ಪುಟ:ವೈಶಾಖ.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೪೭ ಪ್ರೀತಿಸುವ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷಿ ಒಮ್ಮೆ ಬಂದು, “ಇದೇನತ್ತೆ, ನೀವು ಬಂದು ಒಂದು ತಿಂಗಳ ಮೇಲಾಗಲಿಲ್ವ? ನೀರು ಹಾಕಲು ನನ್ನನ್ನು ಕರೆಯಲೇ ಇಲ್ಲ?” ಎಂದು ಕೇಳಿಯೇ ಬಿಟ್ಟಳು. ಈ ಮುಗ್ಧ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭಳಾದರು ಅದನ್ನು ತೋರಗೊಡದೆ, “ ನೋಡಮ್ಮ ನಾಗಲಕ್ಷಿ, ನಾನು ತಿಂಗಳಿಗೆ ಸರಿಯಾಗಿ ಹೊರಗೆ ಕೋರಿದ್ದೆನಲ್ಲ- ಈಗೊಂದು ಎರಡು ತಿಂಗಳಿಂದ ಅದರ ಕ್ರಮ ತಪ್ಪಿದೆ...” ಎಂದು ಮಾತನ್ನು ತೇಲಿಸಿದವಳು, ನಾಗಲಕ್ಷ್ಮಿಯನ್ನು ತಬ್ಬಿ, “ಆದರೆ ಇದರ ಬಗ್ಗೆ ನೀನು ಯಾರ ಸಂಗಡವೂ ಮಾತನಾಡಬಾರದು, ಗೊತ್ತಾಯ್ತ?” ಎಂದು ರಮಿಸಿದಳು. “ಖಂಡಿತ ಹೇಳಲ್ಲ, ಅತ್ತೆ” – ಆ ಮುಗ್ಧ ಬಾಲಕಿ ಭರವಸೆಯಿತ್ತದ್ದು ರುಕ್ಕಿಣಿಗೆ ಆ ಗಳಿಗೆಗೆ ಮಾತ್ರ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಆದರೆ ಮರುಗಳಿಗೆಯಲ್ಲಿಯೆ ಅವಳ ಅಂತರಂಗದ ಕೋಭೆ ಮರುಕಳಿಸಿತ್ತು... ಕೊನೆಗೆ ಲಕ್ಕನ ಸಹಾಯವನ್ನೇ ಯಾಕೆ ತೆಗೆದುಕೊಳ್ಳಬಾರದು?ಎಂಬ ಆಲೋಚನೆ ಬಂದಿತು. ನಾಚಿಕೆಯಿಲ್ಲದೆ ಅವನ ಸಂಗಡ ಹೇಗೆ ಪ್ರಸ್ತಾಪಿಸುವುದು ಎಂದು ಮನಸ್ಸು ಹಿಂದೆಗೆಯಿತು... ಮತ್ತೆ ಈ ಡೋಲಾಯಮಾನಸ್ಥಿತಿಯಲ್ಲಿ ಇನ್ನೆರಡು ದಿನಗಳು ಉರುಳಿಹೋದವು... ಕಾಲ ರಭಸವಾಗಿ ಕಳೆದು ಹೋಗುತ್ತಿದೆ ಎಂಬ ಭಾವನೆ ಬಲವಾಗತೊಡಗಿದಂತೆ, ರುಕ್ಕಿಣಿಯಲ್ಲಿ ನಡುಕ ಹುಟ್ಟಿತು. ಕಾಲ ಮಿಂಚಿದ ಬಳಿಕ ತನ್ನ ಬದುಕು ಸಂಪೂರ್ಣವಾಗಿ ಮೇಲೇಳಲು ಸಾಧ್ಯವೇ ಆಗದ ಅತ್ಯಂತ ಆಳವಾದ ಕಂದರಕ್ಕೆ ಮಗುಚಿಕೊಳ್ಳುತ್ತದೆ, ಎಂಬ ಕಟುಸತ್ಯ ಅವಳು ಒಡನೆಯೆ ಕ್ರಿಯಾಶೀಲಳಾಗುವಂತೆ ಪ್ರೇರೇಪಿಸಿತು. ಕೊನೆಗೆ ಎಲ್ಲ ಸಾಧಕಬಾಧಕಗಳನ್ನೂ ಪರಿಶೀಲಿಸಿ, ಲಕ್ಕನ ನೆರವು ಬೇಡುವುದೆ ಉಚಿತವೆಂದು ನಿರ್ಧರಿಸಿದಳು. ಆ ನಿರ್ಧಾರದ ಪ್ರಕಾರ ಅದೇ ಸೋಮವಾರ ಮಧ್ಯಾಹ್ನ ರುಕ್ಕಿಣಿಯೂ ಲಕ್ಕನನ್ನು ತಮ್ಮ ಮನೆಗೆ ಕರೆಸಿದಳು. ಲಕ್ಕ ಕೊಟ್ಟಿಗೆಗೆ ಬಂದವನೆ, ಗಬ್ಬದ ಕಡಸಿನ ಮೈದಡವುತ್ತ ನಿಂತ. ರುಕ್ಕಿಣಿಯು, ಗಬ್ಬದ ಕಡಸನ್ನೆ ನಿಟ್ಟಿಸುತ್ತ, ಕೆಲ ಸಮಯ ಏನನ್ನೂ ಹೇಳಲಾರದೆ, ಹಿತ್ತಲು ಬಾಗಿಲಿನ ಸೂರುಕಟ್ಟು ಹಿಡಿದು, ಮೌನವಾಗೇ ನಿಂತಿದ್ದಳು. ಆ ಬಳಿಕ ನಿಧಾನವಾಗಿ, ತಗ್ಗಿದ ದನಿಯಲ್ಲಿ, “ಲಕ್ಕ...” ಎಂದು ರಾಗವೆಳೆದಳು. “ಯೇನಮ್ಮ ಮಾರೆ?” ಕಡಸನ್ನು ತುರಿಸುತ್ತ ಲಕ್ಕ ಕೇಳಿದ.