ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೮

ಭಾರತೀಯರ ಇತಿಹಾಸವು.

ಘೋರ ಕಾರ್ಯಗಳಾದರೂ ನನ್ನ ರಾಜ್ಯದೊಳಗೆ ಒದಗಿದ್ದೇ ಆದರೆ ನನಗೆ ಬಹು ವ್ಯಸನವಾಗುವದು. ನನ್ನನ್ನು ಕುರಿತು ಯಾರಾದರೂ ಅಪರಾಧ ಮಾಡಿದರೂ ಅದನ್ನು ನಾನು ಸೈರಿಸುವೆನು. ಕಾಡು ಜನರು ಕೂಡ ಒಳ್ಳೇ ರೀತಿಯಿಂದ ನಡೆದುಕೊಂಡು ಸುಖದಿಂದ ಬಾಳಿರಬೇಕೆಂದು ಸಮ್ರಾಟನ ಅಪೇಕ್ಷೆಯಿದ್ದು, ಎಲ್ಲರೂ ಸ೦ಯಮನ, ಮನಃಶಾಂತಿಗಳಿ೦ದೊಡಗೂಡಿ ಬಾಳತಕ್ಕದ್ದು. ಧರ್ಮದಿಂದ ಜನರನ್ನು ಗೆಲಿಯುವದೇ ನಿಜವಾದ ಗೆಲವು” ಎಂದು ಮುಂತಾಗಿ ರಾಜಶಾಸನ ಬರೆಯಿಸಿದನು. ಅಶೋಕನು ತನ್ನ ಕೈಕೆಳಗಿನ ಅಧಿಕಾರಿಗಳಿಗೆ ಬರೆದ ಶಾಸನಗಳಲ್ಲಿ "ಪ್ರಜೆಗಳೇ ನನ್ನ ಮಕ್ಕಳು ” ಎಂದು ನುಡಿದು ಅವರನ್ನು ಒಳ್ಳೇ ಪ್ರೇಮದಿಂದಲೂ, ಸಮಾಧಾನದಿಂದಲೂ ರಕ್ಷಿಸಬೇಕೆಂದೂ ಹೇಳಿದ್ದಲ್ಲದೆ, ಕಾಡು ಮೇಡುಗಳಲ್ಲಿರುವ ಜನರ ಮನವೊಲಿಸಿ, ಅವರನ್ನು ಸನ್ಮಾರ್ಗಕ್ಕೆಳೆಯಲಿಕ್ಕೂ ಅಲ್ಲಲ್ಲಿ ಬೌದ್ಧಮತಪ್ರಸಾರಕರನ್ನು ಕಳಿಸಿದನು.

ಅಶೋಕ ಚಕ್ರವರ್ತಿಯ ರಾಜನೀತಿ:- ಅಶೋಕ ಚಕ್ರವರ್ತಿಯ ಧರ್ಮಛತ್ರದ ನೆರಳಲ್ಲಿ ಇಡೀ ಹಿಂದುಸ್ಥಾನವು ತಣಿದಿದ್ದಲ್ಲದೆ, ಅಫಗಾಣಿಸ್ಥಾನ, ಬಲೂಚಿಸ್ಥಾನ, ಕಾಶ್ಮೀರ, ನೇಪಾಳಗಳು ಕೂಡ ವಿಶಾಲವಾದ ವಟವೃಕ್ಷದ ನೆರಳಿನಲ್ಲಿ ಸಾವಿರಾರು ಪ್ರಾಣಿಗಳು ಆಶ್ರಯಿಸಿಕೊಂಡಿರುವಂತೆ ನಿಶ್ಚಿಂತೆಯಿಂದಿದ್ದವು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹೇಳಿರುವಂತೆ ಅ ಶೋಕನ ರಾಜ್ಯಪದ್ಧತಿಯು ನಡೆದಿದ್ದಿತು. ಮೇಲಾಗಿ ಅರಸನು ಕೂಡ ತನ್ನ ದಿನದ ಆಚರಣೆಯನ್ನು ಅರ್ಥಶಾಸ್ತ್ರದೊಳಗೆ ಹೇಳಿದಂತೆ ರಾಜನು ಇರಬೇಕಾದ ರೀತಿಯಲ್ಲಿಯೇ ಇಟ್ಟು ಕೊ೦ಡಿದ್ದನು. ತೇಜಃಪೂರ್ಣವಾದ ತ್ಯಾಗಬುದ್ದಿಯಿ೦ದಲೂ ಭೂತ ದಯೆಯಿಂದಲೂ ಆತನ ಮನಸು ತಿಳಿದುಕೊಂಡದ್ದರಿ೦ದ ಪರಂಪರೆಯಿ೦ದ ಬ೦ದ ಮಾ೦ಸಾಹಾರ, ಬೇಟೆ, ರಾಜವಿಲಾಸ ಅವುಗಳನ್ನೆಲ್ಲ ಅರಮನೆಯಿಂದ ಗಡಿಪಾರು ಮಾಡಿದನು. ಈತನು ಪ್ರಜೆಗಳ ಸಣ್ಣ ಪುಟ್ಟ ಗೋಳುಗಳನ್ನು ಸ್ವತಃ ಕೇಳಿಕೊಂಡು ನಿವಾರಿಸಲಿಕ್ಕೆ ಯತ್ನಿಸುತ್ತಿದ್ದನು. ತಾನು ತನ್ನ ಪೂರ್ವ ವಯಸ್ಸಿನಲ್ಲಿ ಪ್ರಜೆಗಳ ಸುಖದುಃಖಗಳನ್ನು ಲಕ್ಷಿಸದೆ ಉನ್ಮತ್ತನಾಗಿದ್ದುದಕ್ಕೆ ಕಡು ಕಳವಳಗೊ೦ಡು ಒಂದು