ಪುಟ:ಕ್ರಾಂತಿ ಕಲ್ಯಾಣ.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೨೬

ಕ್ರಾಂತಿ ಕಲ್ಯಾಣ


ಶಿಲಾಸನಗಳ ಮೇಲೆ, ಮನೆ ಮುಂದಿನ ಮೊಗಶಾಲೆಗಳಲ್ಲಿ, ಗಣಿಕಾವಾಸದ ಹೆಗ್ಗಡಿತಿಯರು ದಾಸದಾಸಿಯರು ಮಾತಾಡುತ್ತ ಕುಳಿತಿದ್ದರು. ಬ್ರಹ್ಮೇಂದ್ರ ಶಿವಯೋಗಿಗಳ ಅಂತೇವಾಸಿ ಹರೀಶರುದ್ರ ಅವರ ದೃಷ್ಟಿಯಲ್ಲಿ ಉಪಹಾಸದ ವಸ್ತುವಾಗಿದ್ದನು.

ವೇಷಧಾರಿ ಉಷಾವತಿಯನ್ನು ಕಂಡು ಅವರು ತಮ್ಮ ನಗೆಯಾದ 'ಅಣ್ಣ' ಬಂದನೆಂದು ತಿಳಿದು ಕಿಲಕಿಲ ನಕ್ಕರು. “ನಮಗೂ ಇಷ್ಟು ಪತ್ರಕೊಟ್ಟು ಹೋಗಿ ಅಣ್ಣಾವ್ರೆ, ನಾವೂ ಪೂಜೆ ಮಾಡ್ತೇವು,” ಎಂದು ಕೆಲವರು ಬೊಬ್ಬಿಟ್ಟರು. ಕೆಲವರು ಅವನ ನಡಿಗೆಯನ್ನು ಅನುಕರಿಸಿ ಗೆಳತಿಯನ್ನು ನಗಿಸಿದರು. ಇನ್ನು ಕೆಲವರು ಶೃಂಗಾರ ಗೀತಿಕೆಗಳನ್ನು ಗುನುಗುತ್ತ ಕೈಬೀಸಿ ಕರೆದರು.

ಉಷಾವತಿ ಇದೊಂದನ್ನೂ ಗಮನಿಸದೆ ಮುಂದೆ ಹೋಗುತ್ತಿದ್ದಂತೆ ಎಡವಿ ಬಿದ್ದಳು. ಜೋಳಿಗೆಯಲ್ಲಿದ್ದ ಬಿಲ್ವಪತ್ರೆಗಳು ಚೆಲ್ಲಿದವು, ಉಷಾವತಿ ಎದ್ದು ಕುಳಿತು ಚೆಲ್ಲಿದ ಪತ್ರೆಗಳನ್ನು ಆರಿಸಿಕೊಳ್ಳುತ್ತಿದ್ದಂತೆ ಹೆಂಗಸರು ಚಪ್ಪಾಳೆ ತಟ್ಟಿ ನಕ್ಕರು. ಕೆಲವರು ಹತ್ತಿರ ಬಂದು ಪತ್ರೆಗಳನ್ನು ಆರಿಸಿ ಕೊಡುವ ನೆವದಲ್ಲಿ ಉಷಾವತಿಯನ್ನು ಸುತ್ತುಗಟ್ಟಿ ಮುಂಡಾಸು ಕಪನಿಗಳನ್ನು ಎಳೆಯಲು ಮೊದಲು ಮಾಡಿದರು. ಬ್ರಹ್ಮ ಶಿವ ಅರ್ಥಾತ್ ಹರೀಶರುದ್ರನೊಡನೆ ಅವರ ಆ ಹುಡುಗಾಟ ಅವಕಾಶ ಸಿಕ್ಕಾಗಲೆಲ್ಲ ನಡೆಯುತ್ತಿತ್ತು.

ಈ ಲಜ್ಜೆಗೆಟ್ಟ ಹೆಂಗಸರ ಚೇಷ್ಟೆ ಹೀಗೇ ಇನ್ನು ಕೊಂಚಹೊತ್ತು ನಡೆದರೆ ತನ್ನ ಗುಟ್ಟು ಬಯಲಾಗುವುದೆಂದು ಉಷಾವತಿ ತಿಳಿದಳು. ಆದರೆ ಅವರಿಂದ ತಪ್ಪಿಸಿಕೊಳ್ಳುವುದು ಹೇಗೆ?

ಎಳೆದಾಟದಲ್ಲಿ ಉಷಾವತಿಯ ಮುಂಡಾಸು ಕೆಳಗೆ ಬಿದ್ದು, ಮುಡಿ ಬಿಚ್ಚಿದ ತಲೆಗೂದಲು ಹಾರಾಡಿತು. ಮೈಕೈಗಳನ್ನು ಮುಟ್ಟಿ ನೋಡುತ್ತಿದ್ದವಳೊಬ್ಬಳು “ಇದು ಹರೀಶ ರುದ್ರಯ್ಯನವರಲ್ಲ. ಯಾರೋ ಹೆಂಗಸು!” ಎಂದು ಗಟ್ಟಿಯಾಗಿ ಚೀರಿ ಹೇಳಿದಳು.

ಇನ್ನೊಬ್ಬ ಹೆಣ್ಣು ಮೊಗಶಾಲೆಯಿಂದ ದೀಪ ತಂದು ಉಷಾವತಿಯ ಮುಖಕ್ಕೆ ಹಿಡಿದಳು. ಉಷಾವತಿ ದೀಪವನ್ನು ತಳ್ಳಿ ಕೆಳಗುರುಳಿಸಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುವಷ್ಟರಲ್ಲಿ ಕಾವಲುಭಟರ ನಾಯಕನು ಗೊಂದಲ ನಡೆಯುತ್ತಿರುವುದನ್ನು ಕಂಡು ಓಡಿಬಂದು, “ಏನಾಯಿತು?” ಎಂದು ಕೇಳಿದನು. ನಾಲ್ಕಾರು ಮಂದಿ ಹೆಂಗಸರು ಉಷಾವತಿಯನ್ನು ಸುತ್ತುಗಟ್ಟಿ ಹಿಡಿದಿದ್ದರು.

ಹೆಗ್ಗಡಿತಿಯೊಬ್ಬಳು ಮುಂದೆ ಬಂದು ಹೇಳಿದಳು : “ಇವಳು ಯಾವಳೋ