ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನೃತ್ಯಗಾಯನದಲ್ಲಿ ತೊಡಗಿದಾಗ ವಾಯುವು ಅವರನ್ನು ಕಂಡನು. ಕುಶಕನ್ಯೆಯರ ಯೌವನಭರಿತ ಅನುಪಮ ಲಾವಣ್ಯವನ್ನು ಕಂಡು ವಾಯುವು ಕಾಮಪರವಶನಾದನು. “ನಾನು ನಿಮ್ಮಲ್ಲಿ ಮೋಹಿತನಾಗಿದ್ದೇನೆ; ನೀವೆಲ್ಲರೂ ನನ್ನ ಮಡದಿಯರಾಗಿರಿ; ಮನುಷ್ಯರ ತಾರುಣ್ಯಾವಸ್ಥೆಯು ಅತಿಚಂಚಲ, ಕ್ಷಣಭಂಗುರ, ಕ್ಷಣಕ್ಷಣಕ್ಕೂ ಕ್ಷೀಣಿಸುವಂಥಾದ್ದಾಗಿದೆ. ನನ್ನೊಡನೆ ವಿವಾಹವಾಗಿ ನೀವು ಚಿರ ತಾರುಣ್ಯವನ್ನೂ, ಅಮರತ್ವವನ್ನೂ ಪಡೆದುಕೊಳ್ಳಿರಿ” ಎಂದು ನುಡಿದನು. ವಾಯುವಿನ ಈ ಉದ್ರೇಕಭರಿತ ನುಡಿಗಳನ್ನು ಕೇಳಿ ಕುಶಕನ್ಯೆಯರು ರೇಗಿ ತಿರಸ್ಕಾರದಿಂದ ಆತನಿಗೆ ಈ ರೀತಿ ಹೇಳಿದರು-


           ಅಂತಶ್ಚರಸಿ ಭೂತಾನಾಂ ಸರ್ವೇಷಾಂ ಸುರಸತ್ತಮ |
           ಪ್ರಭಾವಜ್ಞಾಶ್ಚ ತೇ ಸರ್ವಾಃ ಕಿಮರ್ಥಮವಮನ್ಯಸೇ ‖೧೯‖
           ಕುಶನಾಭಸುತಾ ದೇವ ಸಮಸ್ತಾಃ ಸುರಸತ್ತಮ |
           ಸ್ಥಾನಾಚ್ಚ್ಯಾವಯಿತುಂ ದೇವ ರಕ್ಷಾಮಸ್ತು ತಪೋ ಮಯಮ್ ‖೨೦‖
           ಮಾ ಭೂತ್ಸ ಕಾಲೋ ದುರ್ಮೇಧಃ ಪಿತರಂ ಸತ್ಯವಾದಿನಮ್ |
           ಅವಮನ್ಯ ಸ್ಪಧರ್ಮೇಣ ಸ್ವಯಂ ವರಮುಪಾಸ್ಮಹೇ ‖೨೧‖
           ಪಿತಾ ಹಿ ಪ್ರಭುರಸ್ಮಾಕಂ ದೈವತಂ ಪರಮಂ ಚ ಸಃ |
           ಯಸ್ಯ ನೋ ದಾಸ್ಯತಿ ಪಿತಾ ಸ ನೋ ಭರ್ತಾ ಭವಿಷ್ಯತಿ ‖೨೨‖


“ಹೇ ಸುರಶ್ರೇಷ್ಠನೇ! ನೀನು ಪ್ರಾಣಿಮಾತ್ರರಲ್ಲಿ ಸಂಚರಿಸುವವನಾಗಿದ್ದೀಯೇ! ನಿನ್ನ ಪ್ರಭಾವವನ್ನು ನಾವೆಲ್ಲರೂ ಬಲ್ಲೆವು. ಆದ್ದರಿಂದ, ವಾಯುದೇವತೆಯೇ, ನೀನು ನಮ್ಮನ್ನು ಏತಕ್ಕೆ ಕಡೆಗಾಣಿಸುತ್ತೀಯಾ? ನಾವು ಕುಶನಾಭನ ಕನ್ಯೆಯರು. ಸುರಶ್ರೇಷ್ಠನೆ, ನಮ್ಮನ್ನು ಅವಮಾನಿಸಲು ಸಿದ್ಧನಾದ ನಿನ್ನಂತಹ ದೇವತೆಯ ದೇವತ್ವವನ್ನು ಹರಣ ಮಾಡುವ ಸಾಮರ್ಥ್ಯವು ನಮ್ಮಲ್ಲಿದೆ; ಆದರೆ ನಾವು ನಮ್ಮ ತಪದ ರಕ್ಷಣೆಯನ್ನು ಮಾಡುತ್ತಿದ್ದೇವೆ. ಶಾಪವನ್ನು ಕೊಟ್ಟರೆ, ತಪಕ್ಷಯವಾಗುವ ಸಾಧ್ಯತೆ ಇರುವದರಿಂದ ನಾವು ಶಾಪವನ್ನು ಕೊಡುತ್ತಿಲ್ಲ. ಎಲೈ ದುರ್ಬುದ್ಧಿಯೇ! ಉತ್ಕಟವಿಷಯವಾಸನೆಗೆ ಬಲಿಯಾಗಿ, ಸತ್ಯನಿಷ್ಠನಾದ ನಮ್ಮ ತಂದೆಯನ್ನು ಅವಮಾನಿಸಿ, ಸ್ಟೇಚ್ಛೆಯಿಂದ ವರನನ್ನು ವಿವಾಹವಾಗುವ ಪ್ರಸಂಗವು ನಮ್ಮ ಮೇಲೆ ಎಂದೆಂದಿಗೂ ಬರದಿರಲಿ! ತಂದೆಯೇ ನಮಗೆ ಪ್ರಭುವು ಮತ್ತು ಪರಮದೈವತ; ನಮ್ಮ ತಂದೆಯು ಯಾವ ಪುರುಷನಿಗೆ ನಮ್ಮನ್ನು ಅರ್ಪಿಸುವನೋ ಆತನೇ ನಮ್ಮ ಪತಿಯಾಗುವನು.”