ಪುಟ:ನಡೆದದ್ದೇ ದಾರಿ.pdf/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೪ ನಡೆದದ್ದೆ ದಾರಿ

ಈಗೆಲ್ಲಾ ಕೋಟಿಗಳ ವ್ಯವಹಾರ. ರಾತ್ರಿ ಮಾತ್ರ ನಡೆಯುತ್ತಿದ್ದ ಬಾಟಲಿ ಗ್ಲಾಸುಗಳ ನೃತ್ಯ ಈಗ ಬೆಳಗಿನಿಂದಲೇ ಆರಂಭವಾಗುತ್ತಿದೆ. ಮೊದಲಾದರೋ ಕದ್ದು ನಡೆಯುತ್ತಿದ್ದ 'ಹೊಂದಾಣಿಕೆ' ಕಾರ್ಯಕ್ರಮಗಳು ಈಗ ತೀರ ಆಧುನಿಕವಾಗಿ ಮುಕ್ತ ರೀತಿಯಲ್ಲಿ ನಡೆಯುತ್ತಿವೆ. ಎಸ್. ಈ ಸಾಹೇಬರ ಜೊತೆಗೆ ಸಿ. ಈ ಸಾಹೇಬರೂ ಅಲ್ಲೀಗ ದೊಡ್ಡ ದೊಡ್ಡ ಬಂಗಲೆಗಳಲ್ಲಿ ನೆಲಸಿದ್ದಾರೆ. ಅವರ ಬಂಗಲೆಗಳ ವೈಭವ ನೋಡುವಂತಹದು. ಈ ಸಾಹೇಬರುಗಳು ತಿಂಗಳಿನಲ್ಲಿ ಹೆಚ್ಚಿನ ದಿನಗಳನ್ನು ರಾಜಧಾನಿಯಲ್ಲೇ ಕಳೆಯುತ್ತಾರೆ. ಅವರು ಕೊಡುವ ಪರ್ಸೆಂಟೇಜ್ ಆಧಾರದ ಮೇಲೆ ಮಂತ್ರಿಗಳು ಅವರ ಕೆಲಸಕ್ಕೆ ಹಣ ಬಿಡುಗಡೆ ಮಾಡುತ್ತಾರೆ. ಹೀಗೆ ಸರಕಾರ ಬಿಡುಗಡೆ ಮಾಡಿದ ಹಣದ ನಾಲ್ಕನೆಯ ಒಂದು ಭಾಗ ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ತಿರುಗಿ ಮಂತ್ರಿಗಳು- ಶಾಸಕರಿಗೇ ಹೋಗಿಬಿಡುತ್ತದೆ. ಉಳಿದುದನ್ನು ಈ ಅಧಿಕಾರಿಗಳು ಕಂತ್ರಾಟುದಾರರೊಂದಿಗೆ ಯಥಾನುಕೂಲ ಹಂಚಿಕೊಳ್ಳುತ್ತಾರೆ. ವ್ಯವಹಾರವೆಲ್ಲ ತೀರ ನೇರವಾಗಿ ನಡೇದುದಿಂದ ತಿಮ್ಮನಂಥವರಿಗೂ ನಡೆದುದೆಲ್ಲ ತಿಳಿಯುತ್ತಿದೆ.

     ತಿಮ್ಮನೀಗ ಏನು ಕಂಡರೂ ದಿಗಿಲಾಗುವುದಿಲ್ಲ. ಇಪ್ಪತ್ತು ಕಿಲೋಮೀಟರ ದೂರ ರಸ್ತೆ ಮಾಡಿ, ಮೂವತ್ತು ಕಿಲೋಮೀಟರ ಮಾಡಿದ್ದೇವೆಂದು ಲೆಕ್ಕ ತೋರಿಸುತ್ತಾರೆ. ಎರಡು ಫೂಟು ಆಳದ ತಗ್ಗು ತೆಗೆದು ಹತ್ತು ಫೂಟು ತೆಗೆಸಿದ್ದೇವೆಂದು ಬರೆಯುತ್ತಾರೆ. ಐವತ್ತು ಮಂದಿ ಕೂಲಿಗಳನ್ನು ನೇಮಿಸಿಕೊಂಡು ನೂರು ಮಂದಿ ಅಂತ ನಮೂದಿಸುತ್ತಾರೆ. ಒಂದುನೂರು ಚೀಲ ಸಿಮೆಂಟು ಹಾಕಿದಲ್ಲಿ ನೂರೈವತ್ತು ಚೀಲ ಹಾಕಿದ ದಾಖಲೆ ತಯಾರಿಸುತ್ತಾರೆ. ಅಕಸ್ಮಾತ್ ಒಬ್ಬ ಪ್ರಾಮಾಣಿಕ ಇಂಜಿನಿಯರ್ ಈ ಥರ ಸುಳ್ಳು ಅಳತೆ ಬರೆಯುವುದಿಲ್ಲೆಂದು ಪ್ರತಿಭಟಿಸಿದರೆ ಅವನ ಗತಿ ಮುಗಿದಂತೆ. ತಿಮ್ಮನೇ ನೊಡಿರುವಂತೆ ಅಂಥ ಇಂಜಿನಿಯರನ್ನು ರೂಮಿನಲ್ಲಿ ಕೂಡಿಹಾಕಿ ಜೀವದ ಬೆದರಿಕೆ ತೋರಿಸಿ ಕಂತ್ರಾಟುದಾರರು ತಮಗೆ ಬೇಕಾದ ಅಳತೆ ಬರೆಸಿಕೊಳ್ಳುತಾರೆ.
        ತಿಮ್ಮನಿಗೇ ತಿಳಿಯುವ ಇವೆಲ್ಲ ಮೇಲಿನ ಸಾಹೇಬರಿಗೆ ತಿಳಿಯುವುದಿಲ್ಲವೆ? ಯಾರಿಗೆ ಗೊತ್ತು? ಈಗಿನ ದೊಡ್ಡ ಸಾಹೆಬ ಕಾಳಪ್ಪನವರು ಯಾವಾಗಲೂ ಮಂತ್ರಿಗಳ ಜೊತೆಗೇ ತಿರುಗಾದೂತಿರುತ್ತಾರೆ. ಅವರೆಂದೂ ಯಾವ ನಕ್ಷೆ-ಯೋಜನೆಗಳ ಬಗೆಗೂ ತಲೆಕೆಡಿಸಿಕೊಂಡವರಲ್ಲ. ಕಚೇರಿಗೆ ಬರುವ ಸರಕಾರಿ ಆದೆಶಗಳನ್ನೂ, ಪತ್ರಗಳನ್ನೂ ಅವರಿಗೆ ಓದಿ ಅರ್ಥ ಹೇಳಲೆಂದೇ ಒಬ್ಬ ಆಫೀಸರ್ ಇದ್ದಾನೆ. ಅವರೊಂದಿಗೇ ಓದಿ ಅವರಿಗಿಂತ ಹೆಚ್ಚಿನ ಅಂಕ ಗಳಿಸಿದರೂ ದುರ್ದೈವದಿಂದ ಇನ್ನೂ ಪ್ರಮೋಶನ್ ಸಿಗದೆ ಕೊಳೆಯುತ್ತಿರುವ ಈ ಕೆಳಗಿನ ಆಫೀಸರನೇ ಅವರ ಕಚೇರಿಯ ವ್ಯವಹಾರಗಳನ್ನು ಅವರ ಆದೆಶಾನುಸಾರ ಗಮನಿಸಿಕೊಳ್ಳುತ್ತಾನೆ.