ಪುಟ:ವೈಶಾಖ.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೬೯ ಸುತ್ತಲೂ ಸರಾಗವಾಗಿ ತಿರುಗುವಂತೆ ಮಾಡಲು ಸಾಕಷ್ಟು ಎಣ್ಣೆ ಸುರಿಸಿದರು. ಅಲ್ಲಿಗೆ 'ಸಿಡಿ ತೇರು' ಸಿದ್ದವಾದಂತಾಯಿತು. ದರುಮನಳ್ಳಿಯಲ್ಲಿ “ಸಿಡಿ” ಆಡುತ್ತಿದ್ದವರು ಬೆಸ್ತರು ಮತ್ತು ಹೊಲೆಯರು. ಒಂದು ವರ್ಷದ ಆ ಕೋಮಿನವರು ಆಡಿದರೆ, ಮಾರನೆ ಸಾಲಿಗೆ ಈ ಕೋಮಿನವರು ಆಡುವುದು ಅನುಚಾನೂವಾಗಿ ನಡೆದು ರೂಢಿಯಾಗಿತ್ತು. ಹೋದಸಲ, ಅಂದರೆ ಮೂರು ವರ್ಷಗಳ ಹಿಂದೆ, ಸಿಡಿ ಅಡಿದವರು ಹೊಲೆಯರು. ಆ ಕಾರಣದಿಂದಲೂ ಈ ಬಾರಿ ಸಿಡಿ ಆಡುವುದು ಬೆಸ್ತರ ಪಾಲಿಗೆ ಬಂದಿತ್ತು. ಸಿಡಿ ಆಡುವ ರಾತ್ರಿ, ಊರಿನ ಮನೆಯವರೆಲ್ಲರೂ ಜಾಗ್ರತೆ ಜಾಗ್ರತೆ ಊಟ ಮುಗಿಸಿ, ಸಿಡಿಯಮ್ಮನ ಗುಡಿಯ ಮುಂದಿನ ಅಂಗಳದ ಬಯಲಿನ ಸುತ್ತ ವೃತ್ತಾಕಾರವಾಗಿ ನೆರೆದು ನಿಲ್ಲಲು ಆರಂಭಿಸಿದ್ದರು. ಊರಿನವರೇ ಅಲ್ಲದೆ, ಈ ವಿಶಿಷ್ಟ ಹಬ್ಬಕ್ಕೆಂದು ಮನೆಮನೆಗೂ ಬಂದಿದ್ದ ನೆಂಟರಿಷ್ಟರೂ ಈ ಜಾತ್ರೆಯಲ್ಲಿ ಸೇರಿದ್ದರು. ಅಕ್ಕಪಕ್ಕದ ಊರುಗಳೇ ಅಲ್ಲದೇ, ಬಹುದೂರದ ಊರು ಕೇರಿಗಳಿಂದಲೂ ಅಪಾರ ಜನಸ್ತೋಮ ಹರಿದು ಬಂದಿತ್ತು. “ಮೈಸೂರು ಮಾರಾಜರ ಪೌಜಿನಲ್ಲೂವೆ ಈಪಾಟಿ ಜನ ಸೇರಕ್ಕಿಲ್ಲ ಕನ, ತಗಿ!” – ಇದು, ಪ್ರವಾಹದಂತೆ ಬಂದು ಸೇರುತ್ತಿತ್ತು ಜನಸಮೂಹವನ್ನು ಕುರಿತು ಹುಚ್ಚು ಬೋರಿ ಸಂಗಡ ದ್ಯಾವಾಜಮ್ಮ ತೆಗೆದು ಉದ್ದಾರ! ಅಲ್ಲಿಯ ನೆಲದ ಅಂಗುಲ ಅಂಗುಲಕ್ಕೂ ಜಾತ್ರೆಯ ಸಡಗರ, ಅಷ್ಟಷ್ಟು ದೂರಕ್ಕೆ ಪಂಜುಗಳ ಬೆಳಕು. ಮಧ್ಯರಾತ್ರಿಯ ವೇಳೆಗೆ ಸಿಡಿಯಮ್ಮನ ಗುಡಿಯೊಳಗೆ ಬೆಸ್ತರ ಕೋಮಿನ ಯಜಮಾನರು, ಸಿಡಿಯಾಡಲು ಸಿದ್ಧರಾದ ಹನ್ನೆರಡು ಮಂದಿ ತರುಣರು, ಚೆನ್ನಾಚಾರಿ, ಪೂಜರಿ ಸೋಮಪ್ಪ, ಇವರೆಲ್ಲ ಜಮಾಯಿಸಿದರು. ಕಬ್ಬಿಣದ ಕೊಂಡ್ಲು'ಗಳನ್ನು ಶಕ್ತಿದೇವತೆಯ ಮುಂದಿಟ್ಟು ಪೂಜೆಮಾಡಿ, ಅವುಗಳನ್ನೆತ್ತಿ ಪೂಜಾರಿ ಸೋಮಪ್ಪ ಚೆನ್ನಚಾರಿಯ ಕೈಗೆ ಕೊಟ್ಟ, ಚೆನ್ನಚಾರಿ ಸಿಡಿಯಾಡುವ ತರುಣರನ್ನು ಒಬ್ಬೊಬ್ಬರಾಗಿ ಮೊಖಾಡೆ ಮಲಗಿಸಿದ. ಹಾಗೆ ಮಲಗಿದ ಪ್ರತಿ ತರುಣನ ಬೆನ್ನಿನ ಚರ್ಮವನ್ನು ಎಳೆದು ಅದಕ್ಕೆ ಸಣ್ಣ ಉಳಿಯಿಂದ ಪೆಟ್ಟಿ, ಚುಚ್ಚಿ ತೂತು ಮಾಡಿ, ಆ ತೂತಿಗೆ ಕೊಳವೆ ಹಾಕಿ, ಆ ಕೊಳವೆಗೆ ಕೊಂಡ್ಲುಗಳನ್ನು ಸಿಕ್ಕಿಸಿದ. ಬೆನ್ನಿನ ಇನ್ನೊಂದು ಭಾಗದ ಚರ್ಮವನ್ನೂ ಹೀಗೆಯೆ ಉಜ್ಜಿ ಎಳೆದು, ಅದಕ್ಕೂ ಇದೇ ರೀತಿ ಕಬ್ಬಿಣದ ಕೊಂಡಿ ಸಿಕ್ಕಿಸಿದ. ಅಂದರೆ ಸಿಡಿಯಾಡುವ ಪ್ರತಿ ವ್ಯಕ್ತಿಗೂ ಬೆನ್ನಿಗೆ ಎರಡು ಕೊಂಡ್ಲು. ಆ ಕೊಂಡ್ಲುಗಳಿಗೆ ಕಟ್ಟಿದ ಹಗ್ಗಗಳು ಅವರ