ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಕಾದಂಬರೀಸಂಗ್ರಹ

ಅನಂತರ ಶಂಕರರು ಮಂಡನ ಪಂಡಿತನ ಮನೆಗೆ ಬಂದು, ಮಂಡನಪಂಡಿತನಿಂದ ಪೂಜಿಸಲ್ಪಟ್ಟವರಾಗಿ, ಶಾರದೆಯನ್ನು ವಾದಕ್ಕೆ ಕರೆಯಲು, ಶಾಂಕರಮಹಿಮೆಯನ್ನು ತಿಳಿದ ಶಾರದೆಯು, ದಂಪತಿಗಳಾದ ತಾವಿಬ್ಬರೂ ಸೋತೆವೆಂದೂ ಮತ್ತು ತನ್ನ ಅವತಾರ ಪೂರ್ತಿಯಾಯಿತೆಂದೂ ಲಜ್ಜೆಯಿಲ್ಲದೆ ಹೇಳಿ ಅಂತರ್ಹಿತಳಾಗಲು ಆಚರ್ಯರು ಆಕೆಯನ್ನು ಯೋಗದೃಷ್ಟಿಯಿಂದ ನೋಡಿ "ಎಲೌ, ಮಾತೆಯೇ! ನೀನು ಬ್ರಹ್ಮದೇವರ ಪತ್ನಿಯೆಂಬುದನ್ನೂ, ಈಶ್ವರನ ಸಹೋದರಿಯೆಂಬುದನ್ನೂ, ವಾಗ್ದೇವಿಯೆಂಬುದನ್ನೂ, ಪ್ರಪಂಚರಕ್ಷಣೆಗೋಸ್ಕರವೇ ಲಕ್ಷ್ಮ್ಯಾದಿ ರೂಪಗಳನ್ನೂ ಧರಿಸುತ್ತೀಯೆಂಬುದನ್ನೂ, ಬಲ್ಲೆನಾದ್ದರಿಂದ, ನಮ್ಮಿಂದ ರಚಿಸಲ್ಪಡುವ ಶೃಂಗೇರಾದಿ ಕ್ಷೇತ್ರಗಳಲ್ಲಿ ಶಾರದೆಯೆಂಬ ಹೆಸರಿನಿಂದ ನೆಲೆಗೊಂಡವಳಾಗಿ, ಜನರ ಇಷ್ಟಾರ್ಥಗಳನ್ನೀಯುತ್ತಾ ಸತ್ಪುರುಷರಿಂದ ಅರ್ಚಿಸಲ್ಪಡುತ್ತಿರಬೇಕು" ಎಂದು ಪ್ರಾರ್ಥಿಸಲು, ವೈಧವ್ಯ ಸಂಭವಿಸುವುದೆಂಬ ಶಂಕೆಯಿಂದ ಭೂಸ್ಪರ್ಶಮಾಡದೇ ನಿಂತಿದ್ದು, ಸಭೆಯವರಿಗೆಲ್ಲಾ ದರ್ಶನವನ್ನಿತ್ತು 'ತಥಾಸ್ತು' ಎಂದು ಹೇಳಿ, ಹಾಗೆಯೇ ಅಂತರಿಕ್ಷಕ್ಕೇರಿದ ಮಾಯವಾದ ಶಾರದೆಯನ್ನು ನೋಡಿ ಎಲ್ಲರೂ ಆಶ್ಚರ್ಯಭರಿತರಾದರು. ಅನಂತರ ಶಂಕರದೇಶಿಕರು ಮಂಡನಮಿಶ್ರನಿಗೆ ಸನ್ಯಾಸವನ್ನಿತ್ತು ಆತ್ಮತತ್ತ್ವಗಳನ್ನುಪದೇಶಿಸಿ ಸುರೇಶ್ವರಾಚಾರ್ಯರೆಂಬ ಹೆಸರನ್ನಿಟ್ಟು ಸಶಿಷ್ಯರಾಗಿ ದಕ್ಷಿಣಕಡೆಗೆ ಬಂದು, ಮಹಾರಾಷ್ತ್ರಾದಿದೇಶಗಳಲ್ಲಿ ತಮ್ಮ ಭಾಷ್ಯಗಳನ್ನು ಪ್ರಚಾರಮಾಡುತ್ತಾ ಶ್ರೀಶೈಲಕ್ಕೆ ಬಂದು ಪಾತಾಳಗಂಗೆಯಲ್ಲಿ ಸ್ನಾನಮಾಡಿ ಭ್ರಮರಾಂಬಾಸಹಿತನಾದ ಮಲ್ಲಿಕಾರ್ಜುನೇಶ್ವರನನ್ನು ಪೂಜಿಸಿ, ಅಲ್ಲಿದ್ದ ಪಾಶುಪತರು, ವೈಷ್ಣವರು, ವೀರಶೈವರು, ಮಾಹೇಶ್ವರರು ಮುಂತಾದವರನ್ನು ಸೋಲಿಸಿ, ಅವರಿಗೆಲ್ಲಾ, ಜ್ಞಾನಮಾರ್ಗೋಪದೇಶವಂಗೈಯುತ್ತಿದ್ದರು.