ಪುಟ:ನಡೆದದ್ದೇ ದಾರಿ.pdf/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...

೩೯೯

ಆ ಸಂಬಂಧ ಕೊರಳಿಗೆ ಉರಲು ಆಗೋದು ಬ್ಯಾಡ ಅಂತೀನಿ.'
'ಅಂದ್ರ ? ಬೇಕಾದಾಗ ಬೇಕಾದವರ್ನ ಕೂಡಿ ಸಾಕಾದ ಕೂಡ್ಲೇ ಗುಡ್
ಬಾಯ್ ಅನ್ನೋದೇನು ?' -ಆ ಪರಿ ಕಮಲಾ ಕನಸಿನಲ್ಲೂ ಕಲ್ಪಿಸಲಾರಳು
. 'ಯಸ್, ಸಿಂಪಲ್, ಖಾವೋ ಪೀವೋ ಮಜಾಕರೋ ಫಿರ್ ಆಗೇ ಬಢೋ,
ಬಾಕೀ ಸಬ್ ಭೂಲ್ ಜಾವೋ,' ಅಂತ ಶಶಿ ಕಣ್ಣು ಮಿಟುಕಿಸಿ ನಕ್ಕಾಗ, 'ಥೂ, ನಾವೇನು
ಅಮೇರಿಕನ್‌ರೇನು ? ಹಿಂಗನ್ಲಿಕ್ಕೆ ನಿನಗೆ ನಾಚಿಕೆ ಆಗೂದಿಲ್ಲ s ?' ಅಂತ ಕಮಲಾ
ಸಿಟ್ಟಾಗುತ್ತಿದ್ದಳು.

***

ಮೆಡಿಕಲ್ಗೆ ಸೀಟು ಸಿಕ್ಕಿ ಮುಂಬಯಿಗೆ ಬಂದ ನಂತರ ಶಶಿಗೆ ಕಮಲಾಳ
ಒಡನಾಟ ತಪ್ಪಿತ್ತು. ರಜೆಯಲ್ಲಿ ಹೋದಾಗಲಷ್ಟೇ ಕಮಲಾಳ ಭೇಟಿಯಾಗುತ್ತಿದ್ದುದು.
ಕಮಲಾ ಬಿ. ಎ. ಮುಗಿಸಿ ಎಮ್. ಎ. ಓದಲೆಂದು ಧಾರವಾಡಕ್ಕೆ ಹೋದಳು. ಈಗ
ಮೊದಲಿನಕಿಂತ ಹೆಚ್ಚು ಗಂಭೀರಳಾಗಿದ್ದಳು. ಆದರೆ ಅವಳ ವಿಚಾರ, ಧ್ಯೇಯ, ಆದರ್ಶ
ಈಗ ಇನ್ನಷ್ಟು ಗಟ್ಟಿಯಾಗಿದ್ದವು. ತನ್ನೆಲ್ಲ ಧೋರಣೆ, ದೃಷ್ಟಿಕೋನ, ಹಂಬಲಗಳಿಗೆ
ಒಂದು ಮೂರ್ತರೂಪ ಕೊಡುವ ಅವಕಾಶಕ್ಕಾಗಿ ಆಕೆ ಕಾಯುತ್ತಿದ್ದಳು. ಭವಿಷ್ಯದಲ್ಲಿನ
ಗುರಿ ಅವಳಿಗೆ ಸ್ಪಷ್ಟವಾಗಿದ್ದರೂ ಅದನ್ನು ತಲುಪಲು ಸಾಗಬೇಕಾದ ದಾರಿ
ಅಸ್ಪಷ್ಟವಾಗಿತ್ತು. ಅಂತೆಯೇ ಆ ದಿನಗಳಲ್ಲಿ ಆಕೆಯ ವರ್ತನೆಯಲ್ಲಿ ಎಂಥದೋ
ಚಡಪಡಿಕೆ, ಅತೃಪ್ತಿ, ಹುಡುಕಾಟದ ಅಸಹನೆ ತೋರುತ್ತಿದ್ದವು. ಮಾನಸಿಕವಾಗಿ ಆಕೆ
ಆಗ ಸಾಕಷ್ಟು ಅಶಾಂತಿಯನ್ನನುಭವಿಸುತ್ತಿದ್ದಿರಬೇಕು :
“ಇತ್ತೀಚೆಗೆ ಸದಾ ನನಗೊಂದು ವಿಧದ ಅತೃಪ್ತಿ, ಕಾತರ. ಬೇಸಿಗೆಯ
ಮೊದಲ ಮಳೆಗಾಗಿ ಪರಿತಪಿಸುತ್ತಿರುವ, ಧಗೆ ಹಾಯುತ್ತಿರುವ ವಿಜಾಪುರದ
ಎರೆಮಣ್ಣಿನ ಹೊಲದಂತಾಗಿದೆ ನನ್ನ ಮನಸ್ಸು. ಎದುರಿಗೆ ಕಾಣುತ್ತಿರುವ
ದಾರಿಯೆಲ್ಲ ಮಸುಕು-ಮಸುಕು, ಮಬ್ಬು, ಕತ್ತಲು. ಆದರೂ ಬರಲಿರುವ
ಮಳೆಯ-ಬೆಳಕಿನ ಸೂಚನೆ ಆಗಲೇ ಅಸ್ಪಷ್ಟವಾಗಿ ನನಗೆ ಕಾಣುತ್ತಿದೆ. ಅದಕ್ಕೇ
ನನ್ನ ಹೃದಯ ಧಡಧಡಿಸುತ್ತಿದೆ. ಆದರೆ ಕಾಯಲೇಬೇಕಾದ ಈ ಸ್ವಲ್ಪ
ಅವಧಿಯನ್ನು ಕಳೆಯುವುದು ಅಸಹ್ಯವಾಗುತ್ತಿದೆ...."
ಹೌದು, ಶಶಿಗೆ ಸರಿಯಾಗಿ ನೆನಪಿದೆ, ಕಮಲಾ ಬಹಳ ಕಾಲ ಕಾಯಬೇಕಾಗಲಿಲ್ಲ.
ಆಕೆ ಕೊನೆಯ ವರ್ಷ ಎಮ್. ಎ. ನಲ್ಲಿದ್ದಾಗ ಧಾರವಾಡದ ಕನ್ನಡ ಸಂಘದವರ
ನಾಡಹಬ್ಬದ ಆಮಂತ್ರಣದ ಮೇರೆಗೆ ಮುಂಬಯಿಯಿಂದ ಒಂದು ವಿಶಿಷ್ಟ ನಾಟಕ
ಕಂಪನಿ ಬಂದಿತ್ತು. 'ರಸಿಕಕೂಟ' ಅಂತ ಆದರ ಹೆಸರು, ಅದರ ಪ್ರೊಪ್ರೈಟರು