ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಮಾಡಿದನು. ಲಂಕೆಯಲ್ಲಿದ್ದಾಗ ಸೀತೆಯು ನಿರಾಶ್ರಿತೆಯಾಗಿದ್ದಳು; ಒಂಟಿಯಾಗಿದ್ದಳು; ಬಂಧನದಲ್ಲಿದ್ದಳು. ರಾವಣನ ಬಳಿ ಅಧಿಕಾರ, ಪರಾಕ್ರಮ, ಕಾಮಾಂಧತೆ, ಕಾಮಾಭಿಲಾಷೆಗಾಗಿ ಎಂತಹ ಹೇಯಕೃತ್ಯವನ್ನೂ ಮಾಡುವ ಶಕ್ತಿ, ಇವೆಲ್ಲ ಇದ್ದವು. ಈ ಬಗೆಯ ಸನ್ನಿವೇಶದಲ್ಲಿ ಸೀತೆಯ ಶೀಲವನ್ನು ಕಾಯ್ದಿಡುವ ಹೊಣೆ, ರಾಮಾಯಣಕರ್ತನಾದ ವಾಲ್ಮೀಕಿಯ ಮೇಲಿತ್ತು.

ರಾವಣನಿಗೆ ದೊರೆತ ಶಾಪಗಳು

ಸೀತೆಯನ್ನು ಬಲಾತ್ಕರಿಸಲು, ಆಕೆಯನ್ನು ಲಂಕೆಗೆ ಒಯ್ಯುವ ಅವಶ್ಯಕತೆ ಇರಲಿಲ್ಲ. ಬೀದಿಯಲ್ಲಿ, ಬಯಲಿನಲ್ಲಿ ಸಹ ಸ್ತ್ರೀಯರನ್ನು ಬಲಾತ್ಕರಿಸುವ ಅಧಮತೆ ರಾವಣನಲ್ಲಿತ್ತು. ರಾವಣನು ತಾನಾಗಿಯೇ ಮಹಾಪಾರ್ಶ್ವನೆಂಬ ಮಂತ್ರಿಯ ಬಳಿ ಒಪ್ಪಿಕೊಂಡ ಹೇಳಿಕೆ:

           ಪಿತಾಮಹಸ್ಯ ಭವನಂ ಗಚ್ಛಂತೀಂ ಪುಂಜಿಕಸ್ಥಲಾಮ್ |
           ಸಾ ಪ್ರಸಹ್ಯ ಮಯಾ ಭುಕ್ತಾ ಕೃತಾ ವಿವಸನಾ ತತಃ ||

“ಗಗನದಲ್ಲಿಯ ಅಗ್ನಿಜ್ವಾಲೆಯಂತಿದ್ದ ಪುಂಜಿಕಸ್ಥಲೆ ಎಂಬ ಅಪ್ಸರೆಯು ನನ್ನ ಭೀತಿಯಿಂದ ಮರೆಯಾಗಿ, ಬ್ರಹ್ಮನ ಬಳಿ ಹೋಗುತ್ತಿರುವುದನ್ನು ನಾನು ಕಂಡೆನು. ನಾನು ಆಕೆಯನ್ನು ಬಲಾತ್ಕರಿಸಿ ಭೋಗಿಸಿದೆ; ಆಕೆಯನ್ನು ವಸ್ತ್ರ ಹೀನಳನ್ನಾಗಿ ಮಾಡಿ ಬಿಟ್ಟುಕೊಟ್ಟೆನು.೬೪ ರಂಭೆಯನ್ನು ಸಹ ರಾವಣನು ಈ ರೀತಿ ಬೀದಿಯಲ್ಲಿ ಬಲಾತ್ಕರಿಸಿದ್ದಾನೆ.

           ಏವಮುಕ್ತ್ವಾ ಸ ತಾಂ ರಕ್ಷೋ ನಿವೇಶ್ಯ ಚ ಶಿಲಾತಲೇ |
           ಕಾಮಭೋಗಾಭಿಸಂರಕ್ತೋ ಮೈಥುನಾಯೋಪಚಕ್ರಮೇ ||

ಆಗ ಆಕೆಯನ್ನು ಶಿಲೆಯೊಂದರ ಮೇಲೆ ಕುಳ್ಳಿರಿಸಿ, ಕಾಮಾಸಕ್ತನಾದ ರಾವಣನು ಅವಳನ್ನು ಬಲಾತ್ಕರಿಸಿದನು.೬೫ ರಾವಣನು ಸೀತೆಯನ್ನು ಎಲ್ಲಿ ಬೇಕಾದರೂ ಬಲಾತ್ಕರಿಸಬಹುದಿತ್ತು. ಅವನಿಗೆ ಯಾವ ನಿಯಮನಿರ್ಬಂಧಗಳಿರಲಿಲ್ಲ. ಹೀಗಿರುವಾಗ ಆತನು ಸೀತೆಯನ್ನು ಲಂಕೆಗೆ ಕೊಂಡೊಯ್ದ

——————
೬೪. ಯುದ್ಧಕಾಂಡ, ೧೩.
೬೫. ಶಾಪ ಕ್ರ. ೪೬.