ಪುಟ:ನಡೆದದ್ದೇ ದಾರಿ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಳ್ಳುಗಳು/ಮುಳ್ಳುಗಳು

೧೭

ಬ್ಯಾರೆ ಯಾರ್ನರ ಸಿಲೆಕ್ಟ ಮಾಡೀರೇನು?"
-ಗಂಭೀರವಾಯಿತು ಶಾಂತಿಯ ಧ್ವನಿ,"ಇಲ್ಲ,ಅಂಥಾ ಯೋಗ್ಯರು ಇನ್ನೂ
ಯಾರೂ ಕಣ್ಣಿಗೆ ಬಿದ್ದಿಲ್ಲ."
"ಹಂಗಾರ ನನ್ನ ಪ್ರಪೋಜಲ್ ಎಕ್ಸೆಪ್ಟ ಆಧಾಂಗs ?"- ವಡಗಾಂವಕರನ
ಧ್ವನಿಯಲ್ಲಿ-ಕಣ್ಣಲ್ಲಿ ಉತ್ಸಾಹವೋ ಮತ್ತೇನೋ ಮಿಂಚುತ್ತಿತ್ತು.
"ನೋಡೋಣ," ಎಂದವಳೇ ರ್‍ಯಾಕೇಟನ್ನು ಬೀಸಿ ಒಗೆದು ಹೊರಟುಬಿಟ್ಟಳು.
ಯಾಕೋ ಎಲ್ಲರ ಮೇಲೂ ಅಗಾಧ ಸಿಟ್ಟು ಬರತೊಡಗಿದೆ....
ದರಿದ್ರ ಫಿಲ್ಮಶೋ. ಯಾಕಾದರೂ ನೋಡಲು ನಿಂತೆನೋ ಎನಿಸುತ್ತದೆ..ಇದು
ಮುಗಿಯುವುದೇ ಇಲ್ಲವೆ ? ಅರ್ಥಕ್ಕೆ ಎದ್ದರೆ ಹೇಗೆ? ಬೇಡ,ಇನ್ನೂ ಸ್ವಲ್ಪ
ಕತ್ತಲಾಗಲಿ....
"ನಿಮಗ ಸುಮ್ನs ತ್ರಾಸು."- ಹೊರಡುವಾಗ ದೇಸಾಯಿಗೆ ಹೇಳಿದಳು
ಶಾಂತಿ.
"ಛೇ, ತ್ರಾಸೆಲ್ಲೀದು? ಹತ್ತು ಮಿನಿಟಿನ ದಾರಿ.ಅರ್ಧಾ ಮೈಲೂ ಆಗೊದಿಲ್ಲ
ನಿಮ್ಮ ಹಾಸ್ಟೆಲು. ನಿಮ್ಮ ಸಲುವಾಗಿ ಇಷ್ಟ ಮಾಡೂದೇನು ಭಾಳs?"
-ಇದಕ್ಕೇನೆಂದು ಉತ್ತರಿಸುವುದು? ಯಾಕೋ ಎದೆ ಹಾರತೊಡಗಿದೆ.
ಕತ್ತಲದಾರಿ. ದೇಸಾಯಿ ಒಳ್ಳೆಯವನು ಖರೆ, ಆದರೂ ಗಂಡಸರನ್ನು
ನಂಬಬಾರದು. ದಾರಿಯಲ್ಲಿ ತಪ್ಪಿ ಏನಾದರೂ ಆದರೆ...ಛೇ, ಅವನಿಗೆಲ್ಲಿ ಅಂತಹ
ಧೈರ್ಯವಿದೆ? ಇದು ತನ್ನದೇ ಭ್ರಮೆ.
('ಎಷ್ಟ ಕಲಿತರೇನು, ಎಷ್ಟೇ ದೊಡ್ಡ ಕೆಲಸ ಇದ್ದರೇನು, ಬೇಕಾದಂಥಾ
ಸೋಶಿಯಲ್ ಪೊಜಿಶನ್ ಇದ್ದರೇನು, ಹೆಣ್ಮಕ್ಕಳು ಒಬ್ಬೊಬ್ಬರs ಇರೂದಂದ್ರ ಭಾಳ
ಕಠಿಣ ಆದನವಾ ಶಾಂತೂ. ದೂರ ಇರಾಕಿ. ನಿನ್ನ ದೇವರs ಕಾಯಬೇಕು'-ತಾನು
ನೌಕರಿಗೆಂದು ಊರು ಬಿಟ್ಟು ಬರುವಾಗ ಅಂದಿದ್ದರು ಅಪ್ಪ. ಹ್ಹ, ಅವರಿಗೇನು ಗೊತ್ತು
ಕತ್ತಲಲ್ಲಿಯ ವಾಕಿಂಗಿನ ಮಜಾ..')
"ದಿನಾ ಕಾಲೇಜಿನ್ಯಾಗ ಹಿಂಗ ಫಿಲ್ಮ ಶೋ ಇಟ್ಟರೆ ಹ್ಯಾಂಗಾದೀತು?"
-ದೇಸಾಯಿ ಕೇಳುತ್ತಿದ್ದ.
ಅಂದರೆ ದಿನಾ ತನ್ನನ್ನು ಹೀಗೆ ಕಳಿಸಲಿಕ್ಕೆ ಬರುತ್ತಾನಂತೇನು? ಇವತ್ತು ಇವನಿಗೆ
ಏನೋ ಆಗಿದೆ. ಏನೇನೋ ಮಾತಾಡುತ್ತಿದ್ದಾನೆ. ಎಲ್ಲಿಗೆ ಮುಟ್ಟುವನೋ
ನೋಡಬೇಕು. ಹೇಗೂ ಹಾಸ್ಟೆಲು ಇನ್ನೂ ದೂರವಿದೆ.
"ಅಂದರ ಇದರ ಮೂಲಕ ನಮ್ಮ ಹುಡುಗರಿಗೆ ಬೌದ್ಧಿಕ ಶಿಕ್ಷಣ