ಪುಟ:ನಡೆದದ್ದೇ ದಾರಿ.pdf/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು/ಇಲ್ಲಿಂದ ಮುಂದೆಲ್ಲಿ?

೫೦೯

ಬರುತ್ತಿದ್ದೇನೆ, ನನಗೆ ಬಹಳ ಖುಶಿಯಾಗಿದೆ, ಎಂದು ಗಂಡನಿಗೆ ಪತ್ರ ಬರೆದಳು.
ಇಡಿಯ ರಜೆಯ ಅವಧಿಯಲ್ಲಿ ಗಂಡನಿಗೂ, ಮಕ್ಕಳಿಗೂ ಜೊತೆಯಾಗಿ ಇಷ್ಟು ದಿನ
ತಾನಿಲ್ಲದ ಕೊರತೆಯನ್ನು ತುಂಬಿ ಕೊಡುವೆನೆಂದು ಯೋಚಿಸಿ ಆನಂದಪಟ್ಟಳು. ಚಿಕ್ಕ
ಹುಡುಗಿಯಂತೆ ರೋಮಾಂಚನ ಅನುಭವಿಸಿದಳು.

ಆದರೆ ಸ್ವಂತದ ಕಷ್ಟ-ಸುಖಗಳ ಬಗ್ಗೆ ಯೋಚಿಸುತ್ತ ಕರ್ತವ್ಯವನ್ನು
ನಿರ್ಲಕ್ಷಿಸುವ ಅಧಿಕಾರಿಯಾಗಿರಲಿಲ್ಲ ಆಕೆ. ರಜೆ ಸುರುವಾಗುವ ಮೊದಲು ಯಾವ
ಮಹತ್ವದ ಕೇಸೂ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು, ಪೆಂಡಿಂಗ್
ಉಳಿಯದ ಹಾಗೆ ಕೆಲಸ ನಿರ್ವಹಿಸಿದಳು. ಬೇರೆ ಮ್ಯಾಜಿಸ್ಟ್ರೇಟರು ಬೇಕೆಂತಲೇ ಕೇಸು
ಮುಂದೆ ಮುಂದೆ ಹಾಕುತ್ತಾರೆ. ಈ ಮೇಡಮ್ಮು ಎಷ್ಟು ಬೇಗ ಎಲ್ಲ ಇತ್ಯರ್ಥ
ಮಾಡುತ್ತಾರೆ, ಅಂತ ಕೋರ್ಟಿನ ಒಳಗೂ ಹೊರಗೂ ಜನ ಮಾತಾಡಿದರು. ಹಾಗೆ
ಆಕೆ ಬಹಳಷ್ಟು ವ್ಯಾಜ್ಯಗಳನ್ನು ಬಗೆಹರಿಸಿದಳು : ರೆವೆನ್ಯೂ ಡಿಪಾರ್ಟಮೆಂಟಿನಲ್ಲಿ
ಮೊದಲ ದರ್ಜೆ ಗುಮಾಸ್ತನಾಗಿದ್ದ ಮಲ್ಲಪ್ಪ ಕುಡಿದು-ಕುಡಿದು ಹಣ ಹಾಳು
ಮಾಡುತ್ತ, ಸಂಸಾರ ನಿರ್ಲಕ್ಷಿಸುತ್ತ ಇದ್ದ. ಆತನ ಪ್ರತಿ ತಿಂಗಳ ಸಂಬಳದಲ್ಲಿ
ಅರ್ಧದಷ್ಟು ನೇರವಾಗಿ ಆತನ ಹೆಂಡತಿಗೆ ಸಿಗುವ ವ್ಯವಸ್ಥೆಯನ್ನು ಯಶಸ್ವಿನಿ
ಮಾಡಿದಳು. ಹೆಂಡತಿ ಮತ್ತು ಮೂರು ಚಿಕ್ಕ ಮಕ್ಕಳಿದ್ದೂ ಮತ್ತೊಬ್ಬಳೊಂದಿಗೆ
ಕೂಡಾವಳಿ ಮಾಡಿಕೊಂಡು ಮನೆತನದ ಆಸ್ತಿ-ಪಾಸ್ತಿ, ಬಂಗಾರ-ಹಣ ಎಲ್ಲವನ್ನೂ
ಎರಡನೆಯವಳಿಗೇ ಕೊಡುವ ಹವಣಿಕೆಯಲ್ಲಿದ್ದ ಕಾಲೇಜು
ಶಿವಮೂರ್ತಿಯಿಂದ ಆತನ ಹೆಂಡತಿಗೆ ಆಕೆ ಬಯಸಿದಂತೆ ವಿಚ್ಛೇದನೆ ಕೊಡಿಸಿ
ಪಿತ್ರಾರ್ಜಿತ ಆಸ್ತಿಯ ಬಹುಪಾಲು ಆಕೆಗೂ, ಮಕ್ಕಳಿಗೂ ಸಿಗುವಂತೆ ತೀರ್ಪು ಇತ್ತಳು.
ಹೊಸದಾಗಿ ಮದುವೆಯಾಗಿ ಕರೆತಂದ ವಧುವಿಗೆ ವರದಕ್ಷಿಣೆಗಾಗಿ ಕಿರುಕುಳ
ನೀಡುತ್ತಿದ್ದ ಪಿ.ಡಬ್ಲ್ಯೂ.ಡಿ. ಯಲ್ಲಿ ಇಂಜಿನೀಯರ ಆಗಿದ್ದ ಮಹಾದೇವ ಶೆಟ್ಟಿಯನ್ನು
ಕರೆಸಿ ಛೀಮಾರಿ ಹಾಕಿ ಹೆಂಡತಿಯನ್ನು ಸರಿಯಾಗಿ ಬಾಳಿಸಬೇಕೆಂದು ತಾಕೀತು ಮಾಡಿ,
ದರೆ ನೌಕರಿ ಹೋದೀತೆಂದು ಎಚ್ಚರಿಕೆ ನೀಡಿ ಖುಲಾಸೆ ಮಾಡಿದಳು. ಅಣ್ಣ ಸತ್ತ
ನಂತರ ಆತನ ವಿಧವೆ ಪತ್ನಿಯನ್ನು ಬೀದಿಪಾಲು ಮಾಡಿದ್ದ ಡಾ. ಮಧುಕರನಿಂದ
ಆತನ ಅತ್ತಿಗೆಗೆ ಆಸ್ತಿಯ ಪಾಲು ಕೊಡಿಸಿ ಆಕೆಗೆ ಕಿರುಕುಳ ನೀಡಿದ್ದರಿಂದ ಆರು ತಿಂಗಳ
ಸಾದಾಶಿಕ್ಷೆ ವಿಧಿಸಿ, ಆತ ಮತ್ತೆ ಸೊಲ್ಲೆತ್ತದಂತೆ ಮಾಡಿದಳು. ಉನ್ನತ ಬ್ಯಾಂಕ್
ಅಧಿಕಾರಿಯಾಗಿದ್ದ ಅಪ್ಪಾಸಾಹೇಬ ಪಾಟೀಲ ಕಾರಣವಿಲ್ಲದೆ ತನ್ನ ಮೂರನೆಯ
ಹೆಂಡತಿಗೆ ವಿಚ್ಛೇದನ ನೀಡಲು ಪ್ರಯತ್ನಿಸುತ್ತಿದ್ದುದನ್ನು ತಡೆದು ಇಬ್ಬರಿಗೂ ರಾಜಿ
ಮಾಡಿಸಿದಳು. ಫ್ಯಾಕ್ಟರಿ ಮಾಲೀಕ ಸಾಂಬ್ರಾಣಿ ತನ್ನ ಕೈಕೆಳಗಿನ ನಾಲ್ಕನೆಯ ದರ್ಜೆ