ಪುಟ:ವೈಶಾಖ.pdf/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೪೧ ಹೇಳೀಯ?” ಸಾಕಿ ಮನದಲ್ಲೆ 'ಇದೊಳ್ಳೆ ರಾಮಾಣ್ಯ' ಎಂದುಕೊಳ್ಳುತ್ತ, “ಊ, ಅದೇನ ಹ್ಯಾಳಿ” ಎಂದಳು. ಸುಬ್ಬಾವಧಾನಿಗಳು, “ರುಕ್ಕಿಣವೂಂಗೂ.....” ಎಂದು ನಿಲ್ಲಿಸಿದರು. ಸಾಕಿ, “ರುಕ್ಕಿಣವ್ವಂಗೂ...”-ಗಿಣಿಪಾಠ ಒಪ್ಪಿಸಿದಳು. ಉತ್ತೇಜಿತರಾದ ಸುಬ್ಬಾವಧಾನಿಗಳು, “ನನಗೂ......” ಎಂದು ನಿಲ್ಲಿಸಿದರು. “ನಂಗೂ...” ಎಂದು ಪಾಠ ಒಪ್ಪಿಸಿದಳು, ಸಾಕಿ. “ಇನ್ನುಮುಂದೆ....” “ಇನ್ನುಮ್ಯಾಕೆ....” “ಉದಕ....” “ಉದಕ....” “ಸಂಬಂಧ....” “ಸಮ್ಮಂದ.....” ಸುಬ್ಬಾವಧಾನಿಗಳು ವೆಂಕಣ್ಣ ಜೋಯಿಸರನ್ನುದ್ದೇಶಿಸಿ, “ಪಾಪ, ಅವಳಿಗೆ ಅಕ್ಷರಾಭ್ಯಾಸವಾಗಿಲ್ಲ. ಆದ್ದರಿಂದ ಒಟ್ಟಾರಿ ಸೇರಿಸಿ ಹೇಳುವುದು ಪ್ರಯಾಸವಾಗುತ್ತೆ. ಆದ್ದರಿಂದ ಅವಳು ಹೇಳಿದ ಹಾಗೆ ಹೇಳಲಿ. ನಾವು ಆ ವಾಕ್ಯ ಹೇಳಿ ಮುಗಿಸಿದರೆ ಆಯ್ತಲ್ಲ?” ಎಂದಾಗ, ವೆಂಕಣ್ಣಜೋಯಿಸರು, “ಉಂಟೆ, ಉಂಟೆ, ಅವಧಾನಿಗಳೆ, ಅದು ಶಾಸ್ತ್ರಸಮ್ಮತವಾಗಲ್ಲ” ಎಂದುಬಿಟ್ಟರು. ಅವಧಾನಿಗಳಿಗೆ ರೇಗಿತು. “ರೀ ಜೋಯಿಸರೆ, ವೇಳೆ ಸುಮ್ಮನೆ ವ್ಯಯವಾಗ್ತಾ ಇದೆ. ಇಷ್ಟರಲ್ಲೆ ನಿಮ್ಮ ಶಾಸ್ತ್ರ ಹೋಗೋದಾದ್ರೆ ಹೋಗಲಿ ಬಿಡಿ” ಎಂದರು. “ಎಲ್ಲಾದರೂ ಉಂಟೆ? ಶಾಸ್ತ್ರಕ್ಕೆ ಅಪಚಾರಮಾಡಲು ಬರುತ್ತೆಯೆ?” ಎಂದು ಜೋಯಿಸರು ಪಟ್ಟುಹಿಡಿದರು.