ಪುಟ:ಯಶೋಧರ ಚರಿತೆ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

ತಂದುಕೊಂಡುದು ಎಂಬುದನ್ನು ತಿಳಿಯಬಹುದು. ಯಶೋಧರನಿಗೂ ಪೆಣ್
(ಅಮೃತಮತಿ) ತಪ್ಪಿ ನಡೆದಳೆಂದು ಕಂಡಿತಲ್ಲದೆ ಅಷ್ಟವಂಕನಲ್ಲಿ ಅವನು
ಅಪರಾಧವನ್ನು ಕಾಣಲಿಲ್ಲ. ಒಮ್ಮೆ ಅವರಿಬ್ಬರನ್ನೂ ಎರಡು ಭಾಗ ಮಾಡಬೇಕೆಂದು
ಕತ್ತಿಯೆತ್ತಿದ್ದನಾದರೂ ಅದು ಬರಿಯ ರೋಷದಿಂದ.
ಅಮೃತಮತಿಗೆ ತನ್ನ ವ್ಯಭಿಚಾರವು ರಾಜನಿಗೆ ಗೊತ್ತಾಯಿತೆಂದು ತಿಳಿದು
ಬಂದಾಗ ಅವನ ಕೊಲೆಗೂ ಮುಂದಾಗುತ್ತಾಳೆ ; ವಿಷವಿಕ್ಕಿ ಕೊಲ್ಲುತ್ತಾಳೆ. ತನ್ನ
ಕಾಮಕ್ಕೆ ಅಡ್ಡಿಯಾಗುವವನ ಮೇಲೆ ಕ್ರೋಧವುಂಟಾದುದು ಇದಕ್ಕೆ ಕಾರಣ.
ಅನಂತರ ತನ್ನರಮನೆಯಲ್ಲೇ ಆ ಬದಗನನ್ನು ಇರಿಸಿಕೊಳ್ಳುತ್ತಾಳೆ. ಇದನ್ನು
ಆಕೆಯ ಮಗ ಯಶೋಮತಿ ಏಕೆ ತಡೆಯಲಿಲ್ಲವೊ ತಿಳಿಯುವುದಿಲ್ಲ. ಅವನಿಗೆ
ಗೊತ್ತಿಲ್ಲದೆ ಇದು ನಡೆದುದೂ ಅಲ್ಲ. ಸಾಮಾನ್ಯ ಜನರು ಅಮೃತಮತಿಯ
ನೀಚವರ್ತನೆಯ ಕುರಿತು ಆಡಿಕೊಳ್ಳುತ್ತಿದ್ದರೆಂಬುದರಿಂದ ಇದು ಸಿದ್ದವಾಗುತ್ತದೆ.
ಅದೂ ಅಲ್ಲದೆ, “ತೊನ್ನನ ಕೂಟದಿಂದ ನಿನಗೂ ತೊನ್ನೂ ಉಂಟಾಗಿದೆ ; ಈ
ರೋಗಕ್ಕೆ ಮದ್ಯ ಮಾಂಸಗಳು ವಿಷ” ವೆಂದು ಹೇಳಿದರೂ ಅವಳು ಮಗನ
ಮಾತನ್ನೂ ಮನ್ನಿಸಲಿಲ್ಲವಂತೆ! ಎನ್ನುವಾಗ ಅವನಿಗೂ ಅವಳನ್ನೂ ತಡೆಯುವ
ಅಥವಾ ಅವಳನ್ನು ದಂಡಿಸುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಅವನೂ
ಯಶೋಧರನಂತೆ 'ಮಾತೃದೇವ'ನಾಗಿ ಉಳಿದುಕೊಂಡನೆ? ಹೇಗೆ ಹೇಳುವುದು?
ಅಂತೂ ಅಮೃತಮತಿ ಬರಿಯ ಕಾಮುಕ ಸ್ತ್ರೀ ; ಅವಳಿಗೆ ಬದಗನ
ಇಂಪಾದ ಹಾಡೇ ಮುರುಳುಗೊಳಿಸುವ ಆಕರ್ಷಣೆಯಾಯಿತು. ಹಾಗೆ ಹುಚ್ಚಾದ
ಅವಳು ತಾನಾಗಿ ತಿಳಿ'ಯಾಗಲಿಲ್ಲ; ಉಳಿದವರು 'ತಿಳಿ'ಯಾಗಿಸಲು ಯತ್ನಿಸಲಿಲ್ಲ;
ಯತ್ನಿಸಿದ್ದಿರಬಹುದಾದರೂ ಅವರಾರೂ ಸಫಲರಾಗಲಿಲ್ಲ. ಅವಳು ಕಾಮದ
ಕೈಗೊಂಬೆಯಾಗಿ, ಅದಕ್ಕೆ ಅಡ್ಡಿಯಾಗಬಹುದಾಗಿದ್ದ ಗಂಡನನ್ನೂ ಅತ್ತೆಯನ್ನೂ
ವಿಷವಿಕ್ಕಿ ಕೊಲ್ಲುವ ಕ್ರೋಧಕ್ಕೆ ಒಳಗಾಗಿ ಬದುಕಿದ್ದಾಗಲೇ ಕುಷ್ಠದಿಂದ ಕೊಳೆತು,
ಸತ್ತಮೇಲೆ ಧೂಮಪ್ರಭೆಯೆಂಬ ಐದನೆಯ ನರಕದಲ್ಲಿ ಮುಳುಗಿದಳು.
ಬದಗನನ್ನು ಒಲಿದು ಅವಳು ಅವನನ್ನೆ ಅಂತ್ಯಕಾಲದವರೆಗೂ ಬಿಡದೆ
ಆರಾಧಿಸಿದ ಕಾರಣ ಅವಳ ಶುದ್ದಪ್ರಣಯವೆನ್ನಬಹುದೆ? ಹಾಗೆ
ಹೇಳಬಹುದೆಂದಾದರೆ ಅಧರ್ಮದ ವರ್ತನೆಯೆಲ್ಲವನ್ನೂ ಸರಿಯೆಂದು
ಸಮರ್ಥಿಸುವುದಕ್ಕೆ ಸಾಧ್ಯವಾಗದೇ? ಹೋಗಲಿ. ಅವನಾದರೂ ಅವಳನ್ನು
ಒಲಿದಿದ್ದನೆ? ಇಲ್ಲ ; ಒದೆದಿದ್ದ ! ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲಿ
ಈ ಮಾತು ಬರುತ್ತದೆ: