ಪುಟ:ವೈಶಾಖ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೫ ಮೇಲೆಯೇ ಕುಳಿತರು. ಹೆಗಲ ಮೇಲಿನ ವಲ್ಲಿಯಿಂದ ಕೈಗಳನ್ನು ಒರೆಸುತ್ತ ಶಾಸ್ತ್ರಿಗಳು, “ಏನು ಜೋಯಿಸರ ಸವಾರಿ, ಇಷ್ಟು ದೂರ?” ಎಂದು ಕೇಳಿದರು. “ಕೂತುಗೊಳ್ಳಿ ಶಾಸ್ತಿಗಳೆ, ಸ್ವಾರಸ್ಯವಾದ ವಿಚಾರ. ನಿಮಗೆ ತಿಳಿಸಬೇಕು ಎಂತಲೆ ಬಂದೆ” ಎಂದರು ಶಾಸ್ತ್ರಿಗಳು ಹುಬ್ಬೇರಿಸಿ. “ಏನಪ್ಪ ಅಂಥ ವಿಚಾರ?” – ಎಂದು ಪ್ರಶ್ನಿಸಿದರು ಜೋಯಿಸರು ತಮ್ಮ ನಸ್ಯದ ಬಣ್ಣದ ಶಾಲನ್ನು ಸರಿಪಡಿಸಿಕೊಳ್ಳುತ್ತ, ಹುಸಿ ನಕ್ಕು, “ನಮ್ಮ ನಾಟಕದ ಕೇಶವಯ್ಯ ಇಲ್ಲವೆ?...” ಶಾಸ್ತ್ರಿಗಳು ಹೂಂಗುಟ್ಟಿದರು. “ಅವನು ಈ ಬೆಳಿಗ್ಗೆ ಆ ಪುಂಡ ರುದ್ರನಿಗೆ ಒಳ್ಳೆ ಪಾಟ ಕಲಿಸಿದ...” “ಹೇಗೆ?” “ಬೇರೆಯವರ ತೋಟ ಲೂಟಿ ಮಾಡೋ ಹಾಗೆ ರುದ್ರ ಕೇಶವಯ್ಯನ ತೋಟಕ್ಕೂ ಅಗಾಗ ಲಗ್ಗೆ ಹಾಕಿದ್ದ... ಬಹಳ ದಿನ ಚಿಂತಿಸಿ ಕೇಶವಯ್ಯ ಒಂದು ಉಪಾಯ ಹೂಡಿದನಂತೆ...” “ಏನದು?” “ಒಬ್ಬ ಹಾವಾಡಿಗನಿಗೆ ದುಡ್ಡು ಕೊಟ್ಟು, ಅವನನ್ನು ಜೊತೆ ಮಾಡಿಕೊಂಡು, ಹಲ್ಲು ಕಿತ್ತ ಒಂದು ನಾಗರಹಾವನ್ನು ತೋಟದ ತುದಿಗಿತ್ತ ಒಂದು ತೆಂಗಿನ ಮರದ ಮೇಲೆ ಬಿಡು, ಎಂದನಂತೆ. ಆ ಹಾವಾಡಿಗನಿಗೆ ಮರ ಹತ್ತಿ ಅಭ್ಯಾಸವಿಲ್ಲ. "ನಾ ಹತ್ತಲಾರೆ' ಎನ್ನುತ್ತಲೂ ಆ ಹಾವನ್ನು ತಾರ ಬುಟ್ಟಿಯಿಂದ ತೆಗೆದು, ಈಶ್ವರನ ಹಾಗೆ ಅದನ್ನ ತನ್ನ ಕೊರಳ ಸುತ್ತಲೂ ಸುತ್ತಿ, ಮರ ಹತ್ತಿ ಹೋಗಿ, ತೆಂಗಿನ ಗರಿಗಳ ನಡುವೆ ಆ ಹಾವನ್ನಿಟ್ಟು ಇಳಿದನಂತೆ ಕೇಶವಯ್ಯ...” “ಈ ಉಪದ್ಯಾಪವೆಲ್ಲ ಯಾಕೆ?” - ಶಾಸ್ತಿಗಳು ಬೆರಗಾದರು. “ಕೇಳಿ ಶಾಸ್ತ್ರಿಗಳೆ, ಕೇಶವಯ್ಯನ ಪ್ಲಾನು ಏನೆಂದರೆ-ರುದ್ರ ಬಂದು ಮರ ಹತ್ತಿದಾಗ, ನಾಗರಹಾವು ಹೆಡೆ ಎತ್ತಿ ಆಡೋದು ಕಂಡು, ಜಂಘಾಬಲ ಉಡುಗಿ, ಇನ್ನು ಮುಂದೆ ತನ್ನ ತೋಟದೆಡೆಗೆ ತಿರುಗಿಯಾ ಸಹ ನೋಡದಿರಲಿ... ಇದು ಅವನ ಹೂಟ...! “ಒಳ್ಳೆ ಉಪಾಯ. ಅವನ ಪ್ಲಾನು ಫಲಿಸಿತೊ!”- ಕುತೂಹಲಾವಿಷ್ಟರಾಗಿ ಕೇಳಿದರು ಶಾಸ್ತಿಗಳು.