೧೦೧
ಸಂಬಳವನ್ನು ತರುತ್ತಿದ್ದರೂ, ನಯ ವಿನಯ ನಡವಳಿಕೆಯು ಇದ್ದರೂ, ಅವನ ಜಾತಿಯಲ್ಲಿ ಯಾರೂ ಹೆಣ್ಣು ಕೊಡಲು ಬರಲಿಲ್ಲ. ಹೆಣ್ಣನ್ನು ಕೇಳಲು ಆ ಪಂಗಡದವರಲ್ಲಿ ಗಂಡಿನವರು ಹೋಗುವ ವಾಡಿಕೆಯಿರಲಿಲ್ಲ. ಹಾಗಾಗಿ ಮದುವೆಯ ಮಾತು ಎದ್ದಿರಲಿಲ್ಲ. ಕಡೆಗೊಮ್ಮೆ ಧರ್ಮ ಕರ್ಮ ಸಂಯೋಗವಾಯಿತು ; ಅಂದರೆ ನಾಯಿ ಹಸಿದಿತ್ತು ; ಅನ್ನವೂ ಹಳಸಿತ್ತು ; ಮದುವೆಯೂ ಆಯಿತು. ತಾಳಿದವ ಬಾಳಿಯಾನು ಎಂದು ಹಿರಿಯರಂದಿದ್ದರು. ಯೆಂಟ ತಾಳಿದ್ದ, ಕಡೆಗೆ ತಾಳಿ ಕಟ್ಟಿದ ಅವಳಿಗೆ, ಪದವೀಧರೆಯಾದ ಸೌಜನ್ಯಮೂರ್ತಿಯಾದ ಸುಲಕ್ಷಣ ಹೆಂಡತಿಯು ದೊರೆತಿದ್ದಳು. ನ್ಯಾಯವಾಗಿ ಲಕ್ಕವ್ವ ಹಿರಿ ಹಿಗ್ಗಬೇಕು.
ಆದರೆ ಲಕ್ಕವ್ವನಿಗೆ ಬ್ಲಡ್ಪ್ರೆಷರ್ ಅತಿಯಾಗಿತ್ತು. ಹೆಣ್ತನದ ಸಂತಾನ ಸೌಭಾಗ್ಯದ ವಯಸ್ಸು ಮೀರಿ ಹೋಗಿತ್ತು. ಆದರದ ಮಾತುಗಳನ್ನಾಡಿ ಆರೈಕೆ ಮಾಡಲು ಮುದಿ ಗಂಡ ಮುಂದೆ ಬರುತ್ತಿರಲಿಲ್ಲ. ಮಗನೊಬ್ಬನೇ ಹೇಗಿದ್ದೀ ಅಮ್ಮಾ ಎಂದನ್ನುತ್ತಿದ್ದ. ಔಷಧಿಗಳನ್ನು ತಂದುಕೊಡುತ್ತಿದ್ದ. ಮದುವೆಯಾದಮೇಲೆ, ಎಂದಿನಂತೆಯೇ ಮಗ ಆದರಿಸುತ್ತಾನೆಯೇ? ಎನ್ನುವ ಅನುಮಾನವು ಸ್ವಾಭಾವಿಕವಾಗಿ ಹುಟ್ಟಿತು. ಮುಂದೆ ನನ್ನ ಗತಿ ಏನು ಎನ್ನುವ ಆತಂಕವೂ ಕಾಡತೊಡಗಿತು. ಹಿಡಿದಿದ್ದೊಂದು ನಡೆಗೋಲು ಈಗ ಜಾರಿಕೊಂಡರೆ ರೋಗಗ್ರಸ್ತಳಾದ ತನ್ನ ಭವಿಷ್ಯವು ಏನಾಗಬಹುದು ಎಂಬ ಭಯವೂ ಮುತ್ತಿಕೊಂಡಿತು. ಇವೆಲ್ಲದರಿಂದ ಆಕೆಯ ಮನಸ್ಸಿನಲ್ಲಿ ಭ್ರಮೆ (Hallucination) ಉಂಟಾಯಿತು. ಮುಳುಗುವವರಿಗೆ ಸಿಕ್ಕ ಹುಲ್ಲು ಕಡ್ಡಿಯಂತೆ ಭ್ರಮೆಯು ಮನಸ್ಸಿಗೆ ನಡೆಗೋಲಾಯಿತು. ಲಕ್ಕವ್ವನ ಮನಸ್ಸಿನಲ್ಲಿ, ಸೊಸೆಯ ಹೆಗ್ಗತ್ತಿನ ಮೇಲಿನ ಬಿಳಿಯ ಮಚ್ಚೆಯು, ಆ ಭ್ರಮೆಯ ಫಲಿತಾಂಶ. ಮೋಸ ಮಾಡಿ ಈ ಹೆಣ್ಣನ್ನು ನನ್ನ ಮಗನಿಗೆ ಕಟ್ಟಿದರು. ಮುಂದೆ ಇವಳ ಮೈಮೇಲೆಲ್ಲಾ ಇದು ಹರಡಿ ಅವಲಕ್ಷಣವಾದ ಬಿಳಿ ತೊನ್ನಾಗುತ್ತದೆ ಎನ್ನುವ ನಂಬಿಕೆಯನ್ನು ಮಗನಲ್ಲಿ ಮೂಡಿಸಿದರೆ, ಹೆಂಡತಿಯತ್ತ ಮಗ ಹೆಚ್ಚು ವಾಲುವುದಿಲ್ಲ. ಅಮ್ಮನ ಪಕ್ಷಕ್ಕೇ ಬೆಂಬಲವಾಗುತ್ತಾನೆ. ಹೀಗೆಲ್ಲಾ ವಿಚಾರವನ್ನು ಲಕ್ಕವ್ವನು ಮಾಡಲಿಲ್ಲ. ವಿಚಾರವನ್ನು ಎಲ್ಲರೂ ಒಪ್ಪುವಂತೆ ಮಾಡುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅವಳ ಅರಿವಿಲ್ಲದೆಯೇ ಆಳ ಮನಸ್ಸು ಈ ಜಾಲವನ್ನು ಹೂಡಿ, ಬಿಳಿ ಮಚ್ಚೆಯ ಭ್ರಮೆಯನ್ನು ಹುಟ್ಟಿಸಿತ್ತು. ಅದನ್ನು ಲಕ್ಕವ್ವ ನಂಬಿದಳು. ನಂಬದೆ ಇದ್ದರೆ ಅದನ್ನು ಭ್ರಮೆ ಎಂದು ಏಕೆ ಹೆದರಿಸುತ್ತಾರೆ ? ಭ್ರಮೆ ಹಿಡಿದವರಿಗೆ ಭ್ರಮೆಯೇ ನಿತ್ಯ, ಅದೇ ಸತ್ಯ. ಹೆಣ್ಣಿನ