ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಿಡುಗಡೆ / ನಿರಾಕರಣೆ
೨೬೯

"ಕುಮಾರ ಭರತನಿಗೂ ಆ ಆಗಂತುಕ ಮಹಾಪುರುಷನಿಗೂ ಆಶ್ಚರ್ಯವೆನಿಸುವಷ್ಟು ಹೋಲಿಕೆ ಇದೆ ದೇವಿ, ನಿಜವಾಗಿಯೂ ಆತ ಮಹಾರಾಜ ದುಷ್ಯಂತನೇ ಇರಬೇಕು. ನೀನೇಕೆ ಹೀಗೆ ಅಲ್ಲಾಡದೆ ಕೂತಿರುವೆ ದೇವಿ ? ಬೇಗ ಎದ್ದು ಬರಬಾರದೇ?" -ಸುವ್ರತೆಗೆ ಆತುರ, ಆತಂಕ.

ಮಹಾರಾಜ ದುಷ್ಯಂತ! ಕಾಡಿನಲ್ಲಿಯ ಮೊಗ್ಗಾಗಿದ್ದ ತನ್ನ ಮುಗ್ಧ ಜೀವನದಲ್ಲಿ ಪ್ರವೇಶಿಸಿ ಪ್ರೀತಿಯ ಮೊದಲ ಪಾಠ ಕಲಿಸಿದ ಪುರುಷ. ತನಗೇ ಅರಿವಿಲ್ಲಿದಂತೆ ತನ್ನಲ್ಲಿ ಸುಪ್ತವಾಗಿದ್ದ ಹೆಣ್ತನದ ಆಪಾರ ಆಸೆ ಆಕಾಂಕ್ಷೆಗಳನ್ನು ಪ್ರಚೋದಿಸಿ ಅರಲಳಿಸಿದಾತ. ತನ್ನ ಬಿಸಿಯಪ್ಪುಗೆಯಲ್ಲಿ ಜಗವನ್ನೆ ಮರೆಸಿದಾತ. 'ಜೀವನ ಒಂದು ಸುಂದರ ಕನಸು' ಎಂದು ನಂಬಿಸಿದಾತ. ಕ್ಷಣದಲ್ಲಿ ತನ್ನ ಸರ್ವಸ್ವವನ್ನೂ ಆತನ ಪದತಲದಲ್ಲಿ ಅರ್ಪಿಸುವ ಹಾಗೆ ಮೋಡಿ ಮಾಡಿದಾತ. ನಂತರ...ನಂತರ ಒಡಲಲ್ಲಿ ಆತನ ವಂಶದ ಕುಡಿಹೊತ್ತು ತುಂಬು ಸಂಕೋಚ-ಕಾತರ-ನಂಬಿಕೆಗಳಿಂದ ಆತನೆಡೆ ಹೋದಾಗ 'ಈಕೆ ಯಾರೋ ಗೊತ್ತಿಲ್ಲ' ಎಂದು ಕೈಝಾಡಿಸಿಬಿಟ್ಟ ಪುರುಷೋತ್ತಮ-ಮಹಾರಾಜ ದುಷ್ಯಂತ !

-ಮುಂದಿನದು ಬರಿ ನೋವಿನ ನೆನಪು. ಮಳೆ ಸುರಿಯುತ್ತಿರುವ ಅದೆಷ್ಟು ರಾತ್ರಿಗಳನ್ನು ತಾನು ಆತನ ನೆನಪಿನಲ್ಲಿ ಕಣ್ಣೀರು ಸುರಿಸುತ್ತ ಕಳೆದ...ಹೂಗಳು ಆರಳಿ ಪರಿಮಳ ಬೀರುತ್ತಿರುವಾಗ, ಕೋಗಿಲೆಗಳು ಮಾವಿನೆಲೆಗಳ ಹಿಂದೆ ಅಡಗಿ ಹಾಡುತ್ತಿರುವಾಗ, ನವಿಲುಗಳು ಗರಿಬಿಚ್ಚಿ ಕುಣಿಯುವಾಗ, ಅದೆಷ್ಟು ಸಂಜೆ-ಮುಂಜಾವುಗಳನ್ನು ತಾನು ಆತನ ವ್ಯರ್ಥ ನಿರೀಕ್ಷೆಯಲ್ಲಿ ಸಂಕಟಪಡುತ್ತ ಕಳೆದೆ...ಇಡಿಯ ಜೀವನವೇ ಆತನಿಗಾಗಿ ಕಾಯುವಿಕೆಯಾಗಿಹೋಯಿತು...

"ಏಳು ದೇವಿ ಶಕುಂತಲಾ, ಹೀಗೆ ದಿಗ್ಭ್ರಮೆಗೊಂಡು ಕೂತುಬಿಡಬೇಡ. ನಿನ್ನ ತಪಸ್ಸು ಸಾರ್ಥಕವಾಯಿತು. ಕೊನೆಗೂ ಮಹಾರಾಜ ದುಷ್ಯಂತನು ನಿನ್ನ ಕಡೆ ಬಂದೇ ಬಿಟ್ಟನು. ತ್ವರೆ ಮಾಡು, ಏಳು..." -ಸುವ್ರತೆ ಮತ್ತೆ ಸಾನುಮತಿಯರು ಶಕುಂತಲೆಯನ್ನು ಅರ್ಧ ಎಳೆದುಕೊಂಡೇ ಹೊರನಡೆದರು.

ಓಹ್ ! ನಾರಿಯ ಮನೋವ್ಯಾಪಾರವು ನಿಜವಾಗಿ ವಿಚಿತ್ರವಾದುದು. ಯಾವ ಪುರುಷನಿಗಾಗಿ ಹಲವಾರು ವರ್ಷ ಹಗಲಿಡೀ ಕಾಯ್ದು - ಕಾಯ್ದು , ಯಾರಿಗಾಗಿ ಜೀವನವನ್ನೇ ಒಂದು ತಪಸ್ಸನ್ನಾಗಿಸಿದೆನೋ ಆತನು ನಿಜವಾಗಿಯೂ ಬಂದಿರುವಾಗ ಮನಸ್ಸಿನಲ್ಲಿ ಇದೆಂತಹ ನಿರ್ಲಿಪ್ತತೆ ? ಇದೆಂತಹ ತಾಟಸ್ಥ್ಯ? ಆದೇಕೆ ತನ್ನ ಮನಸ್ಸು ಹೂವಾಗಿ ಆರಳಲೊಲ್ಲದು ? ಗರಿಬಿಚ್ಚಿ ಹಾರಲೊಲ್ಲದು ? ಇಷ್ಟು ವರ್ಷಗಳಿಂದ ನಿರೀಕ್ಷಿಸಿದ್ದ ಈ ಸಮಯ ಇಂದು ನಿಜವಾಗಿ ಒದಗಿ ಬಂದಾಗ ಇದೇನು, ತನ್ನ