ಪುಟ:ಶತಕ ಸಂಪುಟ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹರಿಹರ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡ
ಹರಿಹರ ಯುಗಪ್ರವರ್ತಕ, ಋಷಿಕವಿ, ಭಕ್ತಕವಿ, ಮಹಾಕವಿ, ಕ್ರಾಂತಿಕಾರಿಕವಿ,
ಹೊಸಯುಗದ ಹರಿಕಾರ ಎಂದೆಲ್ಲ ಕರೆಯಿಸಿಕೊಂಡಿದ್ದಾನೆ. ಇದಕ್ಕೆ ಅವನ ಬದುಕು-
ರಚಿಸಿದ ಕೃತಿಗಳು - ಸಾಹಿತ್ಯ ಕ್ಷೇತ್ರದಲ್ಲಿ ( ವಸ್ತು - ರೂಪ - ಭಾಷೆ - ಧೋರಣೆಗಳ
ದೃಷ್ಟಿಯಿಂದ ) ಆತ ಉಂಟುಮಾಡಿದ ಬದಲಾವಣೆ, ತೋರಿದ ಮಾರ್ಗ, ಬೀರಿದ
ಪ್ರಭಾವಗಳು ಕಾರಣವಾಗಿವೆ. ಈತನ ಜೀವನ ಚರಿತ್ರೆಗೆ ಸಂಬಂಧಿಸಿದ ವಿವರಗಳನ್ನು
ಈಗಾಗಲೇ ಶೋಧಿತವಾದ ಸಂಗತಿಗಳ ಹಿನ್ನಲೆಯಲ್ಲಿ ಹೀಗೆ ಕ್ರೋಡೀಕರಿಸಬಹುದು.
ಕರ್ನಾಟಕದ ಸುಪ್ರಸಿದ್ಧ ಸಾಂಸ್ಕೃತಿಕ ಕ್ಷೇತ್ರವೆನಿಸಿದ ಹಂಪೆ, ಹರಿಹರನ
ಬದುಕನ್ನು ರೂಪಿಸಿದ ಮಹತ್ವದ ಸ್ಥಳ. ಈತನ ಹುಟ್ಟೂರು ಬಹುಶಃ ಹಳೇಬೀಡಿನ
ಹತ್ತಿರದ ಯಾವುದಾದರೊಂದು ಹಳ್ಳಿಯಾಗಿರಬೇಕು. ಹಳೆಬೀಡಿನ ಹೊಯ್ಸಳರಲ್ಲಿ
ಆತ ಮೊದಲು ಕರಣಿಕನಾಗಿದ್ದು, ಪ್ರಸಿದ್ಧ ದೈವತ ವಿರೂಪಾಕ್ಷನ ಸನ್ನಿಧಿ ಕಾರಣವಾಗಿ
ಹಂಪೆಗೆ ಬಂದಿರಬೇಕು. ಅಲ್ಲಿನ ಗುರುಗಳಾದ ಹಂಪೆಯ ಮಾಯಿದೇವರಿಂದ
ದೀಕ್ಷೆ ಪಡೆದು ಅಲ್ಲಿಯೇ ನೆಲೆನಿಂತಿರಬೇಕು - ಎಂದು ಡಾ. ಎಂ. ಎಂ. ಕಲಬುರ್ಗಿ
ಅವರು ಅಭಿಪ್ರಾಯಪಡುತ್ತಾರೆ (ಹರಿಹರನ ರಗಳೆಗಳು - ಕನ್ನಡ ವಿಶ್ವವಿದ್ಯಾಲಯ
ಹಂಪಿ, ಪೀಠಿಕೆ, ಮಟ ೮). ಹಂಪೆಯಲ್ಲಿಯೇ ಈತ ಬಹುಕಾಲ ಇದ್ದು, ಅಲ್ಲಿಯೇ
ಐಕ್ಯನಾಗಿರುವುದರಿಂದ, ತನ್ನ ಕೃತಿಗಳಲ್ಲಿ ಹಂಪೆಯನ್ನು ವಿಶೇಷವಾಗಿ
ಉಲ್ಲೇಖಿಸಿರುವುದರಿಂದ, ಅನ್ಯ ಕವಿಗಳು ಹಂಪೆಯ ವಿಶೇಷಣ ಹಚ್ಚಿ ಆತನನ್ನು
ಕರೆಯುವುದರಿಂದ 'ಹಂಪೆಯ ಹರಿಹರ' ನೆಂದೇ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದಾನೆ.
ಹರಿಹರನ ತಂದೆ ಮಾಯಿದೇವ, ತಾಯಿ ಶರ್ವಾಣಿ, ತಂಗಿ ರುದ್ರಾಣಿ.
ಈಕೆಯ ಮಗ ರಾಘವಾಂಕ. ಅಂದರೆ ಹರಿಹರನ ಸೋದರಳಿಯ ರಾಘವಾಂಕ.
ಇಬ್ಬರೂ ನೂತನ ಸಾಹಿತ್ಯ ಸಂಪ್ರದಾಯದ ಸಂಸ್ಥಾಪಕರು. ಕನಸಿನಲ್ಲಿಯೂ
ಅನ್ಯದೇವರನ್ನು ಹೊಗಳದ ವೀರವ್ರತ ಹರಿಹರನದು. ಅವನ ಕೌಟುಂಬಿಕ ಪರಂಪರೆ
- ಪರಿಸರಗಳದು ನಿಷ್ಠುರ ಶಿವಭಕ್ತಿ. ಈತ ಮೂಲತಃ ಶುದ್ಧ ಶೈವನಾಗಿದ್ದು ಅನಂತರ
ವೀರಶೈವನಾಗಿರಬೇಕೆಂದು ತಿಳಿದುಬರುತ್ತದೆ. ಹಂಪೆಯ ವಿರೂಪಾಕ್ಷ ಈತನ ಇಷ್ಟದೈವ.
ಈತನನ್ನು ತನ್ನೆಲ್ಲ ಕೃತಿಗಳಲ್ಲಿ ಅನನ್ಯ ಭಕ್ತಿಯಿಂದ ಸ್ತುತಿಸಿದ್ದಾನೆ.
ಹರಿಹರನನ್ನು ಕುರಿತು ಅನೇಕ ದಂತಕಥೆಗಳು ಹುಟ್ಟಿಕೊಂಡಿವೆ. ಹೊಯ್ಸಳರ
ಆಸ್ಥಾನದಲ್ಲಿದ್ದಾಗ ಹಂಪೆಯ ವಿರೂಪಾಕ್ಷನ ತೆರೆಗೆ ಹತ್ತಿದ ಉರಿಯನ್ನು ಅಂಗೈಯಿಂದ
ತಿಕ್ಕಿ ಆರಿಸಿ ರಾಜಗೌರವ ಪಡೆದದ್ದು; ಹರಿಹರ ಗ್ರಾಮದ ಹರಿಹರೇಶ್ವರ ದೇವಸ್ಥಾನದಲ್ಲಿ


xiii