ಪುಟ:ವೈಶಾಖ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೬೫ ಸೂಕಿದೊಡನೆಯೆ ಆ ಬಾಗಿಲು ಸದ್ದಿಲ್ಲದೆ ತೆರೆಯಿತು. ಈಗಲೀಗ ಸುಶೀಲ ಅತ್ತ ಇತ್ತ ಕಣ್ಣು ಹೊರಳಿಸದೆ, ಕುರಿ ಕರಿಸುವವರ ಏಕಾಗ್ರತೆಯಿಂದ ಬಲಮಗ್ಗುಲಾಗಿ ಮಲಗಿದ್ದ ರುಕ್ಕಿಣಿಯತ್ತ ಸಾಗಿದಳು. ಕೋಣೆಯ ಒಂದು ಮೂಲೆಗೆ ಇನ್ನೊಂದು ದೀವಿಗೆ ಉರಿಯುತ್ತಿದ್ದರೂ, ಅದರ ಬೆಳಕು ಸಾಲದೆಂದೇನೊ ಸುಶಿಲೆ ತಾನು ತಂದಿದ್ದ ದೀವಿಗೆಯನ್ನು ರುಕ್ಕಿಣಿಯ ತಲೆಯ ಹಿಂಭಾಗದ ಸನಿಯದಲ್ಲೆ ಇರಿಸಿದಳು. ಆನಂತರ ರುಕ್ಕಿಣಿಯ ಬೆನ್ನ ಮೇಲೆ ಚೆಲ್ಲಿವಂತೆ ಹರಡಿದ್ದ ತಲೆಗೂದಲನ್ನು ಉಪಾಯವಾಗಿ ನೀವಿ ಒಂದುಗೂಡಿಸಿ, ಎಡಗೈ ಮುಷ್ಟಿಯಲ್ಲಿ ಹಿಡಿದು, ಇನ್ನೊಂದು ಕೈಲಿದ್ದ ಕತ್ತರಿಯನ್ನು ಇನ್ನೇನು ಆ ಕೂದಲಿನ ಬುಡಕ್ಕಿಡಬೇಕು. ಅಷ್ಟರಲ್ಲಿ “ಹಾ.ಹಾ-ಸುಶೀ...ಏನ್ಮಾಡ್ತಿದೀಯ?” ಗರ್ಜನೆ ಕೇಳಿ, ಬೆಚ್ಚಿ ಹಾಗೆಯೇ ನೆಲಕ್ಕೆ ಕುಕ್ಕರಿಸಿದಳೂ... ಈ ಗದ್ದಲದಲ್ಲಿ ಅವಳ ಕೈಲಿದ್ದ ಕತ್ತರಿ ಜಾರಿ ರುಕ್ಕಿಣಿಯ ಕುತ್ತಿಗೆಯ ಹಿಂಭಾಗಕ್ಕೆ ಬಿದ್ದು, ಅದರ ಭಾರ ಹಾಗೂ ತಣ್ಣನೆಯ ಸ್ಪರ್ಶ ರುಕ್ಕಿಣಿಯನ್ನು ಎಚ್ಚರಗೊಳಿಸಿತು. ಶಾಸ್ತ್ರಿಗಳು ಕೋಪವನ್ನು ಬಹು ಪ್ರಯಾಸದಿಂದಲೆ ನುಂಗಿದ್ದರು. ನಿಧಾನವಾಗಿ ಬಾಗಿ ಕತ್ತರಿಯನ್ನು ತಮ್ಮ ಕೈಗೆ ಎತ್ತಿಕೊಂಡಿದ್ದರು. ರುಕ್ಕಿಣಿಗೆ ಏನಾಗುತ್ತಿದೆ ಎನ್ನುವುದರ ಕಲ್ಪನೆ ತಟ್ಟನೆ ಹೊಳೆಯಲಿಲ್ಲ... ಮಾವಯ್ಯನಿಗೆ ಅತ್ತೆಯ ಮೇಲೆ ಅದೇಕೋ ಕೋಪ ಬಂದಿದೆ. ಅದಕ್ಕೆ ಕತ್ತರಿ ಹಿಡಿದು ಇಲ್ಲಿಗೆ ಓಡಿಸಿ ಬಂದಿರಬೇಕು!... “ಬೇಡಿ, ಮಾವಯ್ಯ, ಸುಶೀಲತೆ ಎಂಥದೇ ಘೋರ ಅಪರಾಧ ಮಾಡಿದ್ದರೂ ದಯಮಾಡಿ ಕ್ಷಮಿಸಿ, ಅತ್ತೆಗೆ ಕೊಂಚ ಮುಂಗೋಪ, ನಾನೂ ಒದ್ದೀನಿ. ಆದರೆ ಅವಳ ಹೃದಯ ಒಳ್ಳೇದು” ಎನ್ನುತ್ತ ರುಕ್ಕಿಣಿ ಶಾಸ್ತ್ರಿಗಳ ಕಾಲಿಗೆ ಬಿದ್ದಳು.... “ಅಯ್ಯೋ, ನೀನೇಕೆ ಕಾಲಿಗೆ ಬಿದ್ದೆ. ಏಳು, ಏಳು...” ಶಾಸ್ತ್ರಿಗಳು ಅವಳ ಭುಜ ಹಿಡಿದೆತ್ತಿದರು. ಮತ್ತೆ ಶಾಸ್ತಿಗಳ ದೃಷ್ಟಿ ಸುಶೀಲಳಲ್ಲಿ ಕ್ಷಣಕಾಲ ನೆಟ್ಟಿತು. ಆ ದೃಷ್ಟಿಯಲ್ಲಿ, ತಮ್ಮ ತಂಗಿಯಾದವಳು ಇಂಥ ಹೇಯಕಾರ್ಯಕ್ಕೆ ಇಳಿಯಬಹುದೆ? ಎಂಬ ಅಪಾದನೆಯನ್ನು ಸುಶೀಲ ಗುರುತಿಸಿರಬಹುದು! ನಾಚಿಕೆ ಮತ್ತು ಅವಮಾನಗಳಿಂದ ಅವಳು ತಲೆತಗ್ಗಿಸಿದ್ದಳು. ಶಾಸ್ತ್ರಿಗಳು ಅಲ್ಲಿಂದ ದೃಷ್ಟಿ ಕಿತ್ತು ನಿರ್ಭಾವದಿಂದ ಎಂಬಂತೆ ಕೋಣೆಯಿಂದ ಹೊರಗೆ ನಡೆದಿದ್ದರು... ಯಾಕೆ ಹೀಗೆ?- ಎಂದು ಆ ರಾತ್ರಿ ಪೂರಾ ರುಕ್ಕಿಣಿ ತಲೆ ಕೆಡಿಸಿಕೊಂಡೇ ಇದ್ದಳು... ಮಾರನೆಯ ಪ್ರಾತಃಕಾಲ ಎದ್ದವರೇ ಶಾಸ್ತ್ರಿಗಳು ರುಕ್ಕಿಣಿಗೆ ಹೇಳಿದ್ದರು, ಸುಶೀಲೆ ಕಿವಿಗಳಿಗೂ ಬೀಳುವಷ್ಟು ಗಟ್ಟಿಯಾಗಿ: