ಪುಟ:ನಡೆದದ್ದೇ ದಾರಿ.pdf/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...

೪೨೭

ಕೊಟ್ಟಿದ್ದಳು. ಶಶಿ ನೋಡುತ್ತಿದ್ದಂತೆ ಮನೆಯೂ ಸಾಕಷ್ಟು ಸುಸಜ್ಜಿತವಾಗಿಯೇ ಇತ್ತು.
ಎಷ್ಟು ಕನಸುಗಳಿದ್ದವು ಕಮಲಾಗೆ ಸಂಸಾರದ ಬಗ್ಗೆ ! ತನ್ನದೇ ಆದುದೊಂದು ಪುಟ್ಟ
ಮನೆ, ಪ್ರೀತಿಸುವ ಗಂಡ, ಮುದ್ದಾದ ಒಂದೆರಡು ಮಕ್ಕಳು - ಇತ್ಯಾದಿಗಳೇ
ಸರ್ವಸ್ವವೆಂದು ನಂಬಿದ್ದ ಟಿಪಿಕಲ್ ಹಿಂದೂ ಹೆಂಗಸು ಆಕೆ. ಯಾವುದೋ
ಭ್ರಮೆಗೊಳಗಾಗಿ ಈ ಶಿವಮೂರ್ತಿಯನ್ನು ಕಟ್ಟಿಕೊಳ್ಳುವ ಬದಲು ಬೇರೆ
ಯಾರಾದರೊಬ್ಬ ಕ್ಯಾಲಿಫಾಯ್ಡ್ ವರನನ್ನು ನೋಡಿ ಲಗ್ನವಾಗಿದ್ದರೆ ಆಕೆ
ಸುಖಿಯಾಗುತ್ತಿದ್ದಳು ಅಂತ ಯಾವಾಗಲೂ ಅನಿಸುತ್ತಿದ್ದ ಹಾಗೆ ಶಶಿಗೆ ಈಗಲೂ
ಅನಿಸಿತು. ಆದರೆ ಕಮಲಾಗೆ ಮಾತ್ರ ಎಂದೂ ಹಾಗನಿಸಲಿಲ್ಲವೆಂದೂ ಶಶಿಗೆ
ಗೊತ್ತಿತ್ತು :
“ಈ ಜನ್ಮದಲ್ಲಿ ನನ್ನ ಮನಸ್ಸು ಒಪ್ಪುವ ಗಂಡಸು ಶಿವಮೂರ್ತಿ
ಮಾತ್ರ. ಆತ ಮದುವೆಯಾದವನಿರಲಿ, ಮಕ್ಕಳೊಂದಿಗನಿರಲಿ, ಸಂಶಯ
ಪಿಶಾಚಿಯಾಗಿರಲಿ, ನನ್ನನ್ನು ಬೇಕಾದಷ್ಟು ಅಲಕ್ಷಿಸಲಿ, ಅವಮಾನಿಸಲಿ,
ಆದರೂ ನನಗೆ ಅವನು ಬೇಕು, ಅವನೇ ಬೇಕು. ಅವನಿಲ್ಲದೆ ನಾನು
ಸುಖಿಯಾಗಲಾರೆ. ಅವನ ದೋಷಗಳೇನೇ ಇದ್ದರೂ ಒಂದು ವಿಷಯ ಮಾತ್ರ
ನಿಜ, ಅವನು ನನ್ನನ್ನು ಪ್ರೀತಿಸುತ್ತಾನೆ. ನನ್ನ ವಿನಃ ಇನ್ನಾರನ್ನೂ ಎಂದೂ
ಪ್ರೀತಿಸಿಲ್ಲ, ಮುಂದೆಯೂ ಪ್ರೀತಿಸುವುದಿಲ್ಲ. ಎಷ್ಟೋ ಸಾವಿರ ಸಲ ಈ
ಹಿಂದೆ ನನಗವನು ಹೇಳಿದ್ದಾನೆ, 'ಕಮಲಾ, ನೀನು ನನ್ನ ಜೀವನದಲ್ಲಿ ಬರುವ
ಮೊದಲು ನನಗೆ ಹೆಂಡತಿ, ಮಕ್ಕಳು, ಪ್ರಸಿದ್ದಿ, ಹಣ, ಸುಖ ಎಲ್ಲಾ ಇತ್ತು.
ಆದರೆ ನನ್ನ ಆತ್ಮ ಯಾವಾಗಲೂ ಯಾವ ಕಾರಣಕ್ಕಾಗಿಯೇ ಸದಾ
ಅತೃಪ್ತವಾಗಿರುತ್ತಿತ್ತು. ಅದು ಯಾಕೆ ಅಂತ ನನಗೇ ಗೊತ್ತಿರಲಿಲ್ಲ. ನಿನ್ನನ್ನು
ಕಂಡಾಗಲೇ ನನಗದರ ಕಾರಣ ಗೊತ್ತಾಗಿದ್ದು. ನನ್ನಂತರಂಗಕ್ಕೆ ನಿನ್ನಂತಹ
ಸಂಗಾತಿಯ- ಅಲ್ಲ, ನಿನ್ನದೇ- ಅವಶ್ಯಕತೆಯಿತ್ತು. ಅದೀಗ ಪೂರ್ಣವಾಯಿತು.
ನೀನು ನನಗೆ ಎಷ್ಟೆಲ್ಲ ಕೊಟ್ಟಿರುವಿ. ಇಂಥ ಅಪೂರ್ವ ತೃಪ್ತಿಯನ್ನು ಹಿಂದೆ
ನಾನೆಂದೂ ಅನುಭವಿಸಿರಲಿಲ್ಲ . ಶಿವಮೂರ್ತಿ ಏನೇ ಹೇಳಿದರೂ
ಮನಸ್ಸಿನಿಂದ ಹೇಳಿರುತ್ತಾನೆ. ತೋರಿಕೆಯ ಮಾತುಗಳಿಗೆ ಆತನಲ್ಲಿ
ಆಸ್ಪದವಿಲ್ಲ ಅಂತ ನನಗೆ ಗೊತ್ತು. ಅದಕ್ಕೆಂದೇ ಆತ ಆಗೀಗ ಕೆಟ್ಟ ಮಾತು
ಆಡಿದರೂ, ನೋಯಿಸಿದರೂ, ಅಲಕ್ಷಿಸಿದರೂ ನನಗವನು ಮತ್ತೆ ಮತ್ತೆ ಬೇಕು
ಆನ್ನಿಸುವುದು. ಅವನನ್ನು ಲಗ್ನವಾಗಿ ನಾನು ಪೂರ್ಣ ಸುಖಿಯಾಗಿಲ್ಲ ನಿಜ,
ಆದರೆ ಇನ್ನಾರನ್ನೇ ಲಗ್ನವಾಗಿದ್ದರೂ ನಾನು ಪೂರ್ಣ ದುಃಖಿಯಾಗಿರುತ್ತಿದ್ದೆ