ಪುಟ:ವೈಶಾಖ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ವೈಶಾಖ ಜೋಯಿಸರು ನಿಮಿತ್ತ ಹೇಳಬೇಕಾಗಿದೆಯೆಂದು ನಾಗವಾಲಕ್ಕೆ ತೆರಳಿದರು. ಇಷ್ಟರಲ್ಲಿ ರುಕ್ಕಿಣಿಯು ಒಂದು ಕೌಳಿಗೆಯಷ್ಟು ವೀಳೆಯದೆಲೆಗಳನ್ನು ಕೊಯ್ದು, ಅವನ್ನು ಬಾಳೆನಾರಿನಿಂದ ಬಿಗಿದು, ಎಷ್ಟು ಪರಿಯಿಂದ ಮುದ್ದಿಸಿದರೂ ಜೊತೆಗೆ ಬಾರದೆ ಆಳುಗಳು ಮಾಡುತ್ತಿದ್ದ ಕೆಲಸವನ್ನೆ ನೋಡುತ್ತ ಕುಳಿತಿದ್ದ ಸರಸಿಯ ಪಕ್ಕದಲ್ಲಿ ತಾನೂ ಸಹ ನಿಸ್ಸಹಾಯಕಳಾಗಿ ಕುಳಿತಳು. ಎಷ್ಟೋ ಸಮಯ ಕಳೆದ ನಂತರ ಸುಮ್ಮನೆ ಕುಳಿತು ನೋಡಿ ನೋಡಿ ತನಗೇ ಬೇಸರ ಬಂದು “ಹೋಗೋಣ ಬಾಕ್ಕ” ಎಂದು ಸರಸಿ ತಾನೇ ಎದ್ದು ರುಕ್ಕಿಣಿಯನ್ನು ಜಗ್ಗಿದಳು. ರುಕ್ಕಿಣಿ ಆಳುಗಳ ಗೆಯ್ಕೆಯಲ್ಲಿ ಹುಸಿ ಆಸಕ್ತಿ ನಟಿಸುತ್ತ, “ಇನ್ನು ಕೊಂಚ ಸಮಯ ಕೂತುಗೊಳೆ..ನೋಡು, ಆಳುಗಳು ಎಷ್ಟು ಚೆನ್ನಾಗಿ ಕೆಲಸ ಮಾಡ್ತಾ ಇದಾರೆ?” ಎಂದಾಗ, “ಅವರು ಮಾಡೋದನ್ನೇ ನೋಡೋದರಲ್ಲಿ ಏನು ಚೆಂದ. ಇನ್ನೂ ನಾವೇ ಮಾಡಿದರಪ್ಪ, ಅದು ಚೆನ್ನು” ಎಂದಳು ಸರಿಸಿ. ರುಕ್ಕಿಣಿ ನಕ್ಕು ಸುಮ್ಮನಾದಳು. “ಅಕ್ಕ ಏಳೆ, ಏಳೆ” ಎಂದು ಸರಸಿ ಒಂದೇ ಸಮನೆ ರುಕ್ಕಿಣಿಯ ಭುಜ ಹಿಡಿದು ಜಗ್ಗತೊಡಗಿದಳು. ರುಕ್ಕಿಣಿ ಕದಲಲಿಲ್ಲ. ಸರಿಸಿ ಕೋಪದಿಂದ ಕೆನ್ನೆ ಊದಿಸಿಕೊಂಡು, ದೂರ ಸರಿದು ನಿಂತಳು ಅವಳ ಕಣ್ಣಿನಲ್ಲಿ ಲಕ್ಷ್ಮಣತೀರ್ಥ ಉದ್ಭವಿಸಿದ್ದಳು. ರುಕ್ಕಿಣಿ ತಟ್ಟನೆದ್ದಳು ಸರಸಿಯನ್ನಪ್ಪಿ ರಮಿಸುತ್ತ, “ತಮಾಷ ಮಾಡಿದೆ ಕಣೆ, ಬೇಸರ ಮಾಡಿಕೊಬೇಡ, ಬಾ, ಬಾಮನೆಯಲ್ಲಿ ಈ ರಾತ್ರಿ ನಿನಗೆ ಬೆಣ್ಣೆಗಾರಿಗೆ ಮಾಡಿಕೊಡ್ತಿನಿ” ಎಂದು ಪುಸಲಾಯಿಸಿ, ಸರಸಿಯನ್ನು ಕರೆದೊಯ್ದು, ಕೈಕಾಲು ತೊಳೆಯಲು ಕೊಳಕ್ಕಿಳಿದಳು. ಅದೇ ತಾನೆ ತೋಟದೊಳಗೆ ಬಂದ ನಂಜೇಗೌಡ ಕೊಳದ ಆಚೆ ದಡದಲ್ಲಿ ನಿಂತು, ಮಂಡಿಯವರೆಗೂ ಸೀರೆಯನ್ನೆತ್ತಿ ತೊಳೆಯುತ್ತಿದ್ದ ರುಕ್ಕಿಣಿಯ ನುಣ್ಣನೆಯ ಬೆಳ್ಳಗಿನ ತುಂಬಿದ ಕಾಲುಗಳನ್ನೆ ಎವೆಯಿಕ್ಕದೆ ನಿಟ್ಟಿಸುತ್ತಿದ್ದ. ಆಗಲೆ ತನ್ನ ಕೈಕಾಲು ತೊಳೆಸಿಕೊಂಡು ರುಕ್ಕಿಣಿಯ ಬೆನ್ನಿಗೆ ಒರಗಿ ನಿಂತಿದ್ದ ಸರಸಿ, ತಮ್ಮತ್ತಲೆ ದುರುಗುಟ್ಟಿ ನೋಡುತ್ತಿರುವ ನಂಜೇಗೌಡನ ಕಡೆಗೆ ಬೆರಳು ಮಾಡಿ, “ಅಕ್ಕ ಅಲ್ನೋಡೆ, ನಮ್ಮನ್ನೆ ತಿಂದಾಕೊ ಹಾಗೆ ನೋಡ್ತಿದಾನೆ. ನನಗೆ ಯಾಕೊ ಭಯವಾಗತ್ತಮ್ಮ” ಎಂದಳು. ತಲೆಯೆತ್ತಿ ನೋಡಿದರೆ ರುಕ್ಕಿಣಿಗೆ ನಾಚಿಕೆಯಾಗಿ ಸಕ್ಕನೆ ತನ್ನ ಸೀರೆಯ ಅಂಚನ್ನು ಮಂಡಿಯಿಂದ ಕೆಳಗೆಳೆದಳು. ನಂಜೇಗೌಡ ನಗುತ್ತ, “ನಿಮ್ಮಣ್ಣು ಬೋ ಚೂಟಿ!” ಎಂದ. ರುಕ್ಕಿಣಿಯು ಅವನ ಮಾತಿಗೆ ಪ್ರತ್ಯುತ್ತರವಾಗಿ ಏನನ್ನೂ ಹೇಳದೆ, ಅವನನ್ನೆ