ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
xiii

ಮೊದಲ ಮುದ್ರಣದ ಮಾತು

ಕೃತಜ್ಞತೆಗಳು


ಈ ಕೃತಿಯಲ್ಲಿಯ ಹೆಚ್ಚಿನ ಭಾಗಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅನ್ಯ ಭಾಷೆಗೆ ಅನುವಾದಗೊಂಡಿವೆ. ಕೆಲ ಭಾಗಗಳು ಪಠ್ಯ ಪುಸ್ತಕದಲ್ಲೂ ಸೇರಿವೆ; ಈಗ ಹೀಗೆ ಕೃತಿ ರೂಪದಲ್ಲಿ ಹೊರಬರುವ ಮುನ್ನವೇ ವಿಭಿನ್ನ ನೆಲೆಯಲ್ಲಿ ಪ್ರಕಟಗೊಳ್ಳಲು ಸಹಕರಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುವೆ.

ಇದು ಕೃತಿ ರೂಪದಲ್ಲಿ ಬೇಗನೇ ಹೊರಬರಬೇಕೆಂದು ಆಸಕ್ತಿ ವಹಿಸಿ ಬರವಣಿಗೆಯ ಬಗ್ಗೆ ಆಗಾಗ ವಿಚಾರಿಸಿ ಚರ್ಚೆಗೆಳೆಯುವ ಸ್ನೇಹಿತ ಪಟ್ಟಾಭಿರಾಮ ಸೋಮಯಾಜಿ ಇವರಿಗೆ, ಮತ್ತು ಈ ಕೃತಿಯನ್ನು ಹೊರತರಲು ಸಂತೋಷದಿಂದ ಮುಂದಾಗಿರುವ ಅಕ್ಷರ ಪ್ರಕಾಶನಕ್ಕೆ ತುಂಬು ಮನದ ನೆನಹುಗಳು ಸಲ್ಲುತ್ತವೆ.

ಮುದ್ರಣದ ಬಳಗದವರಿಗೂ ನನ್ನ ಕೃತಜ್ಞತೆಗಳು.


ದ್ವಿತೀಯ ಮುದ್ರಣಕ್ಕೆ ಕೆಲ ಮಾತು
'ಕನ್ನಡದ ಮೊದಲ ದಲಿತ ಆತ್ಮಕತೆ' ಎಂಬ ಪಟ್ಟವನ್ನು ಕಟ್ಟಿಸಿಕೊಂಡಿರುವ ಈ ಕೃತಿ, ಈಗ ಎರಡನೆಯ ಮುದ್ರಣದಲ್ಲಿ ಹೊರಬರುತ್ತಿರುವುದು ಸಂತಸದ ಸಂಗತಿ. ಈ ಕೃತಿಯ ಬೇಡಿಕೆಯನ್ನು ಗಮನಿಸಿದರೆ, ತುಂಬ ತಡವಾಗಿಯೇ ದ್ವಿತೀಯ ಮುದ್ರಣಕ್ಕೆ ಮುಂದಾದೆ ಎನಿಸುತ್ತದೆ. ಈಗೆ ಅಭಿರುಚಿ ಪ್ರಕಾಶನದ ವತಿಯಿಂದ ಹೊರ ಬರುತ್ತಿರುವುದಕ್ಕೆ ಆರಂಭದಲ್ಲಿಯೇ ಪ್ರಕಾಶಕರಾದ ಶ್ರೀಯುತ ಗಣೇಶ್ ಇವರಿಗೆ ಸ್ಮರಿಸಬೇಕು.

ಇತ್ತೀಚಿನ ದಿನಗಳಲ್ಲಿ 'ಆತ್ಮಕಥೆ ಸಾಹಿತ್ಯ ಕೃತಿಗಳಲ್ಲ' ಎಂಬ ಮಾತು ಅಬ್ಬರದಿ ಬರುತ್ತಿದೆ. ಮೊದಲನೆಯದಾಗಿ, ಆತ್ಮಕಥೆ ಸಾಹಿತ್ಯ ಕೃತಿ ಹೌದು ಅಥವಾ ಅಲ್ಲ ಎನ್ನುವುದಕ್ಕಿಂತ, ಈ ಪ್ರಶ್ನೆ ಈಗ ಯಾಕೆ ತಲೆ ಎತ್ತಿದೆ ಎನ್ನುವುದು ಮುಖ್ಯ. ಕನ್ನಡದಲ್ಲಿ ಬಂದಿರುವಂಥ ದಲಿತ ಆತ್ಮಕಥೆಗಳೇ ಎರಡು. ಈ ಎರಡು ಆತ್ಮಕಥೆಗಳಿಗೆ ಪ್ರತಿಕ್ರಿಯೆಯಾಗಿ ಈ ಪ್ರಶ್ನೆ ಎದ್ದಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆರಂಭದಲ್ಲಿ ದಲಿತ ಕಾವ್ಯಕ್ಕೆ 'ಇದು ಕಾವ್ಯವೇ ಅಲ್ಲಾ' ಎಂದಂತೆ ಈಗ 'ಆತ್ಮಕಥೆ ಸಾಹಿತ್ಯವಲ್ಲ' ಎಂಬುದರ ಸರದಿ! ಇಂಥವರಿಗೆ ಕಾದಂಬರಿ ಕೂಡ ಒಂದು ಸಂಶೋಧನೆಯ ಕೃತಿಯಾಗಬಹುದು ಎಂಬ ವಿಚಾರ ಆಘಾತವನ್ನುಂಟು ಮಾಡಬಹುದು.