ಮನಮಂಥನ
ಆಗ ಆಕೆಯ ಗಂಡ ಮಧ್ಯೆ ಬಾಯಿ ಹಾಕಿದ. ನನ್ನ ಕಡೆಗೆ ತಿರುಗಿ,
'ನೀವೂ ಸರಿ ! ಇವಳ ಮಾತನ್ನು ಕೇಳಿ. ಆ ಮನೆಯಲ್ಲಿ ಹಾಗಾಯಿತು ಎನ್ನುವುದು ನಲವತ್ತು ಐವತ್ತು ವರ್ಷಗಳ ಹಿಂದಿನ ಕತೆ. ಆ ಮೇಲೆ ಆ ಮನೆಯಲ್ಲಿ ನನಗೆ ತಿಳಿದ ಹಾಗೆ ಮುವತ್ತು ನಲವತ್ತು ಹೆರಿಗೆಗಳಾಗಿವೆ. ಅವರೆಲ್ಲರೂ ಆರೋಗ್ಯವಾಗಿಯೇ ಇದ್ದರು. ಈ ಸೈತಾನ್ ಅವರು ಯಾರನ್ನೂ ಕಾಡಲಿಲ್ಲ. ಹಸಿಮೈಯಿನ ಆ ಪುಟ್ಟ ಬಾಣಂತಿಯರನ್ನೆಲ್ಲಾ ಬಿಟ್ಟು, ಈ ಮುದುಕೀನ ಅಮರಿಕೊಳ್ಳುಕ್ಕೆ ಆ ಸೈತಾನ್ ಕಾದಿದ್ದನೇ?' ಎಂದು ಅವ ತಾನು ಮಾಡಿದುದನ್ನು ಸಮರ್ಥಿಸಿಕೊಂಡ, ಚಾಲೂಕು ಗಂಡ; ಹಳ್ಳಿಯ ಮೊಂಡು ಹೆಣ್ಣನ್ನೂ ಭಂಡತನದಿಂದ ನಿಭಾಯಿಸಿಕೊಳ್ಳಬಲ್ಲ ಎನಿಸಿತು.
ಅಂದಿನ ಚಿಕಿತ್ಸೆಯನ್ನು ಮುಗಿಸಿ 'ನೀನೊಬ್ಬನೇ ಆ ಮೇಲೆ ಬಂದು ನನ್ನನ್ನು ಕಾಣು' ಎಂದು ಗಂಡನಿಗೆ ಹೇಳಿ, ಅವರನ್ನು ಕಳಿಸಿದ್ದಾಯಿತು. . ಆ ಮೇಲೆ ಗಂಡ ಬಂದಾಗ ಬಾವಿಕಟ್ಟೆಯ ಸೈತಾನನ ವಿವರಗಳನ್ನು ಕೇಳಿದೆ. ಅವ ಅಂದ :- * ಬಾವಿಕಟ್ಟೆಯ ಮೇಲೆ ಆ ಸೈತಾನ್ ರಾತ್ರಿಯಲ್ಲಿ ಕೂತಿದ್ದನಂತೆ. ಇವಳೊಂದು ರಾತ್ರಿ ಅಕಸ್ಮಾತ್ ಒಬ್ಬಳೇ ಅತ್ತ ಹೋದಾಗ, ಕತ್ತಲು ಕತ್ತಲಾಗಿದ್ದರೂ ಡಿಖಾವಾಗಿ ಕಾಣಿಸಿತಂತೆ. ಘಟಸರ್ಪದಂತಿತ್ತಂತೆ, ಸೈತಾನನ ತೋಳುಗಳು, ಅವನ್ನು ಬೀಸಿ, ಸೈತಾನ 'ಬಾ' ಎಂದು ಕರೆದನಂತೆ. ಇವಳು ಬೆದರಿ ಬೆವರಿ ಮನೆಯೊಳಕ್ಕೆ ಓಡಿ ಬಂದುಬಿಟ್ಟಳಂತೆ, ಅಲ್ಲಾನ ಪ್ರಾರ್ಥನೆಯನ್ನೂ ಮಾಡಲು ಕೂಡ ಆಗ ಮರೆತುಬಿಟ್ಟಿದ್ದಳಂತೆ, ಇಂತಹ ಕತೆಯನ್ನು ಬೆಳೆದವರು ಯಾರಾದರೂ ನಂಬುತ್ತಾರೆಯೇ, ಡಾಕ್ಟರ್' ಎಂದು. ಒಂದೆರಡು ನಿಮಿಷಗಳೂ ಅವನನ್ನು ದಿಟ್ಟಿಸಿ ನೋಡಿದೆ. 'ನಿನಗೆಷ್ಟು ಜನ ಹೆಂಡತಿಯರು?' ಎಂದು ಕೇಳಿದೆ. ಆ ಜಾತಿಯ ಶ್ರೀಮಂತರನ್ನು ಕೇಳಬೇಕಾದ ಪ್ರಶ್ನೆ. ಇವಳೊಬ್ಬಳೇ, ಡಾಕ್ಟರ್, ಮತ್ತು ಅಂತಹ ಹವ್ಯಾಸದ ಖುಷಿ ನನಗಿಲ್ಲ' ಎಂದ. ನಾ ಕೇಳಿದ ಪ್ರಶ್ನೆಯ ಇಂಗಿತಕ್ಕೆ ಪರಿಪೂರ್ಣವಾದ ಉತ್ತರವನ್ನು ನೀಡಿಲ್ಲ ಎಂದವನಿಗೆ ಅನಿಸಿರಬೇಕು. ಅದಕಾರಣ ಮುಂದುವರೆದು 'ಡಾಕ್ಟರೆ ! ಬಡವರ ಮನೆಯಲ್ಲಿ ಹುಟ್ಟಿ ಬೆಳೆದವ, ನಾನು, ಯಾವ ಪುಣ್ಯವೋ, ಶ್ರೀಮಂತರ ಮನೆಯ ಈ ಹೆಣ್ಣನ್ನು ಮದುವೆ ಮಾಡಿಸಿತು. ಆ ನಂತರ ಯಾವ ವ್ಯಾಪಾರಕ್ಕೆ ನಾನು ಕೈ ಹಾಕಿದರೂ, ಕೊಪ್ಪರಿಗೆ ಹಣ ಲಾಭವಾಗಿ ಸಿಕ್ಕಲಾರಂಭಿಸಿತು. ಅವಳಲ್ಲಿ ತುಂಬಾ ವಿಶ್ವಾಸ ನನಗೆ ಅಷ್ಟೇ ಅಲ್ಲ, ಗೌರವವೂ ಕೂಡ. ಇಷ್ಟು ಹಣ ನನ್ನ ಕೈ ಸೇರಿದೆ. ಆದರೆ ಮದುವೆಯಾಗಿ ಬಂದಾಗಿನಿಂದ ಒಂದು ದಿನವಾದರೂ, ಈ ಒಡವೆ ಮಾಡಿಸಿ ಕೊಡಿ ಎಂದು