ಪುಟ:ಭಾರತ ದರ್ಶನ.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೯೨

ಭಾರತ ದರ್ಶನ

ನಾರ್ವೆ ಮತ್ತು ಸ್ವೀಡನ್ ಮುತ್ತಿಗೆ, ಆಮೇಲೆ ಅತ್ಯಲ್ಪಕಾಲದಲ್ಲಿ ಫ್ರಾನ್ಸಿನ ಆಶ್ಚರ್ಯ ರೀತಿಯ ಪತನ ಇವುಗಳಿಂದ ಯುದ್ಧ ಪರಿಸ್ಥಿತಿಯಲ್ಲಿ ತೀವ್ರ ವ್ಯತ್ಯಾಸವಾಗಿ ಜನರ ಮನಸ್ಸಿನ ಮೇಲೆ ಅಗಾಧ ಪರಿಣಾಮವಾಯಿತು. ಆ ಪರಿಣಾಮ ವಿವಿಧ ರೀತಿ ಇದ್ದರೂ ಫ್ರಾನ್ಸಿನ ಮೇಲೂ, ಡಂಕರ್ಕ್ ನಂತರ ಮತ್ತು ವಿಮಾನ ಧಾಳಿ ಸಮಯದಲ್ಲಿ ಇಂಗ್ಲೆಂಡಿನ ಮೇಲೂ ಜನರಿಗೆ ವಿಶೇಷ ಸಹಾನುಭೂತಿ ಹುಟ್ಟಿತು. ಶಾಸನ ಭಂಗ ಚಳವಳಿಯನ್ನು ಹೂಡಬೇಕೆಂದಿದ್ದ ಕಾಂಗ್ರೆಸ್ಸು ಸಹ ಸ್ವತಂತ್ರ ಇಂಗ್ಲೆಂಡಿನ ಅಸ್ತಿತ್ವಕ್ಕೆ ಸಂಚಕಾರ ಬಂದೀತೆಂಬ ಸಮಯದಲ್ಲಿ ಶಾಸನ ಭಂಗ ಚಳವಳಿಯ ಯೋಚನೆ ಬಿಟ್ಟಿತು. ಇಂಗ್ಲೆಂಡಿನ ವಿಷಮ ಪರಿಸ್ಥಿತಿ ಉಪಯೋಗಿಸಿಕೊಂಡು ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಹಿಂದೆಗೆದರು. ತಮ್ಮ ಆ ನೀತಿಯನ್ನು ಸ್ಪಷ್ಟ ಸಾರಿದರು. ಸಧ್ಯಕ್ಕಂತೂ ಎಲ್ಲೆಲ್ಲಿಯೂ ಶಾಸನ ಭಂಗ ಚಳವಳಿಯೂ ಹಿಂದೆ ಬಿದ್ದಿತು.

ಬ್ರಿಟಿಷ್ ಸರಕಾರದೊಡನೆ ಒಂದು ಒಪ್ಪಂದಕ್ಕೆ ಬರಲು ಕಾಂಗ್ರೆಸ್ ಇನ್ನೂ ಒಂದು ಪ್ರಯತ್ನ ಮಾಡಿತು. ಹಿಂದಿನ ಪ್ರಯತ್ನದಲ್ಲಿ ಬಹಳ ದೂರದೃಷ್ಟಿ ಇಟ್ಟುಕೊಂಡು, ಭಾರತದ ರಾಜಕೀಯ ಪರಿವರ್ತನೆಯ ಜೊತೆಗೆ ಯುದ್ಧದ ಗುರಿಯನ್ನೂ ತಿಳಿಸಬೇಕೆಂದು ಕೇಳಲಾಗಿತ್ತು. ಆದರೆ ಈ ಬಾರಿ ಭಾರತದ ವಿಷಯ ಮಾತ್ರ ಸ್ಪಷ್ಟ ಪಡಿಸಲು ಕೇಳಿದೆವು. ಭಾರತದ ಸ್ವಾತಂತ್ರ ಒಪ್ಪಿ ಕೇಂದ್ರದಲ್ಲಿ ಎಲ್ಲ ಪಕ್ಷಗಳ ಸಹಕಾರದಿಂದ ರಾಷ್ಟ್ರೀಯ ಸರಕಾರ ನೇಮಿಸಿರೆಂದು ಕೇಳಿದೆವು. ಅದಕ್ಕೆ ಬ್ರಿಟಿಷ್ ಪಾರ್ಲಿಮೆಂಟಿನ ಯಾವ ಹೊಸ ಶಾಸನವೂ ಬೇಕಾಗಿರಲಿಲ್ಲ. ಆಗಿನ ಶಾಸನ ಚೌಕಟ್ಟಿನಲ್ಲಿಯೇ ವೈಸರಾಯ್ ರಾಷ್ಟ್ರೀಯ ಸರಕಾರ ನೇಮಿಸಬೇಕೆಂದು ಸಲಹೆ ಮಾಡಿದೆವು. ಈ ವ್ಯತ್ಯಾಸ ಅತಿ ಮುಖ್ಯವಾದರೂ ಒಪ್ಪಂದದಿಂದ ಸತ್ಸಂಪ್ರದಾಯದಿಂದ ಮಾಡಲು ಸಾಧ್ಯವಿತ್ತು. ಶಾಸನಬದ್ದ ವಿಧಾಯಕ ಪರಿವರ್ತನೆ ಅವಶ್ಯವಿದ್ದರೂ ಅವುಗಳನ್ನು ಹಿಂದಿನಿಂದ ಚರ್ಚೆಮಾಡಿ ಅನುಕೂಲ ಸಮಯ ಒದಗಿದಾಗ ಮಾಡಬಹುದಿತ್ತು. ಆದರೆ ಭಾರತದ ಸ್ವಾತಂತ್ರ್ಯದ ಹಕ್ಕು ಮಾತ್ರ ಒಪ್ಪುವುದು ಅವಶ್ಯವಿತ್ತು. ಈ ಸರತ್ತು ಒಪ್ಪಿದರೆ ಪೂರ್ಣ ಸಹ ಕಾರಕೊಡಲು ಸಿದ್ಧರಿದ್ದೇವೆ ಎಂದು ಹೇಳಿದೆವು.

ಶ್ರೀ ಚಕ್ರವರ್ತಿ ರಾಜಗೋಪಾಲಾಚಾರ್ಯರ ಈ ಸಲಹೆಯಿಂದ ಪದೇ ಪದೇ ಸಾರಿದ್ದ ಕಾಂಗ್ರೆಸ್ ಬೇಡಿಕೆ ಸ್ವಲ್ಪ ಕಡಮೆಯಾಯಿತು. ಆದರೆ ಯಾವ ಶಾಸನದ ತೊಂದರೆಯೂ ಇಲ್ಲದೆ ಒಡನೆ ಕಾರ್ಯಗತ ಮಾಡಲು ಅದು ಸಾಧ್ಯವಿತ್ತು. ಇದರಲ್ಲಿ ಇತರ ಪಕ್ಷಗಳ ಮತ್ತು ಪಂಗಡಗಳ ಸಹಕಾರ ಪಡೆಯುವ ಪ್ರಯತ್ನವೂ ಇತ್ತು. ಏಕೆಂದರೆ ಯಾವ ರಾಷ್ಟ್ರೀಯ ಸರಕಾರವೇ ಆಗಲಿ ಅದು ಸಂಯೋಜಿತ ಸರಕಾರ ವಾಗಿರಬೇಕಾದ ಅವಶ್ಯಕತೆ ಇತ್ತು. ಭಾರತದಲ್ಲಿನ ಬ್ರಿಟಿಷ್ ಸರಕಾರದ ವಿಶೇಷ ಪರಿಸ್ಥಿತಿಯನ್ನು ಸಹ ಗಮನಕ್ಕೆ ತೆಗೆದುಕೊಳ್ಳಲಾಗಿತ್ತು. ರಾಷ್ಟ್ರೀಯ ಸರಕಾರದ ತೀರ್ಮಾನ ತಳ್ಳಿ ಹಾಕಲು ಅಸಮರ್ಥನಿದ್ದರೂ ವೈಸರಾಯ್‌ಗೂ ಸ್ಥಾನವಿತ್ತು. ಆಡಳಿತ ವರ್ಗದ ಮುಖ್ಯ ಅಧಿಕಾರಿಯಾಗಿ ಸರಕಾರದೊಡನೆ ನಿಕಟ ಸಂಬಂಧ ಇಟ್ಟುಕೊಂಡು ತನ್ನ ಪ್ರಭಾವ ಬೀರಲು ಪೂರ್ಣ ಅವಕಾಶವಿತ್ತು. ನನ್ನ ಸಲಹೆಯಂತೆ ಯುದ್ದ ಯಂತ್ರವೆಲ್ಲ ಸೇನಾಧಿಪತಿಯ ಆಡಳಿತದಲ್ಲಿಯೇ ಇತ್ತು. ಬ್ರಿಟಿಷರು ಕಟ್ಟಿದ ಆಡಳಿತ ವರ್ಗವೂ ಹಾಗೆ ಉಳಿದಿತ್ತು. ಈ ಬದಲಾವಣೆಯ ಒಂದು ಮುಖ್ಯ ಗುರಿ ಎಂದರೆ ಆಡಳಿತದಲ್ಲಿ ಒಂದು ಹೊಸ ಆಸಕ್ತಿ, ಹೊಸದೃಷ್ಟಿ, ಕಾರ್ಯ ದಕ್ಷತೆಗಳನ್ನು ತಂದು ಯುದ್ಧ ಸಿದ್ಧತೆಯಲ್ಲಿ ಮತ್ತು ದೇಶದ ಎದುರಿನ ಕಠಿಣ ಸಮಸ್ಯೆಗಳ ಪರಿಹಾರ ಕಾಠ್ಯದಲ್ಲಿ ಜನರ ಹೆಚ್ಚಿನ ಸಹಕಾರ ಪಡೆಯುವುದು ಮಾತ್ರ ಆಗಿತ್ತು. ಯುದ್ಧದನಂತರದ ಭಾರತದ ಸ್ವಾತಂತ್ರ್ಯಕ್ಕೆ ಭರವಸೆ ಕೊಟ್ಟು ಈ ಬದಲಾವಣೆಗೆ ಒಪ್ಪಿದರೆ ಭಾರತದಲ್ಲಿ ಒಂದು ಮಾನಸಿಕ ಪರಿವರ್ತನೆಯಾಗಿ ಹೊಸ ಚೈತನ್ಯ ಮೂಡಿ ಯುದ್ಧ ಪ್ರಯತ್ನದಲ್ಲಿ ಪೂರ್ಣ ಸಹಕಾರ ದೊರೆಯುವುದೆಂದೆವು.

ಹಿಂದಿನ ಎಲ್ಲ ಬೇಡಿಕೆಗಳನ್ನೂ, ಅನುಭವವನ್ನೂ ಗಮನಿಸಿ ಕಾಂಗ್ರೆಸ್ಸು ಈ ನಿರ್ಣಯಕ್ಕೆ ಬಂದುದು ಸುಲಭದ ಕೆಲಸವಾಗಿರಲಿಲ್ಲ. ಈ ರೀತಿ ಬಂಧನಗಳಿಟ್ಟುಕೊಂಡು ರಚಿಸಿದ ರಾಷ್ಟ್ರೀಯ ಸರಕಾರ ಅಶಕ್ತವೂ ಅಸಹಾಯಕವೂ ಆಗುವುದೆಂಬ ಭಯವಿತ್ತು. ಕಾಂಗ್ರೆಸ್ ಪಕ್ಷದಲ್ಲೇ ಬಹಳ ವಿರೋಧವಿತ್ತು. ದೀರ್ಘ