ಪ್ರವಚನ ಈಗ ರಾಜಗೃಹದಲ್ಲಿ ಸಂಗೀತ ನರ್ತನಗಳಷ್ಟೇ ಜನಪ್ರಿಯವಾಗಿದೆ. ನೀವು ಹೋದ ಕೆಲವು ದಿವಸಗಳಲ್ಲಿಯೆ ಜಗದೇಕಮಲ್ಲರಸರು, ಗಣಿಕಾ ಪರಿವಾರದ ಹತ್ತು ಮಂದಿ ಹೆಗ್ಗಡಿತಿಯರು ಬೊಮ್ಮರಸರಿಂದ ಶರಣದೀಕ್ಷೆ ಪಡೆದರು. ಆಮೇಲೆ ಒಂದು ವಾರ ವೈಭವದ ದಾಸೋಹ ನಡೆಯಿತು. ಪ್ರತಿ ದಿನ ಸಾವಿರ ಮಂದಿ ಜಂಗಮರು ದಾಸೋಹಕ್ಕೆ ಬರುತ್ತಿದ್ದರು. ಬೊಮ್ಮರಸರ ಗಡ್ಡ