ಪುಟ:ನಡೆದದ್ದೇ ದಾರಿ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೊನೆಯ ದಾರಿ/ ಕೊನೆಯ ದಾರಿ

೮೧

ಎಷ್ಟು ಆಸೆಹೊತ್ತು ಹೋಗಿದ್ದೆ ಅವನ ಕಡೆ! ನನ್ನ ಮೇಲಿನ ತನ್ನ ಪ್ರೀತಿಯ ಬಗ್ಗೆ ಇಷ್ಟೆಲ್ಲ ಮತಾಡುತ್ತಾನೆ, ನನಗೊಂದು ಸಣ್ಣ ಉಪಕಾರ ಮಾಡಲಿಕ್ಕಾಗಲಿಲ್ಲ ಆವನಿಂದ. ಹೇಗೆ ಬೆಚ್ಚಿಬಿದ್ದ ನನ್ನ ಮತು ಕೇಳಿ ಹಾವು ಮೆಟ್ಟಿದವರ ಹಾಗೆ!

'ಛೆ ಲಿಲಿ, ಇಂಥಾ ವಿಚಾರ ಕನಸಿನ್ಯಾಗೂ ತರಬ್ಯಾಡ .ನಂದು-ನಿಂದು ಆತ್ಮದ ಸಂಬಂಧ. ದೈಹಿಕ ಮೋಹಕ್ಕೊಳಗಾಗಿ ನಾವು ನಮ್ಮ ಆತ್ಮದ ಸಂಬಂಧ ಹದಗೆಡಿಸಿಕೋಬಾರದು. ದೇಹದ ವ್ಯಾಮೋಹ ಕ್ಷಣಿಕ .ಆ ಕ್ಷಣಿಕ ವ್ಯಮೋಹದ ಸಲುವಾಗಿ ಶಾಸ್ವತವಾದದ್ದನ್ನ ನಾವು ಆಪವಿತ್ರಗೊಳಿಸಬಾರದು....' ಅಂತೆಲ್ಲ ಲೆಕ್ಚರ್ ಕೊಟ್ಟ.

ವಿನಯ ನನ್ನನ್ನೆಂದಿಗೂ ಅರ್ಥಮಾಡಿಕೊಳ್ಳಲಾರ....ಎಂದಿಗೂ ಎಂದಿಗೂ ಶಕ್ಯವಿಲ್ಲ..... "ದೇವರು ನಮ್ಮಿಬ್ಬರನ್ನ ಈ ಜನ್ಮದಾಗ ಯಾಕೋ ಕೂಡಿಸಲಿಲ್ಲ ಲಿಲಿ, ಬಹುಶಃ ದೂರ ಇದ್ದು.ದುಃಖ ಅನುಭವಿಸಿ, ಇನ್ನು ಹೆಚ್ಚು ಗಟ್ಟಿ ಆಗಲಿ ನಮ್ಮ ಪ್ರೀತಿ- ಅಂತ ಅವನ ಉದ್ದೇಶ ಇದ್ದಿರಬೇಕು . ನಾ ಅವನ ಇಚ್ಛಾದ ವಿರುದ್ಧ ಹೋಗೊದಿಲ್ಲ . ನಾ ದೂರನೇ ಇರಿತಿನಿ. ನಮ್ಮ ಪ್ಲೆಟೋನಿಕ್ ಪ್ರಿತಿ ಹಿಂಗs,ಉಳೀಲಿ. ಬೆಳೀಲಿ. ಮುಂದಿನ ಜನ್ಮದಾಗ ಮಾತ್ರ ....."

-ಇವನ ಮುಂದಿನ ಜನ್ಮವನ್ನು, ಇವನ ಪ್ಲೆಟೋನಿಕ ಪ್ರೀತಿಯನ್ನು, ಇವನ ಪ್ಲೇಟೋನನ್ನ, ಇವನನ್ನ ಸಲಾಗಿ ನಿಲ್ಲಿಸಿ ಶಂಕರಗೌಡರ ಜೋಡುನಳಿಯ ಬಂದೂಕಿನಿಂದ ಶೂಟ್ ಮಾಡಬೇಕು.ಸುಟ್ಟು ಬಿಡಬೇಕು. ಛಿ......

೨೪ ಆಗಸ್ಟ್, ೧೯೫೮.

ಸಂಜೆ ಐದು ಗಂಟೆ.

ಎಲ್ಲ ಸಿದ್ದವಾಗಿದೆ.ನನ್ನ ಬಟ್ಟೆಗಳು,ಪುಸ್ತಕಗಳನ್ನು ತುಂಬಿಕೊಂಡ ಸೂಟ್ ಕೇಸ್;ಕೋಣೆಯ ಬಾಡಿಗೆ,ಹಾಲಿನವನ ಲೆಕ್ಕ,ಮುನ್ನಿಗೆ ಕೊನೆಯ ಬಾರಿ ಚಾಕಲೆಟ್ -ಎಲ್ಲ ಕೊಟ್ಟಾಗಿದೆ. ಹೊರಗುಳಿದಿದ್ದುಈ ಡೈರಿ ಒಂದೇ.

-ಮುಂಜಾನೆ ಬಾಗಿಲಲ್ಲಿ ನಿಂತಿದ್ದಾಗ ಸ್ಪೀಡಿನಿಂದ ಬಂದ ಶಂಕರಗೌಡರ ಇಂಪಾಲಾ ಗಕ್ಕನೆ ನಿಂತಿತ್ತು.

'ಲೀಲಾ.....'

-ನಾನು ಸುಮ್ಮನೆ ಇದ್ದೆ.

'ಲೀಲಾ, ನಿನ್ನ ಪತ್ರ ಮುಟ್ಟಿತು'.

ಆಗಲೂ, ನಾನು ಸುಮ್ಮನೆ ಇದ್ದೆ.