422
ಸೇತುವೆ
ಮನೆಗೆ ಹೊತ್ತು ತಂದ ತಿಮ್ಮಯ್ಯ, ಅಲ್ಲಿದ್ದ ಒಂದೆರಡು ಪುಸ್ತಕಗಳನ್ನು ನೋಡಿದರು.
"ನಿಮ್ಮ ಭಂಡಾರದಲ್ಲಿ ಕೈಲಾಸಂ ನಾಟಕ ಇದ್ದರೆ ತಂದ್ಕೊಡ್ರಿ. ಹೊಸ ರೀತೀಲಿ
ಬರೆದದ್ದು. ಆದರೂ ಬಹಳ ಚೆನ್ನಾಗಿವೆ," ಎಂದರು.
"ಕೈಲಾಸಂ ನಾಟಕ ಅಂದರೆ ನನಗೂ ತುಂಬಾ ಇಷ್ಟ," ಎಂದ ಜಯದೇವ.
"ಒಂದೆರಡು ಇವೇಂತ ತೋರುತ್ತೆ. ತಂದ್ಕೊಡ್ತೀನಿ" ಎ೦ದು ಆಶ್ವಾಸನೆ ಇತ್ತ.
...ತಿಮ್ಮಯ್ಯನ ಕೈಯಲ್ಲಿ ಮಾಧ್ಯಮಿಕ ಶಾಲೆಯ ಗ್ರಂಥಭಂಡಾರದ ಪುಸ್ತಕ
ಗಳಿದ್ದುದು ನಂಜುಂಡಯ್ಯನಿಗೆ ಗೊತ್ತಾಯಿತು. ಅವರು ಜಯದೇವನಿಗೆ ಆ ವಿಷಯ
ತಿಳಿಸಿದರು.
"ಓದಲೀಂತ ನಾನೇ ಕೊಟ್ಟಿದ್ದೆ ಸಾರ್. ಈ ಊರಲ್ಲಿ ಬೇರೆ ಎಲ್ಲಿ ತಾನೆ ಪುಸ್ತಕ
ಸಿಗುತ್ತೆ ಆ ಮನುಷ್ಯನಿಗೆ?" ಎಂದ ಜಯದೇವ.
"ಅದು ಸರೀಪ್ಪಾ. ಕಳೆದುಹೋದ್ರೆ ಏನುಮಾಡೋಣ? ನಷ್ಟ ಭರ್ತಿಮಾಡೋ
ಛಾತಿಯೂ ಇಲ್ಲವಲ್ಲ ಆ ಬಡಪಾಯಿಗೆ!"
"ಪುಸ್ತಕ ಹುಷಾರಾಗಿ ನೋಡ್ಕೋಳ್ಳೋದಕ್ಕೆ ಹೇಳ್ತೀನಿ."
"ಅಷ್ಟು ಮಾಡಿ. ನೀವು ಕೊಟ್ಟಿರೋದು ಅಂದ್ಮೇಲೆ ನಾನು ಹೆಚ್ಚೇನೂ
ಹೇಳೊಲ್ಲ. ಲಕ್ಕಪ್ಪಗೌಡರು ಕೊಟ್ಟರೇನೋಂತಿದ್ದೆ."
ಕೇಳಲು ಇಂಪಾಗಿರಲಿಲ್ಲ, ಸೂಚ್ಯಾರ್ಥವಿದ್ದ ಕೊನೆಯ ಮಾತು. ಆದರೂ
ಜಯದೇವ ಅದನ್ನು ಸಹಿಸಿದ.
ತಿಂಗಳಿಗೊಂದು ಸಾರೆ ಉಪಾಧ್ಯಾಯರ ಸಭೆ ನಡೆಯಿತು. ಮಳೆಬಾರದ ಸಂಜೆ
ಆಟದ ಬಯಲಿಗೆ ಜಯದೇವ ನಾಯಕನಾದ. ಶ್ರಮದಾನದ ಹಾರೆಪಿಕಾಸಿಗಳೂ ಆತನ
ಕೊರಳಿಗೇ ಆತುಕೊಂಡುವು.
........ಹಾಗೆ ದುಡಿದು ಮೈಯಿಂದ ಬೆವರಿಳಿಸುತ್ತ, ಒಂದು ದಿನ ಸಾಯಂಕಾಲ
ಜಯದೇವ ಮನೆಗೆ ತಡವಾಗಿ ಬಂದಾಗ, ಸುನಂದಾ ಕೂಗಾಡಿದಳು:
"ಈ ಮನೇಲಿ ಒಬ್ಬಳೇ ಇರೋಕೆ ನನ್ಕೈಲಾಗಲ್ಲ!"
ಜಯದೇವ ಮೊದಲು ಮುಗುಳುನಕ್ಕ. ಆದರೆ ಉದ್ವಿಗ್ನಗೊಂಡ ಆಕೆಯ
ಮನಸ್ಸು ಅಷ್ಟರಿಂದಲೇ ಶಮನವಾಗುವಂತಿರಲಿಲ್ಲ.
“ಯಾಕೆ ಸುನಂದಾ? ಬರೋದು ಸ್ವಲ್ಪ ತಡವಾಯ್ತು, ಅಷ್ಟೆ."
"ಸ್ವಲ್ಪವೆ? ನೋಡಿ ಟೈಂಪೀಸು. ಕಾಣಿಸುತ್ತೇನು?"
ಸಣ್ಣ ದೊಡ್ಡ ಮುಳ್ಳುಗಳೆರಡೂ ಆರರ ಬಳಿ ಒಂದಾಗಿದ್ದುವು.
"ನೋಡು, ಕೋಪಿಸ್ಕೊಳ್ಳದೆ ಹ್ಯಾಗೆ ಜತೆಯಾಗಿವೆ, ಎರಡು ಮುಳ್ಳೂ!"
ಸಾಧಾರಣವಾಗಿ ಆಕೆ ಪ್ರಸನ್ನಳಾಗಲು ಅಷ್ಟೇ ಸಾಕಾಗುತ್ತಿತ್ತು. ಆದರೆ ಆ
ಸಂಜೆ ಜಯದೇವನಿಗೆ ಸೋಲಾಯಿತು.
“ಹತ್ತುಸಲ ಬಿಸಿಯಾಗಿ ತಣ್ಣಗಾಗಿರೋ ಕಾಫೀನ ಒಲೆ ಮೇಲಿಟ್ಟಿದೀನಿ.