ಪುಟ:ಪರಂತಪ ವಿಜಯ ೨.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೬

೫೭


ಬಿಟ್ಟು ಯಮನ ಅತಿಥಿಯಾಗುವುದಕ್ಕೆ ಸಿದ್ಧಳಾಗುವಳು; ನನ್ನ ಪ್ರಿಯ ಸಖಿಯನ್ನು ನಾನು ಅನುಸರಿಸದೆ ಇರಲಾರೆನು; ನನ್ನ ಮಾತಾಪಿತೃಗಳು ನನ್ನನ್ನೇ ಅನುಸರಿಸುವುದಕ್ಕೆ ಸಂಶಯವಿಲ್ಲ. ಈ ಪಾತಕಗಳಿಗೆಲ್ಲ ನೀನೇ ಕಾರಣ ಭೂತನಾಗುವೆ. ಆದುದರಿಂದ ಸಾವಕಾಶಮಾಡಬೇಡ, ಮಂಗಳ ಸ್ನಾನಕ್ಕೆ ಏಳು ; ಹೋಗೋಣ-ಏಳು.

ಪರಂತಪ-(ಸ್ವಗತ) ಈ ಆರ್ಯಕೀರ್ತಿಯೂ ಇವಳ ತಂದೆ ತಾಯಿಗಳೂ ಹೇಳುವ ಮಾತುಗಳೆಲ್ಲ ಸತ್ಯವಾಗಿ ಕಾಣುತ್ತವೆ. ಸುಮಿತ್ರ ಶಂಬರರು, ಪ್ರಬಲರಾಗಿಯೂ ಧನಿಕರಾಗಿಯೂ ಇದ್ದಾರೆ. ಶಂಬರನು, ಸರ್ವತ್ರ ಯತ್ನದಿಂದಲೂ ಈಕೆಯನ್ನು ಮದುವೆ ಮಾಡಿಕೊಳ್ಳಬೇಕೆಂದು ಇದ್ದಾನೆ. ಈಕೆಯಾದರೋ, ಶಂಬರನಲ್ಲಿ ಸ್ವಲ್ಪವೂ ಅನುರಕ್ತಳಾಗಿಲ್ಲ. ಬಲಾತ್ಕಾರ ದಿಂದ ಆತನಿಗೆ ವಿವಾಹಮಾಡಲ್ಪಟ್ಟರೆ, ಇವಳು ದೇಹವನ್ನು ಬಿಡುವುದರಲ್ಲಿ ಸಂದೇಹ ತೋರುವುದಿಲ್ಲ. ಇಷ್ಟು ಅನರ್ಥಗಳಿಗೂ ನಾನೇ ಕಾರಣ ಭೂತನಾದೇನು. ನಾನು ಈ ಸುಮಿತ್ರನ ಮನೆಗೆ ಬಾರದೇ ಇದ್ದಿದ್ದರೆ, ಬಹುಶಃ ಇವಳು ಶಂಬರನಿಗೆ ಘಟನೆಯಾಗುತ್ತಿದ್ದಳೋ ಏನೋ ತಿಳಿಯದು. ಈಗ ಕೆಲಸ ಮೀರಿತು. ಈಕೆಯನ್ನು ಈಗ ವಿವಾಹ ಮಾಡಿಕೊಂಡರೆ, ನಾನು ಸುಮಿತ್ರ ಶಂಬರರಿಗೆ ವಿರೋಧಿಯಾಗುವುದಲ್ಲದೆ, ಜನರ ಅಪವಾದಕ್ಕೂ ಗುರಿಯಾಗುತ್ತೇನೆ. ವಿವಾಹಮಾಡಿಕೊಳ್ಳದಿದ್ದರೆ, ನನ್ನಲ್ಲಿ ಅನುರಕ್ತಳಾದ ಇವಳನ್ನು ಶಂಬರನು ಆಸುರವಿವಾಹದಿಂದ ಪರಿಗ್ರಹಿಸುವನು. ಕೂಡಲೆ ಇವಳು ದೇಹತ್ಯಾಗವನ್ನು ಮಾಡುವಳು. ಮಾಧವನು ಉತ್ಕ್ರಮಣ ಕಾಲದಲ್ಲಿ ಹೇಳಿದ ಮಾತು ನಿಜವಾಯಿತು. ಅಪ್ರಾರ್ಥಿತವಾಗಿ ತನ್ನನ್ನು ಧರ್ಮಪತ್ನಿಯಾಗಿ ಪರಿಗ್ರಹಿಸೆಂದು ಪ್ರಾರ್ಥಿಸತಕ್ಕ ಬಾಲೆಯನ್ನು ನಿರಾಕರಿಸುವುದು ಧರ್ಮವಾಗಿಲ್ಲ. ಇದಲ್ಲದೆ, ಈಕೆಯು ಅನಾಥಳು ; ನನ್ನನ್ನು ನಾಥನನ್ನಾಗಿಯೂ ಪತಿಯನ್ನಾಗಿಯೂ ವರಿಸಿ ಇದ್ದಾಳೆ. ಈ ಆರ್ಯಕೀರ್ತಿ ಮೊದಲಾದವರು, ಈ ಪ್ರಾರ್ಥನೆಯನ್ನು ವಿಶೇಷವಾಗಿ ಅನುಮೋದಿಸುತಲಿದ್ದಾರೆ. ಇವಳನ್ನು ವಿವಾಹಮಾಡಿಕೊಳ್ಳುವುದು, ಅನೇಕ ಅಪಾಯಗಳಿಗೆ ಆಸ್ಪದವಾಗುತ್ತದೆ. ಆದರೂ ಚಿಂತೆಯಿಲ್ಲ. ಹಿರಿಯರಾದ ಸತ್ಯವತೀ ಸತ್ಯಶರ್ಮರ ಪ್ರಾರ್ಥನೆಯನ್ನು ಉಲ್ಲಂಘಿಸುವದು ಧರ್ಮವಲ್ಲ. ಬಂದ ಕಷ್ಟ