ಪುಟ:ಯಶೋಧರ ಚರಿತೆ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೫೫

ಕಿವಿಸವಿ ದನಿ ಕಣ್ಸವಿ ರೂ
ಪವಧರಿಸಲೆ ಗಜವೆಡಂಗ ನೀನುಳಿದೊಡೆ ಸಾ
ವವಳೆನಗೆ ಮಿಕ್ಕ ಗಂಡರ್‌
ಸವಸೋದರರೆಂದು ತಿಳಿಪಿದಳ್‌ ನಂಬುಗೆಯಂ೫೨


ಆಗಳ್‌ ಬಾಳ್‌ ನಿಮಿರ್ದುದು ತೋಳ್‌
ತೂಗಿದುದು ಮನಂ ಕನಲ್ದು ದಿರ್ವರುಮನೆರ
ಳ್ಬಾಗಂ ಮಾಡಲ್‌ ಧೃತಿ ಬಂ
ದಾಗಳ್‌ ಮಾಣೆಂಬ ತೆರದೆ ಪೇಸಿದನರಸಂ೫೩


ಪರನೃಪರನಲ್ಲದೀ ಪುಮಿ
ಕರನರಿವುದೆ ಮದ್ಭುಜಾಸಿಯಿದು ಕೈಯಿಕ್ಕಲ್‌
ಕರಿ ಕರಿಗಲ್ಲದಿರುಂಪೆಗೆ
ಪರಿವುದೆ ಹರಿ ಕರಿಯನಲ್ಲದಿರಿವುದೆ ನರಿಯಂ೫೪




ನನಗೆ ನಿನ್ನ ದನಿ ಕಿವಿಗೆ ಸವಿ, ನಿನ್ನ ರೂಪ ನನ್ನ ಕಣ್ಣಿಗೆ ಸವಿ, ನೀನೂ ನನ್ನ
ಕೈಬಿಟ್ಟರೆ ನನಗೆ ಮರಣವೇ ಶರಣು ! ಬೇರೆ ಗಂಡಸರೆಲ್ಲ, ನನಗೆ ಸಹೋದರ
ಸಮಾನರೇ ಸರಿ, ನಂಬು” ಎಂದು ಹಲವು ರೀತಿಯಲ್ಲಿ ಅವನಿಗೆ
ವಿಶ್ವಾಸವುಂಟಾಗುವಂತೆ ಸಮಾಧಾನ ಹೇಳಿದಳು. ೫೩. ಒಡನೆಯೆ ಅರಸನ
ಕೈಯ ಖಡ್ಗವು ಮೇಲೆದ್ದಿತು ; ತೋಳು ತೂಗಿತು. ಮನಸ್ಸು ಕಿಡಿಕಾರಿತು.
ಒಂದೇ ಪೆಟ್ಟಿಗೆ ಇಬ್ಬರನ್ನೂ ಇಬ್ಭಾಗ ಮಾಡುವ ಎಣಿಕೆ ಮಸಗಿತು. ಅಷ್ಟರಲ್ಲಿ
ಫಕ್ಕನೆ ಸಂಯಮ ತಲೆದೋರಿ, “ಚಿ! ಬೇಡ!” ಎಂದು ಅರಸನ ಮನಸ್ಸು
ಹೇಸಿಕೊಂಡಿತು. ೫೪. “ನನ್ನ ತೋಳಿನ ಈ ಕರವಾಲವು ವೈರಿ ನರೇಂದ್ರರನ್ನು
ಇರಿಯಬೇಕೇ ಹೊರತು, ಈ ಕ್ಷುದ್ರರನ್ನು ಇರಿಯಲಾಗದು. ಆನೆ
ಆನೆಯನ್ನೆದುರಿಸಬೇಕಲ್ಲದೆ ಇರುವೆಯನ್ನೆದುರಿಸಬಹುದೆ? ಕೇಸರಿ ಇರಿಯುವುದು