ಪುಟ:ಕ್ರಾಂತಿ ಕಲ್ಯಾಣ.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೨೯

ಮುಖಗಳನ್ನು ನೋಡಿ ನೋಡಿ ನನಗೆ ಬೇಸರವಾಗಿದೆ. ನಗರದಿಂದ ಒಂದೆರಡು ಹೊಸ ಮುಖಗಳನ್ನು ಕರೆಸಲು ಏರ್ಪಡಿಸು," ಎಂದು ಕರ್ಣದೇವ ಹೇಳಿದ್ದನು.

ನಗರದ ಇಂದಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿರಲಿಲ್ಲ. ಮಧುವರಸಾದಿಗಳನ್ನು ಶೂಲಕ್ಕೇರಿಸಿದ್ದು, ಅದರ ಫಲವಾಗಿ ಶರಣರು ನಗರವನ್ನು ಬಿಟ್ಟು ಹೋಗಲು ನಿರ್ಧರಿಸಿರುವುದು, ಇವು ನಗರವಾಸಿಗಳನ್ನು ತಲ್ಲಣಗೊಳಿಸಿದ್ದವು. ಗಣಿಕೆಯರು ಮುಚ್ಚಿದ ಬಾಗಿಲು ತೆಗೆಯುತ್ತಿರಲಿಲ್ಲ. ಚಿಲ್ಲರೆ ಹೆಣ್ಣುಗಳು ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಹೊಸ ಮುಖಗಳನ್ನು ಎಲ್ಲಿಂದ ಕರೆಸಲಿ ಎಂದು ಮನೆಹೆಗ್ಗಡೆ ಚಿಂತಿಸುತ್ತಿದ್ದನು. ಕಾವಲು ಭಟರ ನಾಯಕನು ತರುಣಿಯೊಬ್ಬಳನ್ನು ಸಂಗಡ ಕರೆದುಕೊಂಡು ಒಳಗೆ ಬಂದದ್ದನ್ನೂ ಅವನು ಗಮನಿಸಲಿಲ್ಲ.

ಬೆಳ್ಳಿಯ ಮೋಡಗಳ ನಡುವೆ ಬೆಳಗುವ ಚಂದ್ರಲೇಖೆಯಂತೆ ಕಾಣಿಸಿತು ಹೆಗ್ಗಡೆಗೆ ಉಷಾವತಿಯ ಮುಖಮಂಡಲ. ಚಿಂತೆ ಭೀತಿ ಉಪಹಾಸಗಳ ಸಮ್ಮಿಶ್ರಣದಿಂದ ವಿಚಲಿತವಾಗಿದ್ದ ಉಷಾವತಿಯ ಮನಸ್ಸು ವಿಷಣ್ಣತೆಯ ಮೃದುಹಾಸವೊಂದನ್ನು ಸಜ್ಜುಗೊಳಿಸಿತ್ತು ಅದಕ್ಕೆ ನಾನು ಯೋಚಿಸುತ್ತಿದ್ದ ಸಮಸ್ಯೆಯ ಪರಿಹಾರಕ್ಕಾಗಿ ಗಗನದಿಂದ ಇಳಿದು ಬಂದಳೇ ಈ ಹೆಣ್ಣು! ಎಂದು ಹೆಗ್ಗಡೆ ಅಚ್ಚರಿಯಿಂದ, "ಯಾರು ಈ ಹೆಂಗಸು?" ಎಂದು ನಾಯಕನನ್ನು ಕೇಳಿದನು.

ನಾಯಕನು ತೋಟದಲ್ಲಿ ನಡೆದುದನ್ನು ವಿವರಿಸಿ, "ಮೂಕಳೆಂದು ಕಾಣುತ್ತದೆ. ಇವಳ ವಿಚಾರದಲ್ಲಿ ಒಡೆಯರ ಆಜ್ಞೆಯೇನು?" ಎಂದು ಮುಗಿಸಿದನು.

ನಾಯಕನು ಮಾತಾಡುತ್ತಿದ್ದಂತೆ ಹೆಗ್ಗಡೆಯ ಕಣ್ಣುಗಳು ರಾಜಾಂತಃಪುರದ ತಜ್ಞ ಕಾರ್ಯಕರ್ತನಿಗೆ ಉಚಿತವಾದ ಚತುರತೆಯಿಂದ ಉಷಾವತಿಯ ಗುಣದೋಷಗಳನ್ನು ಪರಿಶೀಲಿಸಿ ಪಟ್ಟಿ ಮಾಡಿದವು. ತರುಣಿ, ರೂಪವತಿ, ಅಂಗಾಂಗಗಳು ಚೆನ್ನಾಗಿ ಬೆಳೆದು ಸೌಷ್ಟವ ಲಾವಣ್ಯಗಳಿಂದ ಕೂಡಿವೆ. ವಿಲಾಸ ಜೀವನದ ಪರಿಚಯವಿರಲೂ ಸಾಕು. ಇಷ್ಟೆಲ್ಲ ಗುಣಗಳಿದ್ದೂ ಮೂಕಳೆಂಬ ಒಂದೇ ದೋಷಕ್ಕಾಗಿ ಉಪೇಕ್ಷಿಸಲ್ಪಟ್ಟಿದ್ದಾಳೆ. ಇಂದಿನ ಪಾನಗೋಷ್ಠಿಗೆ ಇವಳನ್ನೇ ಏಕೆ ಕಳುಹಿಸಬಾರದು? ಕರ್ಣದೇವರಸರು ಅಪೇಕ್ಷಿಸಿದ್ದು ಹೊಸ ಮುಖ. ಇವಳಲ್ಲಿ ಎಲ್ಲವೂ ಹೊಸತಾಗಿದ್ದು ಮೂಕತ್ವ ಆ ಹೊಸತನಕ್ಕೆ ವಿಶೇಷ ರೂಪ ಕೊಟ್ಟಿದೆ. ವಾಚಾಲಿ ಹೆಂಗಸರನ್ನು ಜಗದೇಕಮಲ್ಲರಸರು ಯಾವಾಗಲೂ ಒಪ್ಪುತ್ತಿರಲಿಲ್ಲ. ನಾನು ಇವಳನ್ನು ಅಲಂಕರಿಸಿ ಕರೆದುಕೊಂಡು ಹೋಗುವಷ್ಟರಲ್ಲಿ ಕರ್ಣದೇವರಸರು ಕುಡಿದು ಅಮಲೇರಿ, ಸಂಗಡಿದ್ದ ವ್ಯಕ್ತಿ ಹೆಣ್ಣೋಗಂಡೋ ಎಂಬುದನ್ನೂ ತಿಳಿಯುವ