ಪುಟ:ನಾಸ್ತಿಕ ಕೊಟ್ಟ ದೇವರು.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ?

೯೧

ಬಹಿರಂಗವಾಗಿ ಶಿಷ್ಟಾಚಾರವನ್ನು ಪಾಲಿಸಲು ಪ್ರಯತ್ನಿಸುತ್ತ, ಕುಳಿತಲ್ಲೆ ತುಸು ಮಿಸುಕಿದಂತೆ ಮಾಡಿ,
“ಬನ್ನಿ ಚಂದ್ರಶೇಖರಯ್ಯನವರೆ,” ಎಂದರು.
[ಹೆಣ್ನು ಹೆತ್ತವರಿಗೆ 'ಬನ್ನಿ' ಸಾಕು. ಗಂಡಿನ ತಂದೆಗಾದರೆ 'ದಯಮಾಡಿಸಿ.']
ಮಧ್ಯವಯಸ್ಕ ಚಂದ್ರಶೇಖರಯ್ಯನವರ ದೃಷ್ಟಿ ಪ್ರಸಾದನ ಮೇಲೆ ತಂಗಿತು. ಪ್ರೀತಿ ತುಂಬಿದ್ದ ನೋಟ.
ಅವರ ದಪ್ಪಗಂಟಲು ನಿಧಾನವಾಗಿ ಪದಗಳನ್ನು ಹೊರಕ್ಕೆ ಉರುಳಿಸಿತು:
"ಚಿರಂಜೀವಿಯವರು ಈ ಬೆಳಗ್ಗೆ ಬಂದ್ರು, ಅಲ್ವೆ? ನಿಮ್ಮದೆಲ್ಲಾ ಅಚ್ಚುಕಟ್ಟು ವಿಶ್ವನಾಥಯ್ಯನವರೆ! ಹೇಳಿದ ದಿವಸ ಹೇಳಿದ ಟೈಮಿಗೆ ನೀವು ಹೇಳಿದ್ದು ಆಗಿಯೇ ಆಗುತ್ತೆ. ಅಷ್ಟು ಶಿಸ್ತು!”
[ಶಿಸ್ತನ್ನು ಸುಟ್ಟಿತು.]
ಸ್ಟೂಲಿನತ್ತ ಬೊಟ್ಟು ಮಾಡಿ,
"ಕೂತ್ಕೊಳ್ಳಿ," ಎಂದರು ವಿಶ್ವನಾಥಯ್ಯ.
ಪ್ರಸಾದ ಏನನ್ನೋ ಊಹಿಸಿ, ತನ್ನ ಊಹೆ ಸರಿ ಇರಬಹುದೆಂದು ಭಾವಿಸಿ, ಕೊಠಡಿಯೊಳಕ್ಕೆ ತೆರಳಿದ. ಮಂದಹಾಸ ಸೂಸಲು ಅವನ ತುಟಿಗಳು ಸಿದ್ಧವಾದುವು. ಆದರೆ ಹುಬ್ಬಗಳಾಗಲೇ ಮೇಲಕ್ಕೆ ಸರಿದು ಗಂಟಿಕ್ಕಿ ಕೊಂಡಿದ್ದುವು.
ಸ್ಟೂಲಿನ ಮೇಲೆ ಕುಳಿತುಕೊಳ್ಳುತ್ತಿದ್ದಾಗಲೇ ಚಂದ್ರಶೇಖರಯ್ಯನ ದೃಷ್ಟಿ ನಿರ್ಗಮಿಸುತ್ತಿದ್ದ ಪ್ರಸಾದನ ಮೇಲೆ ನೆಟ್ಟಿತ್ತು.
ಅವರೆಂದರು:
"ಪ್ರಸಾದ್ ಎಷ್ಟೊಂದು ಬೆಳೆದ್ಬಿಟ್ಟಿದಾರೆ. ನಿಮ್ಮ ಮಗ ಎಸ್.ಎಸ್.ಎಲ್.ಸಿ.ಗೆ ಕಟ್ಟಿದ್ದ ವರ್ಷ ನಾನು ಇವರ ಸ್ಕೂಲು ಸೇರ್ಕೊಂಡೆ. ಹಹ್ಹ-ನಾನು ಇವರಿಗೆ ಮೇಷ್ಟ್ರಾಗಿರಲಿಲ್ಲ ಅನ್ನೋಣ. ಆದರೂ-ನಿಮ್ಮ ಮಗ ನಮ್ಮ ಸ್ಕೂಲಿನ ಹಳೇ ವಿದ್ಯಾರ್ಥಿ ಅಂತ ಹೆಮ್ಮೆ ಪಟ್ಕೋಬಹುದು.”
“ಓಹೋ-ಧಾರಾಳವಾಗಿ. . .”
"ನಿಮ್ಮ ಮಗಳೂ ನಮ್ಮ ಲೀಲಾನೂ ಒಂದೇ ವರ್ಷ—”