ಪುಟ:ನಡೆದದ್ದೇ ದಾರಿ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೬ ನಡೆದದ್ದೇ ದಾರಿ ಬಂದೀರಿ, ಒಂದು ಜೋಡು ಹೊಲಿಸಿ ಬಿಡ್ರಿ. ನೀವು ಕೊಟ್ಟ ಆರಿವಿ ಹಾಕ್ಕೊಂಡು ಬೆಳೆದಾವ ನನ್ನ ಮಕ್ಕಳು. ಸಂಜೆ ವಾಕಿಂಗ್ ಮುಗಿಸಿ ಬಂದ ತಮ್ಮ ಹೇಳುತ್ತಾನೆ, 'ಹಿತ್ತಲ ಕಡೆಯ ಮಾಳಗಿ ಬೀಳಲಿಕ್ಕಾಗೇದ ಅಕ್ಕಾ, ರಿಪೇರಿ ಮಾಡಸದಿದ್ರ ಮಳೆಗಾಲ ಕಳೆಯೋದು ಕಠಿಣ ಆದ. ಈ ತುಟ್ಟಿ ಕಾಲದಾಗ ಎಲ್ಲಾ ನಿಭಾಯಿಸೋದು ಅಂದ್ರ -ಹೀಗೇ ಕೊನೆಯಿಲ್ಲದ ಗೋಳಿನ ಕತೆ. ದೇವರೇ ಯಾಕೆ ಬಂದೆ ಇಲ್ಲಿಗೆ ಎನ್ನಿಸಿ ಬಿಡುತ್ತದೆ. ಹೇಗೋ ಎರಡು ದಿನ ಕಳೆದು ತಿರುಗಿ ಊರಿಗೆ ಹೊರಡುತ್ತಾಳೆ ತಾನು, ಸ್ವಲ್ಪ ಹಣ ತಮ್ಮನ ಕೈಯಲ್ಲಿಟ್ಟು, 'ಮತ್ತೆ ಊರಿಗೆ ಹೋಗಿ ಕಳಿಸುತ್ತೇನೆಂದು ಆಶ್ವಾಸನೆ ಕೊಟ್ಟು, ತುಂಬಿದ ಬೇಸರದಿಂದ ಟ್ರೇನು ಹತ್ತುತ್ತಾಳೆ. ಲೋಂಡಾ ಬಂದೀತೇ ಎಂದು ಕಾಯುತ್ತಾಳೆ. “ಬಾಯಿ ಸಾಬ್ಕೊ ಖಾನಾ ಲಾವ್ರ ?' ಎಂದು ಕೇಳುತ್ತಾನೆ ಕಿಡಿಕಿಯಾಚೆಯಿಂದ ಆ ಮಿಠಾಯಿವಾಲಾ. ಅಷ್ಟೇ ಅವನು ಮಾತಾಡುವುದು. ತಾನು “ಹೂ" ಅಂದ ಕೂಡಲೇ ಮಿಠಾಯಿಯ ಗಾಡಿ ಅಲ್ಲೇ ಬಿಟ್ಟು ಓಡುತ್ತಾನೆ.... ತಿರುಗಿ ತನ್ನ ಟ್ರೇನು ಹೊರಟಾಗ ಪ್ಲಾಟ್‌ಫಾರ್ಮಿನ ತುದಿಗೆ ನಿಂತು ಕೈ ಬೀಸುತ್ತಾನೆ. “ನಿಂದೂ ತವರಮನೀ ಸಲುವಾಗಿ ಭಾಳ ಅಂತಃಕರಣ. ಇಷ್ಟು attachment ಇರವು ಆಗದೀ ಕಡಿಮಿ" -ಅನ್ನುತ್ತಾನೆ ಗಂಡ. -ಹತ್ತು ಗಂಟೆ. ಬಿಸಿಲು ಏರತೊಡಗಿದೆ. ಕಿಡಿಕಿಗುಂಟ ಒಳಗೆ ಇಳಿದುಬಂದಿದೆ. ಕಿಡಿಕಿ ಮುಚ್ಚಲು ಮನಸ್ಸಿಲ್ಲ. “ಬಿಸಿಲು ನಿಮಗೆ ಒಳ್ಳೇದಲ್ಲ " -ಮೊನ್ನೆ ಹೇಳಿದ್ದರು ಡಾಕ್ಟರು ತನಗೆ, ಬಹಳ ಆತ್ಮವಿಶ್ವಾಸದ ಮನುಷ್ಯ ಆ ಡಾಕ್ಟರು. ಸತೀಶನ ಆಪ್ತ ಗೆಳೆಯನಂತೆ. ಹಚ್ಚಹ, ಹೇಗೆ ಗೋಳುಗುಟ್ಟಿಸಿದ್ದೆ ಅವನನ್ನು ತಾನು ಹತ್ತು ವರ್ಷಗಳ ಹಿಂದೊಮ್ಮೆ ! ಹತ್ತು ವರ್ಷಗಳ ಹಿಂದೆ ಮೊದಲ ಸಲ ತಾನು ಬಸಿರಿಯಾದಾಗ ಸತೀಶನಿಗಿಂತ ಹೆಚ್ಚು ಸಂಭ್ರಮಪಟ್ಟಿದ್ದ ಅವನು. “ನಮ್ಮ ಸತೀಶಗ ಮಕ್ಕಳ ಮ್ಯಾಲೆ ಭಾಳ ಪ್ರೀತಿ ಭಾಭಿ. ನೀವು ನಿಮ್ಮ ಸಲುವಾಗಿ ಭಾಳ ಕಾಳಜಿ ತಗೋಬೇಕು. ದಿನಾ ತಪ್ಪದೆ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದ ಅವನು. “ಎಲ್ಲಾ ನಿನ್ನ ಜವಾಬ್ದಾರಿ ನೋಡಪಾ" ಎನ್ನುತ್ತಿದ್ದ ಸತೀಶ. ಮುಂದೆ ನಾಲ್ಕು ತಿಂಗಳ ನಂತರ ಒಂದು ದಿನ ಆಕಸ್ಮಿಕವಾಗಿ ಗರ್ಭಪಾತವಾದಾಗ ಸತೀಶ ಕಂಗೆಟ್ಟು ತಲೆಮೇಲೆ ಕೈಹೊತ್ತು ನಿರ್ಜಿವನಂತೆ ಕೂತಿದ್ದ. 'ಏನಾದರೂ ಅಪಥ್ಯ ಮಾಡಿದಿರಾ ಭಾಭಿ ?' ಎಂದು ಉತ್ಕಂಠಯಿಂದ ಕೇಳಿದ್ದ ಈ ಡಾಕ್ಟರು. 'ಇಲ್ಲವಲ್ಲ' – ಎಂದಿದ್ದೆ, ವಿಜಯದ ಆನಂದದಿಂದ. ಆ ಆಘಾತದಿಂದ