ಪುಟ:ಭಾರತ ದರ್ಶನ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ದರ್ಶನ

ಅಧ್ಯಾಯ ೧


ಅಹಮದ್‌ನಗರದ ಕೋಟೆ

೧. ಇಪ್ಪತ್ತು ತಿಂಗಳು

ಅಹಮದ್ ನಗರದ ಕೋಟೆ : ಏಪ್ರಿಲ್ ಹದಿಮೂರು, ೧೯೪೪

ನಮ್ಮನ್ನು ಇಲ್ಲಿಗೆ ಕರೆತಂದು ಆಗಲೇ ಇಪ್ಪತ್ತು ತಿಂಗಳ ಮೇಲಾದವು ; ನನ್ನ ಒಂಭತ್ತನೇ ಜೈಲು ಯಾತ್ರೆಯಲ್ಲಿ ಇಪ್ಪತ್ತು ತಿಂಗಳು ಮಿಾರಿವೆ. ನಾವು ಇಲ್ಲಿಗೆ ಬಂದಾಗ ಕತ್ತಲು ಕವಿದ ಆಕಾಶದ ಬೆಳ್ಳೆರೆಯಂತೆ ಬಾಲಚಂದ್ರನು ನಮ್ಮನ್ನು ಸ್ವಾಗತಿಸಿದನು. ವೃದ್ಧಿ ಚಂದ್ರನ ಶುಕ್ಲ ಪಕ್ಷ ಆರಂಭವಾಗಿತ್ತು. ಅಂದಿನಿಂದ, ಪ್ರತಿ ಅಮಾವಾಸ್ಯೆ ಕಳೆದೊಡನೆ ನನ್ನ ಸೆರೆಮನೆವಾಸದಲ್ಲಿ ಒಂದು ತಿಂಗಳು ಕಳೆಯಿತೆಂದ ಜ್ಞಾಪಕವಾಗುತ್ತದೆ. ನನ್ನ ಹಿಂದಿನ ಸೆರೆಮನೆವಾಸವೂ ಹೀಗೆಯೇ ಸೊಡರಸಾಲು ಹಬ್ಬವಾದ ದೀಪಾವಳಿ ಮುಗಿದ ತಾರುಣ್ಯದಲ್ಲಿಯೇ ಶುಕ್ಲ ಪಕ್ಷದಿಂದ ಆರಂಭವಾಯಿತು. ನನ್ನ ಸೆರೆಮನೆವಾಸದಲ್ಲಿ ಸದಾ ನನ್ನ ಒಡನಾಡಿಯಾದ ಚಂದ್ರನು ನಮ್ಮ ಪರಿಚಯ ಹತ್ತಿರವಾದಂತೆಲ್ಲ, ಪ್ರಪಂಚದ ಸೊಬಗನ್ನೂ , ಅನಂತವಾದ ಮೆರವಣಿಗೆಯ೦ತೆ ಒಂದನ್ನೊಂದು ಹಿಂಬಾಲಿಸುವ ಜೀವನದ ಉಬ್ಬರವಿಳಿತಗಳನ್ನೂ, ನೆಳಲು ಬೆಳಕುಗಳನ್ನೂ ಸಾವುಮರುಹುಟ್ಟುಗಳನ್ನೂ ಜ್ಞಾಪಿಸುತ್ತ ನನಗೆ ಬಹಳ ಆ ಪ್ರನಾಗಿದ್ದಾನೆ. ಅದೇ ಚಂದ್ರ, ಆದರೂ ಸದಾ ಪರಿವರ್ತನೆ. ಸಂಜೆಗತ್ತಲಿನಲ್ಲಿ ನೆರಳು ಬೃಹದಾಕಾರವಾಗಿ ಬೆಳೆವ ವೇಳೆಯಲ್ಲಿ, ನಡುರಾತ್ರಿಯ ಕಾಳಮೌನದಲ್ಲಿ, ಉಷೆಯ ಉಸಿರೂ ಮರ್ಮರನಿನಾದವೂ ಮೂಡುವ ಎಳನೇಸರಿನ ಆಶೆಯನ್ನು ತೋರುವ ವೇಳೆಯಲ್ಲಿ ಚಂದ್ರನನ್ನು ಬೇರೆ ಬೇರೆ ಕಲಾರೂಪಗಳಲ್ಲಿ ಭಾವಗಳಲ್ಲಿ ನೋಡಿದ್ದೇನೆ. ಏಕೆಂದರೆ ಚಂದ್ರನ ಗಾತ್ರ ಮತ್ತು ರೂಪದಿಂದ ದಿನಗಳನ್ನೂ, ತಿಂಗಳನ್ನೂ ಲೆಕ್ಕ ಮಾಡಲು ಚಂದ್ರನೆಷ್ಟು ಸಹಕಾರಿ ! ತಿಂಗಳಿನ ದಿನವನ್ನು ಸ್ವಲ್ಪ ನಿಕರವಾಗಿಯೇ ಹೇಳಬಹುದು. ಆಗಾಗ ಸ್ವಲ್ಪ ತಿದ್ದಬೇಕಾಗಿ ಬಂದರೂ ಅದು ಒಂದು ಸುಲಭ ಪಂಚಾಂಗ, ಹೊಲಗದ್ದೆಗಳ ರೈತನಿಗೆ ಕಳೆದ ದಿನಗಳನ್ನು ಲೆಕ್ಕ ಮಾಡುವುದಕ್ಕೂ, ಕ್ರಮವಾಗಿ ಪರಿವರ್ತನೆಯಾಗುವ ಋತುಗಳನ್ನು ಅಳೆಯುವದಕ್ಕೂ ಸಹಕಾರಿ.

ಮೂರು ವಾರಗಳು ಪ್ರಪಂಚದ ಯಾವ ಸಮಾಚಾರವೂ ಇಲ್ಲದೆ ಇಲ್ಲಿ ಕಳೆದುಹೋದವು, ಭೇಟಿಗಳು, ಕಾಗದ ಪತ್ರಗಳು, ವೃತ್ತ ಪತ್ರಿಕೆ, ರೇಡಿಯೊ ಈ ಯಾವ ಸಂಬಂಧವೂ ಇಲ್ಲ. ನಮ್ಮ ಮೇಲೆ ಕಾವಲಿದ್ದ ಅಧಿಕಾರಿಗಳ ವಿನಾ ನಾವು ಇಲ್ಲಿರುವುದು ಯಾರಿಗೂ ತಿಳಿಯದ ರಾಜರಹಸ್ಯವೆಂದು ಭಾವಿಸಲ್ಪಟ್ಟಿತ್ತು : ಪಾಪ! ರಹಸ್ಯ ಮಾತ್ರ ಭಾರತಕ್ಕೆಲ್ಲ ತಿಳಿದಿತ್ತು. ಅನಂತರ ವೃತ್ತ ಪತ್ರಿಕೆಗಳು, ಕೆಲವು ವಾರಗಳ ನಂತರ ಸವಿಾಪ ಬಂಧುಗಳಿಂದ ಮನೆವಿಷಯ ಕಾಗದ ಪತ್ರಗಳು ಬರಲಾರಂಭಿ ಸಿದವು. ಆದರೆ ಈ ಇಪ್ಪತ್ತು ತಿಂಗಳಲ್ಲಿ ಯಾವ ಭೇಟಿಯೂ ಇಲ್ಲ. ಇತರ ಯಾವ ಸಂಪರ್ಕವೂ ಇಲ್ಲ.

ವೃತ್ತ ಪತ್ರಿಕೆಗಳಲ್ಲಿ ಬಂದ ವರ್ತಮಾನವೆಲ್ಲ ಸರಕಾರದಿಂದ ಕತ್ತರಿ ಪ್ರಯೋಗವಾಗಿ ಬರುತ್ತಿತ್ತು. ಆದರೂ ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ದಹಿಸುತ್ತಿದ್ದ ಯುದ್ದಗತಿಯೂ, ಭಾರತದಲ್ಲಿ ನಮ್ಮ ಜನರ ಮೇಲೆ ಅದರ ಪ್ರಭಾವವೂ ತಕ್ಕಮಟ್ಟಿಗೆ ಅರ್ಥವಾಗುತ್ತಿದ್ದವು ವಿಚಾರಣೆಯಿಲ್ಲದೆ ಸೆರೆಮನೆ