ಪುಟ:ವೈಶಾಖ.pdf/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೪ ವೈಶಾಖ ಆದರೂ ಸುಮಾರು ಜನ ಎಲ್ಲ ಕೇರಿಗಳಲ್ಲಿಯೂ ಉಳಿದೇ ಇದ್ದರು. ಆಪ್ಪಯ್ಯನ ಮಠದ ಸ್ವಾಮಿಗಳಂತೂ ಶಿವನ ಕರುಣೆ ಇರೋ ತನಕ ಯಾವ ಉಪದ್ರವವೂ ನಮ್ಮನ್ನ ಮುಟ್ಟೋಲ್ಲ; ಒಂದು ಪಕ್ಷ ನಮ್ಮನ್ನ ತನ್ನ ಪಾದಕ್ಕೆ ಸೇರಿಸಿಕೊಳ್ಳೋದು ಆ ಸ್ವಾಮಿಯ ಇಚ್ಛೆಯಾದರೆ, ಅದೂ ಅವನ ಕರುಣೆ ಎಂದೇ ತಿಳಿದು ಶರಣಾಗೋದು-ಎಂದು ತಮ್ಮ ಭಕ್ತವೃಂದಕೆ ಸಾರಿ ಅವರೂ ಸಹ ಊರಿನಲ್ಲಿ ಉಳಿದರು. ರುಕ್ಕಿಣಿಗೆ ತಮ್ಮಿಂದ ಉಂಟಾದ ದುರ್ಗತಿಗೆ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಕೃಷ್ಣಶಾಸ್ತ್ರಿಗಳು ಕಾಶಿಗೆ ಹೊರಟುಹೋಗಬೇಕೆಂದು ಬಯಸಿದರೂ ಪುಟ್ಟ ಸರಸಿಯನ್ನು ಅನಾಥೆಯನ್ನಾಗಿ ಮಾಡಿ, ಇನ್ನೊಂದು ಪಾಪದ ಹೊರೆಯನ್ನು ಹೊರಬೇಕಾಗುವುದೆಂದು ಅವರು ಮನಗಂಡು, ಆ ಬಯಕೆಯನ್ನು ತಮ್ಮ ಅಲೋಚನೆಯಿಂದ ಅಳಿಸಿದ್ದರು. ಸರಸಿಗೆ ಈಗ ಜ್ವರ ಬಿಟ್ಟಿದ್ದರೂ ಹಿಂದಿನ ಲವಲವಿಕೆ ಆ ಮಗುವನ್ನು ಬಿಟ್ಟು ಹೋಗಿತ್ತು. ರುಕ್ಕಿಣಿಯಿಲ್ಲದಮನೆ ಅವಳೊಳಗೆ ಶೂನ್ಯವನ್ನು ತುಂಬಿತ್ತು. ಆ ಮನೆಗೆ ಬಂದಾಗಿನಿಂದಲೂ ಅವಳು ತನ್ನ ತಾಯಿಗಿಂತಲೂ ವಿಶೇಷವಾಗಿ ರುಕ್ಕಿಣೆಯನ್ನೇ ಅವಲಂಬಿಸಿದ್ದಳು. ರುಕ್ಕಿಣಕ್ಕೆ ಎಲ್ಲಿ ಹೋದಳು ಎಂಬ ವಿಚಾರದಲ್ಲಿ, ಎಲ್ಲರೂ ಅವಳ ಮನದಲ್ಲಿ ಗೊಂದಲವನ್ನೇ ಉಂಟುಮಾಡಿದ್ದರು. ರುಕ್ಕಿಣಿ ಬೇಸರಗೊಂಡು ಎಲ್ಲಿಗೋ ಹೊರಟುಹೋದಳೆಂದು ಮಾವಯ್ಯ ಹೇಳಿದ್ದರು. ವೆಂಕಣ್ಣಜೋಯಿಸರ ಹೆಣ್ಣುಮಕ್ಕಳು ಅವಳು ಚಿತ್ರ ಮೂಲನ ಕೋಟೆಗೆ ಹೋಗಿ ಸತ್ತಿರುವಳೆಂದು ಹೇಳಿದ್ದರು. ಅಕ್ಕನಿಗೆ ನಮ್ಮ ಮೇಲೆ ಯಾಕೆ ಬೇಜಾರು?- ಚಿತ್ರಮೂಲನ ಕೋಟೆಗೆ ಯಾಕೆ ಹೋದಳು?ನ್ಯಾಯದಲ್ಲಿ ಲಕ್ಕನ್ನ ಆ ಕೆಟ್ಟ ರುದ್ರ ಹೊಡೆಯುವಾಗ, ರುಕ್ಕಿಣಿ ಅಕ್ಕನ ವಿಚಾರ ಬಂದಿತ್ತಲ್ಲ, ಯಾಕೆ?- ಕೇಶವಯ್ಯನೋರು ಜೋಯಿಸರು ಇನ್ನು ಯಾರಾರೊ ನಮ್ಮ ಮನೆಗೆ ಬಂದು ರುಕ್ಕಿಣಿ ಅಕ್ಕ ಎಲ್ಲಿ, ಅವಳ ತಲೆ ಬೋಳಿಸಬೇಕು ಅಂತಿದಲ್ಲ, ಯಾಕೆ?... ಅವಳ ಪುಟ್ಟ ಮಸ್ಸನ್ನು ಬಾಧಿಸುತ್ತಿದ್ದ ಇಂತಹ ಹಲವಾರು ಪ್ರಶ್ನೆಗಳಿಗೆ ಮಾವಯ್ಯ ಕಣ್ಣೀರು ತುಂಬಿಕೊಳ್ಳುತ್ತಿದ್ದರೇ ವಿನಹಃ ಸಮರ್ಪಕವಾಗಿ ತಿಳಿಯಹೇಳುತ್ತಿರಲಿಲ್ಲ. ಅದು ಆ ಪುಟ್ಟ ಬಾಲಕಿಯನ್ನು ಮತ್ತಷ್ಟು ಗೊಂದಲಕ್ಕೆ ಈಡುಮಾಡುವುದು. ಆದರೂ ವೆಂಕಣ್ಣಜೋಯಿಸರ ಹೆಣ್ಣುಮಕ್ಕಳು, ಸರಸಿಯನ್ನು ಅತ್ಯಂತ ಅಕ್ಕರೆಯಿಂದ ನೋಡಿಕೊಳ್ಳುತ್ತ, ಅವರಲ್ಲಿ ಒಬ್ಬರು ತಪ್ಪಿದರೆ ಇನ್ನೊಬ್ಬಳು ಸರಸಿಯನ್ನು ಆದಷ್ಟು ಸೌಖ್ಯವಾಗಿಡಲು ಪ್ರಯತ್ನ ಮಾಡುತ್ತಿದ್ದರು. ಊರಿಗೆ ಪ್ಲೇಗ್ ಜಾಡ್ಯ ಹರಡಿದಾಗ, ಇತರೆ ಕೇರಿಯವರಂತೆ