ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

________________

ಸಮಗ್ರ ಕಾದಂಬರಿಗಳು
೧೯೭

ಎಂದರೂ ಕೇಳದೆ ತಮ್ಮ ಶುಶೂಷೆಗೆ ನಡುಕಟ್ಟಿ ನಿಂತು, ತಾವು ಮಾಡಿದ ವಾಂತಿ, ಭೇದಿಗಳನ್ನು ಸ್ವಲ್ಪವೂ ಬೇಸರಿಸದೆ ತಾನೇ ತನ್ನ ಕಯ್ಯಂದ ಬಳಿದು, ತಮ್ಮನ್ನು ಬದುಕಿಸಿ, ಅನಂತರ ತಾನೇ ಕಾಲಾರಾ ಪಿಡುಗಿಗೆ ತುತ್ತಾದುದನ್ನು ನೆನೆನೆನೆದು ಅತ್ತರು... ನೀನಿದ್ದರೆ ಹೀಗಾಗುತ್ತಿತ್ತೆ?- ಧರ್ಮದ ಬೇಲಿಯಾಗಿ ನೀನು ಇಂಥ ಅವಿವೇಕದಿಂದ ನನ್ನನ್ನು ರಕ್ಷಿಸುತ್ತಿದೆಯಲ್ಲವೆ?... ಕೃಷ್ಣಶಾಸ್ತ್ರಿಗಳ ಅಂತರಂಗದ ಶೋಭೆಯಲ್ಲಿ ಹಿಂದಿನದೊಂದು ಸಂಗತಿ ಸುಟಗೊಂಡಿತು: ಹೆಂಡತಿಯ ಮೊದಲ ಬಾಣಂತಿತನ, ಒಂದು ತಿಂಗಳು ಬದುಕಿ ಹೆಣ್ಣು ಮಗು ತೀರಿಕೊಂಡಿತ್ತು. ಅದಕ್ಕೆ ಸಂಸ್ಕಾರ ಮಾಡಲು ನಾನು ನಮ್ಮ ತೋಟಕ್ಕೆ ಹೋದಾಗ ಅನ್ಯಜಾತಿಯವರ ಒಂದು ಕೂಸೂ ಅದೇ ಕಾಲಕ್ಕೆ ಮೃತ್ಯವಶವಾಗಿ, ಅದನ್ನೂ ನಮ್ಮ ತೋಟಕ್ಕೆ ಸಮೀಪದ ಹೊಲದಲ್ಲಿ ಸಂಸ್ಕಾರ ಮಾಡಲು ತಂದಿದ್ದರು. ಹಸುಗೂಸುಗಳು ತೀರಿಕೊಂಡಾಗ ಅನ್ಯಜಾತಿಯವರೆಲ್ಲ ಅನುಸರಿಸುವ ಪದ್ಧತಿಯಂತೆ, ಹೊಲದಲ್ಲಿದ್ದ ಹುತ್ತವನ್ನು ಬಗೆದು ಅವರು ತಮ್ಮ ಕೂಸನ್ನು ಮಲಗಿಸಲು ಹೋದಾಗ, ನಾಗರಹಾವು ಹುತ್ತದಾಚೆಗೆ ಹೊರಬಂದು ಹೆಡೆ ಬಿಚ್ಚಿತು. ತಕ್ಷಣ ಪುರೋಹಿತ ವೆಂಕಣ್ಣ ಜೋಯಿಸರು ಬೇಡ ಬೇಡವೆಂದರೂ ಆ ಹಾವನ್ನು ಕೋಲಿನಿಂದ ಬಡಿದು ಕೊಂದು, ಸತ್ತ ಕೂಸನ್ನು ಹುತ್ತದೊಳಗೆ ಮಲಗಿಸಿ, ಹುತ್ತದ ಮಣ್ಣಿನಿಂದ ಮುಚ್ಚಿ, ಅದರ ಮೇಲೆ ಕಾರೆ ಮುಳ್ಳನ್ನು ಹೊದಿಸಿ, ಮೇಲೊಂದು ದೊಡ್ಡ ಕಲ್ಲನ್ನಿಟ್ಟು, ಆ ಜನ ತಮ್ಮ ಕೂಸಿನ ಸಂಸ್ಕಾರವನ್ನು ಆ ರೀತಿಯಲ್ಲಿ ಪೂರೈಸಿದ್ದರು!...
ಮನೆಗೆ ಹಿಂದಿರುಗಿದಾಗ ಈ ವಿಷಯವನ್ನು ಪ್ರಾಸಂಗಿಕವಾಗಿ ಹೆಂಡತಿಗೆ ತಿಳಿಸಿದಾಗ ನಾಗು ಕೇಳಿದ್ದಳು...
“ಕೂಸನ್ನು ಹುತ್ತದೊಳಗೆ ಯಾಕೆ ಹಾಕ್ತಾರೆ?”
“ಒಂದೆರಡು ತಿಂಗಳಿನ ಕೂಸು ಇನ್ನೂ ಗರ್ಭದಲ್ಲಿರೊ ಪಿಂಡದ ಹಾಗೆ ಕೈ ಕಾಲು ಮುದುರಿಕೊಂಡಿರುತ್ತೆ - ಹುತ್ತದೊಳಗೆ ಹಾವು ಸಿಂಬಿ ಸುತ್ತಿ ಮಲಗಿರುತ್ತಲ್ಲ, ಹಾಗೆ... ಹುತ್ತದ ಕತ್ತಲಿಗೂ ತಾಯಿಯ ಗರ್ಭಕೋಶದ ಕತ್ತಲಿಗೂ ಸಾಮ್ಯವಿದೆ. ಅದರಂತೆ ಹಾವು, ಎಳೆಕೂಸು ಎರಡೂ ಸಿಂಬಿ ಸುತ್ತಿ ಮಲಗುತ್ತವೆ; ಹಾಲು ಕುಡಿಯುತ್ತವೆ... ಅವೆರಡಕ್ಕೂ ಇಷ್ಟು ಸಾಮ್ಯವಿರೋದರಿಂದ ಪ್ರಾಯಶಃ ಈ ಪದ್ಧತಿಯನ್ನು ಅನುಸರಿಸ್ತಾರೆ-“ ಎಂದು ಹೇಳಿದ ನೆನಪು...
“ಇದಕ್ಕೆ ಇರಬೇಕು, ಒಂದು ಸಲ ಬುಂಡಮ್ಮ ಯಾವುದೊ ಮಾತಿಗೆ 'ಹುತ್ತದ ಮೊಗ ಹ್ವಟ್ಟೆ ವಳುಗೆ' ಅಂದಿದ್ದಳು!” ಎಂದು ಉದ್ಗರಿಸಿದ ನಾಗು,