“ಲಕ್ಕ....” ಎಂದು ಪುನಃ ತೊದಲಿದಳು.
“ಯೋಳಿ- ಅಮ್ಮಾರೆ”
“ಲಕ್ಕ...” ಎಂದು ರುಕ್ಕಿಣಿ ಪುನಃ ಉಚ್ಚರಿಸಿದಂತೆ, ಗಂಟಲಲ್ಲಿ ಏನೊ ಸಿಕ್ಕಿಕೊಂಡಂತಾಯಿತು.
“ಯೋಳಿ.”
“ಲಕ್ಕ... ನಾನು... ನನಗೆ-ಎರಡುವರೆ ತಿಂಗಳ ಮೇಲಾಯ್ತು...” ಎಂದ
ರುಕ್ಕಿಣಿಯು ಕಣ್ಣುಗಳಲ್ಲಿ ನೀರು ತುಂಬಿತು.
ಲಕ್ಕ ಕಕ್ಕಾಬಿಕ್ಕಿಯಾದ “ಅಂಗಂದ್ರೇನು ಅವಾರೆ...” ದಿಗಿಲಾಗಿ ತಡವರಿಸಿದ..
“ನಾನು.. ಹೊರಗಾಗಿ ಎರಡೂವರೆ ತಿಂಗಳ ಮೇಲಾಯ್ತು...”
“ಹಯ್ಯ ದ್ವಾವರೆ!...” ಲಕ್ಕ ಕುಸಿದು ಹೋದ. ಮಾತು ಈಚೆಗೆ
ಹೊರಡಲೊಲ್ಲದು.
“ಈಗೇನು ಮಾಡೋದು?...”
“ಮೂಢ ಮುಕ್ತ, ನಂಗೇನು ತಿಳಿದಾತು?... ಆವತ್ತು, ನಾನೇಟು ಬಗೇಲಿ
ಬ್ಯಾಡಿ ಬ್ಯಾಡಿ ಅಂದರೂವೆ... ನೀವು ಕ್ಯಾಳನಿಲ್ಲ...”
“ಹೌದು, ಆ ದಿನ ನಾನೇ ಜ್ಞಾನ ತಪ್ಪಿ ನಡೆದದ್ದು, ಇದರಲ್ಲಿ ನಿನ್ನ
ತಪ್ಪೇನು ಇಲ್ಲ..... ಈಗ, ಮುಂದೇನು ಮಾಡೋದು?”
“ನಂಗೆ ತಿಳಿಯಕ್ಕಿಲ್ಲ. ನೀವು ಎಂಗೆ ಯೋಳಿದ್ರೆ ಅಂಗೆ ಮಾಡ್ತೀನಿ!”
“ಇದನ್ನ ಕಳೆಯಲಿಕ್ಕೆ ಏನಾದರೂ ಔಷಧಿ ತಂದು ಕೊಡಬೇಕಲ್ಲ?”
ಲಕ್ಕ ಕೆಲ ಸಮಯ ಮಾತಾಡದೆ ಮೌನವಾಗಿ ಚಿಂತಿಸುತ್ತ ನಿಂತ.
ತರುವಾಯ,
“ತಾಳಿ, ಒಂದು ಜಿನ ಆ ಕುಂಬಾರರ ಕಾಳಮ್ಮ ಅವರಟೇಲಿ ಅವಳ ಎದುರಟ್ಟಿ ಮುಟ್ಟನಂಜಮ್ಮನ ಜ್ವಕ್ಕೆ ಅಂತಿದ್ದು ಗ್ಯಾಪಕ ಆಯ್ತಾ ಅದೆ... 'ಕ್ಯಾಳಿದೇನೆ ಮುಟ್ಟಿ, ನಮ್ಮೂರ ಅನುಕೂಲಸ್ತರ ಮನೆ ಎಣ್ಣೆ ಒಂದು ಕದ್ದು ಬೊಸಿರಾಗಿ, ಹುಣಸೂರಲಲಿ ಸಂತೆಮಾಳದ ಕಾಸಿಂಬೀ ಇಲ್ಲ, ಅವಳಿಂದ ಔಸ್ಥೆ ತಕ್ಕಂಡು ಮೈ ಇಳಿಸಿದಲಂತೆ!” ಅನ್ನೋಕೂವೆ, ನಾ ಯಾತಕೊ ಅವರಟ್ಟಿಗೆ ವೋಗಕ್ಕೂವೆ, ಒಂದೇ ಆಗಿತ್ತು. ಆ ಕ್ಷಣ ಅವಳು ತನ್ನ ಮಾತ ನಿಲ್ಲುಸಿದ್ದು... ಈಗ ಅದೊಂದೇ ದಾರಿ ಇರಾದು. ಹುಣಸೂರಿಗೋಗಿ ಆ ಕಾಸಿಂಬೀನೆ ಕ್ಯಾಬೀನಿ ಎಂದ.
ಲಕ್ಕನ ಸಂಗಡ ರುಕ್ಕಿಣಿ ಮಾತಾನಾಡುತ್ತಿದ್ದುದು ಕೊಟ್ಟಿಗೆಯಲ್ಲಿ ತಾನೆ.
ಪುಟ:ವೈಶಾಖ.pdf/೨೬೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೪೮
ವೈಶಾಖ