ಪುಟ:ಯಶೋಧರ ಚರಿತೆ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಯಶೋಧರ ಚರಿತೆ

ಭಾವಕನತಿರಸಿಕಂ ಸಂ
ಭಾವಿತನಭ್ಯಸ್ತ ಶಾಸ್ತ್ರನನ್ವಿತನೆನಿಪಾ
ದೇವಂಗೆ ವಿಷಯವಲ್ಲದೆ
ದೇವಾನಾಂಪ್ರಿಯರ್ಗೆ ವಿಷಯವೇ ಸತ್ಕಾವ್ಯಂ

ಕೇಳಲೊಡಂ ಶಬ್ದಾರ್ಥಗು-
ಣಾಳಂಕೃತಿ ರೀತಿಭಾವರಸವೃತ್ತಿಗಳಂ
ಮೇಳವಿಸ [ಲ್] ಬಲ್ಲಂ ಬ
ಲ್ಲಾಳಂ ಸಾಹಿತ್ಯಕಮಳಮತ್ತಮರಾಳಂ

ಸಳನೆಂಬ ಯಾದವಂ ಹೊಯ್
ಸಳನಾದಂ ಶಶಕಪುರದ ವಾಸಂತಿಕೆಯೊಳ್
ಮುಳಿದು ಪಲಿ ಪಾಯ್ದುದುಂ ಹೊಯ್
ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ


ವಂಶವರ್ಣನೆ, ೭. ಕಲ್ಪನಾಶೀಲನೂ, ಆತಿರಸಿಕನೂ, ಸಂಭಾವಿತನೂ, ಶಾಸ್ತ್ರಗಳನ್ನು ಅಭ್ಯಾಸ ಮಾಡಿದವನೂ, ಎಲ್ಲ ಗುಗಳುಳ್ಳವನೂ ಆದ ಆ ದೇವನಿಗೆ ಹೊರತು ಸತ್ಕಾವ್ಯವು 'ದೇವಾನಾಂ ಪ್ರಿಯ(ಬೆಪ್ಪ)ನಿಗೆ ಗ್ರಾಹ್ಯವಾಗುವುದೇ ? ೮. ಕಾವ್ಯವನ್ನು ಕೇಳಿದ ಮಾತ್ರಕ್ಕೇ ಅವನು ಕಾವ್ಯದ ಶಬ್ದ ಅರ್ಥ, ಗುಣ, ಅಲಂಕಾರ, ರೀತಿ, ರಸ, ಭಾವ, ವೃತ್ತಿ ಎಂಬ ಕಾವ್ಯ ಸಂಬಂಧಿ ವಿಷಯಗಳನ್ನೆಲ್ಲ ಒಂದಕ್ಕೊಂದು ಹೊಂದಿಸಬಲ್ಲವನಾಗಿದ್ದಾನೆ. ಈ ಕಾರಣದಿಂದ ಅವನು ಸಾಹಿತ್ಯ ಕಮಲ ಮತ್ತಮರಾಳ [ಸಾಹಿತ್ಯವೆಂಬ ತಾವರೆಗಳಿಂದ ಮದವೇರಿಸಿಕೊಳ್ಳುವ ರಾಜಹಂಸ] ಎಂಬ ಬಿರುದನ್ನು ಪಡೆದಿದ್ದಾನೆ. ೯. ಶಶಕಪುರದ ವಾಸಂತಿಕೆಯಲ್ಲಿ ಹುಲಿಯೊಂದು ರೋಷದಿಂದ ಒಳನುಗ್ಗುತ್ತಿತ್ತು. ಆಗ ಯದುವಂಶದ ಸಳನೆಂಬುವನನ್ನು ಉದ್ದೇಶಿಸಿ, ತನ್ನ ಕುಂಚದ ಬೆತ್ತವನ್ನಿತ್ತು ಗುರುಗಳು 'ಹೊಯ್ಸಳ' ಎಂದರು. ಆದುದರಿಂದ ಹೊಯ್ಸಳನಾದನು.