ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಗೌರ್ಮೆಂಟ್ ಬ್ರಾಹ್ಮಣ


ಎಮ್ಮೆಗೆ ಏನಾಗಿತ್ತೋ ಏನೋ ಆವತ್ತು ಬೆಳಿಗ್ಗೆಯಿಂದ ಒಂದೇ ಸಮನ ನರಹರಿದುಕೊಳ್ಳುವಂತೆ ವದರುತ್ತಿತ್ತು. ನನ್ನ ತಾಯಿ ಹಾಗೆ ಹೊಡೆದುಕೊಂಡು ಹೋಗಿದ್ದಳು.

"ಅಲ್ಲೆಲ್ಲ ಓಡ್ಯಾಡಿ ಬಿಟ್ತು, ನನಗೂ ಒಡ್ಯಾಸ್ತು

ಅದರ ಹಿಂದ ಹಿಂದ ಓಡ್ಯಾಡಿ

ನನ್ನ ಕಾಲೆಲ್ಲ ಹ್ವಾದು........

ಇದರ ಬಾಯಾಗ ಮಣ್ಣ ಹಾಕಲಿ......."

ಎಂದು ಅಜ್ಜಿಗೆ ಕೇಳುವ ಹಾಗೆ ಗೊಣಗುತ್ತಿದ್ದಳು ನಮ್ಮವ್ವ. ಜೊತೆಗೆ ಇದು "ಬೆದೆಗೆ ಬಿದ್ದಿದೆ" (ಗರ್ಭಧಾರಣೆಗೆ ಬಂದಿದೆ) ಎಂದು ಗುರುತಿಸದೇ ಇರಲಿಲ್ಲ.

ಬೆದೆಗೆ ಬಿದ್ದ ಎಮ್ಮೆಯ ಮೇಲೆ ಹಾರಿಸಲು ನಮ್ಮೂರಲ್ಲಿ ಕೋಣವಿರಲಿಲ್ಲ. ನಮ್ಮೂರಿನ ಪಕ್ಕದ ಎರಡು ಹಳ್ಳಿಗಳಲ್ಲಿ, ಅಂದರೆ ಕೊಂಟೋಜಿ ಮತ್ತು ಬಸರಕೋಡ ಎಂಬ ಹಳ್ಳಿಗಳಲ್ಲಿ ಎರಡು ಕೋಣಗಳಿದ್ದವು. ಈ ಕೋಣಗಳನ್ನು ಊರ ಪ್ರಮುಖರೇ ಸಾಕಿದ್ದರು. ಬಯಲು ಸೀಮೆಯಲ್ಲಿ ಕೋಣ ಸಾಕುವುದು ಎಂದರೆ ವ್ಯರ್ಥ. ಹೊಲಗಳಲ್ಲಿ ಹೂಡಲೂ ಬಾರದು. ಏಕೆಂದರೆ, ಬಿಸಿಲು ಸಹಿಸುವ ಸಾಮರ್ಥ್ಯ ಕೋಣಗಳಿಗೆ ಇರುತ್ತಿರಲಿಲ್ಲ. ಹೀಗಾಗಿ ಸಾಮಾನ್ಯ ಜನ ಕೋಣ ಸಾಕುತ್ತಿರಲಿಲ್ಲ. ಊರ ಗೌಡರು, ದೇಸಾಯಿಯವರಿಗೆ ಕೋಣ ಸಾಕುವುದು ಎಂದರೆ ಪ್ರತಿಷ್ಠೆಯೇ ಆಗಿತ್ತು. (ಇದಕ್ಕೆ ಅನುಗುಣವಾಗಿ ಒಂದು ಗಾದೆ ಮಾತು ಇದೆ : ಗೌಡರ ಕ್ವಾಣ ತಾನು ಹಾರಲಿಲ್ಲಂತ ಮಂದಿಗೂ ಹಾರಿಸಿಗೊಡಲಿಲ್ಲಂತ!) ಇವರುಸಾಕಿದ ಕೋಣಗಳ ಕೆಲಸವೆಂದರೆ, ಬೆದೆಗೆ ಬಿದ್ದ ಎಮ್ಮೆಯ ಮೇಲೆ ಹಾರುವುದು. ಕಾಲು ಕೆದರಿ "ಬುಸ್ಸು"ಗುಟ್ಟುವುದು. ಆ ಊರ ಎಮ್ಮೆಗಳ ರಾಜನಷ್ಟೇ ಆಗಿರದೇ ಆತ ಸುತ್ತಲೂರಿನ ಎಮ್ಮೆವ್ವಗಳ ಅರಸನೂ ಆಗಿರುತ್ತಿದ್ದ.

ಸಾಮಾನ್ಯವಾಗಿ ಊರಲ್ಲಿ ಹುಟ್ಟುವ ಕೋಣಗಳನ್ನೆಲ್ಲ ದ್ಯಾಮವ್ವ, ದುರುಗವ್ವ, ಮರಗವ್ವನಂತಹ ದೇವತೆಗಳೇ ನುಂಗುತ್ತಿದ್ದವು. ಇಲ್ಲವೇ ಕಸಾಯಿಖಾನೆಯ ಬಾಗಿಲಲ್ಲಿ "ಚರಮ ಗೀತೆ"ಯನ್ನು ಹಾಡುತ್ತಿದ್ದವು. ಹೀಗಾಗಿ ಎಮ್ಮೆಯ ಗಂಡು ಸಂತತಿಗೆ ಉಳಿಗಾಲವೇ ಇರಲಿಲ್ಲ. ಆದ್ದರಿಂದ ಗೌಡರ, ದೇಸಾಯಿಯರ ಕೋಣಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಬಸರಕೋಡಕ್ಕಿಂತ ಕೊಂಟೋಜಿ ನಮ್ಮೂರಿಗೆ ಹತ್ತಿರ. ಹೀಗಾಗಿ ಎಮ್ಮೆಯನ್ನು ಕೊಂಟೋಜಿಗೆ ಹೊಡೆದುಕೊಂಡು ಹೋಗುವುದು ಎಂದು ತೀರ್ಮಾನವಾಗಿತ್ತು. ಆದರೆ ಆಗಲೇ ಸಂಜೆಯಾಗಿತ್ತು. ಕೊಂಟೋಜಿ ತಲುಪುವುದರಲ್ಲಿಯೇ ರಾತ್ರಿಯಾಗುತ್ತದೆ, ರಾತ್ರಿ ಎಮ್ಮೆಯ ಮೇಲೆ ಕೋಣ ಬಿಡುವುದಿಲ್ಲ. ಆದ್ದರಿಂದ ಬೆಳಿಗ್ಗೆ ಹೋಗುವುದು ಎಂದು ತೀರ್ಮಾನವಾಯಿತು. ಈ ನಿರ್ಧಾರಗಳನ್ನೆಲ್ಲ ಆಸಕ್ತಿಯಿದ ಆಲಿಸುತ್ತಿದ್ದ ನಾನು, ಕೊಂಟೋಜಿಗೆ ಹೋಗುವ ಮನಸ್ಸು ಮಾಡಿದೆ. ಆದ್ದರಿಂದ ಅಜ್ಜಿ ಎಲ್ಲೆಲ್ಲಿ