ಮಿಂಚು 233
"ಕಳಿಸಿ ಕೊಡ್ತೇನೆ, ಮಾತಾಜಿ, ನಾನೇ ತರ್ತೇನೆ. ಎಕ್ಸ್ ಪ್ರೆಸ್ ಟ್ರಾವಲ್ಸ್ ನವರ ಕಾರು. ಕರೀಮ್ ಅಂತ ಒಳ್ಳೇ ಡ್ರೈವರ್ ಇದ್ದಾನೆ. ಇನ್ನೇನಾದರೂ ಬೇಕೆ ಮಾತಾಜಿ?"
"ಏನೂ ಬೇಡ. ನಾಳೆ ಸಭೆ ಆದ್ಮೇಲೆ ಭೇಟಿಯಾಗೋಣ."
* * *
ರಾತ್ರೆ ವಿಮಾನ ಬಂದ ಸದ್ದಾಯಿತು. ಅದು ಬಂದು ಒಂದು ಗಂಟೆಯಾಯಿತು. ಫೋನ್ ಸರಿಯಾಗಿದೆ ಎಂದು ಖಚಿತ ಮಾಡಿಕೊಳ್ಳಲು ರಿಸೀವರನ್ನೆತ್ತಿ ಕೆಳಗಿಟ್ಟಳು, ಎರಡು ಸಲ. ಟಿಣ್ ಟಿಣ್ ಸದ್ದಾಯಿತು, ಕೆಟ್ಟಿಲ್ಲ.
ಇರುಳು ದಟ್ಟವಾಯಿತು, ದೀಪಗಳು ಮ೦ಕಾದುವು.
"ಇನ್ನು ಯಾರು ಫೋನ್ ಮಾಡ್ತಾರೆ? ಮಾಡಿದರೆ ನಡುರಾತ್ರೆಯೊಳಗೆ ನಕುಲದೇವ್ಜಿ ಮಾಡಬೇಕು. ನಾನು ನೋಡ್ಕೊಳ್ತೀನಿ, ನೀನು ಹೋಗು, ಪರಶುರಾಮ್. ನಾಳೆ ಬೆಳಗ್ಗೆ ಅನಾಥಾಶ್ರಮದ ವಸತಿಗೃಹದ ಉದ್ಘಾಟನೆ. ಮರೀಬೇಡ."
"ಏಳು ಗಂಟೆಗೇ ಬರ್ತೀನಿ, ಮಾತಾಜಿ."
ಒಂಭತ್ತು ಗಂಟೆಯ ಅಲ್ ಇಂಡಿಯಾ ರೇಡಿಯೊ ವಾರ್ತಾ ಬುಲೆಟಿನ್ನಲ್ಲಿ ಕಿಷ್ಟಿಂಧೆಯ ಪ್ರಸ್ತಾಪವಿರಲಿಲ್ಲ. ನಾಳೆ ಸಂಜೆ ಆರು ಗಂಟೆಯ ವಾರ್ತೆಯಲ್ಲಿರುತ್ತೆ.
ಲೇಹ್ಯ ? ನಿದ್ದೆ ಮಾತ್ರೆ?
ಹತ್ತು, ಹನ್ನೊಂದು, ಹನ್ನೆರಡು... ಗಾಢ ಮೌನ.
ನಿದ್ದೆ ಬರಲಪ್ಪ, ಒಂದಿಷ್ಟು ನಿದ್ದೆ ಬರಲಿ.