ಪುಟ:ಶತಕ ಸಂಪುಟ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಣ ಬೆಕ್ಕಾಡುವೊಲಾಡಿಕೊಂಡು ಧನಮುಂ ಪೋಗಲ್ಕೆ ಮಾತಾಡಳೈ
ಗಣಿಕಾಸ್ತ್ರೀ ಗುಣಕಿಲ್ಲವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ -೮೩
ಹಾಗೆಯೇ ಸ್ವಪ್ನದ ಫಲ, ಶಕುನದ ವಿಚಾರ (೮೭ ರಿಂದ ೯೦), ಕಡುಮೂರ್ಖರ
ರೀತಿ (೫೨), ಧನಿಕರ ದರ್ಪ (೫೮,೫೯) ವಿಧಿವಶರಾಗಿ ಬಳಲಿದ ಪುರಾಣ
ವ್ಯಕ್ತಿಗಳ ಪಾಡನ್ನು (೯೨,೯೩,೯೫,೯೬,೯೭) ಮಾರ್ಮಿಕವಾಗಿ ಬಣ್ಣಿಸಲಾಗಿದೆ.
ಇಡೀ ಕಾವ್ಯ ಲೋಕೋಕ್ತಿಗಳಿಂದ ಇಡಿಕಿರಿದಿದೆ. ಕೆಲವು ಸಲ ಕವಿ ಹೇಳುವ
ಸೂತ್ರಬದ್ಧವಾದ ಮಾತುಗಳೇ ಲೋಕೋಕ್ತಿಗಳಾಗಿ ಪ್ರಚಾರ ಪಡೆದಿವೆ.
' ನೀತಿಯೇ ಸಾಧನಂ ಸಕಲಲೋಕಕ್ಕೆಲ್ಲ ' (೩), ' ಪಾಲುಂಡು ಮೇಲುಂಬರೆ '(೪)
' ಸಖರಿಂದುನ್ನತವಸ್ತುವೆ ?' (೪) ' ಸುತನೆ ಮುಕ್ತಿಗೆ ಮಾರ್ಗವೈ '(೧೧)
' ಕುಲವೆಣ್ಣಿಂಗೆಣೆಯಾವುದೈ '(೧೨), ' ಕಳೆಯೆ ಸರ್ವರೊಳುತ್ತಮಂ ' (೧೪), ' ಸರಿಯೆ
ಸೂರ್ಯಗೆ ಕೋಟಿ ಮಿಂಚುಬಳಗಳ್, ನಕ್ಷತ್ರವೆಷ್ಟಾದೊಡಂ ದೊರೆಯೆ ಚಂದ್ರಗೆ,
ಜೀವರತ್ನಕ್ಕೆಣೆಯೆ ಮಿಕ್ಕಾದ ಪಾಷಾಣಗಳ್ ' (೧೫) ' ಕಾಲೋಚಿತಕ್ಕೈದಿದಾ ತೃಣವೆ
ಪರ್ವತವಲ್ಲವೆ ' (೨೯), ' ಕೊಡುವ‌ರ್ ಕೊಂಬರು ಮರ್ತ್ಯರೆ ?' (೩೨), ಹರಕೊಲ್ಲಲ್
ನರ ಕಾಯ್ವನೆ' 'ವಿಧಿಯಂ ಮೀರುವನಾರೈ' (೩೨) 'ಪಣೆಯೊಳಂ ಪೂರ್ವಾರ್ಜಿತಂ
ಹಾಗಿರಲ್ ಕೂಲನೇ ಕ್ಷುದ್ರ ಸಮರ್ಥನಂ' (೩೮) 'ಚಿಗುರೆಂದುಂ ಮೆಲೆ ಬೇವು
ಸ್ವಾದವಹುದೆ ?' 'ಚೇಳ್ ಚಿಕ್ಕದೆಂದಳ್ಕರಿಂ ತೆಗೆಯಲ್ ಕಚ್ಚದೆ', ' ಪಾಲನೂಡಿ
ಫಣಿಯಂ ಸಾಕಲ್ಕೆ ವಿಶ್ವಾಸಿಯೆ ?' (೬೭) 'ಋಣಭಾರಕ್ಕೆಣೆಯಾವುದೈ', (೯೨),
' ಕೊಡುವರ್ಗಾವುದು ದೊಡ್ಡಿತೈ' (೯೩).
ಕವಿ ಸೃಷ್ಟಿಸಿದ ಸೂತ್ರಬದ್ದ ಉಕ್ತಿಗಳು :
' ದಳವಾಯೆ ತಳವಾಯೆಲೈ' (೭೨) 'ಗಣಕಂ ಹೆಗ್ಗಣಕಂ' (೭೩) 'ತಳವಾರಂ
ಬೆಳವಾರನೈ' (೭೫) 'ಗಣಿಕಾಸ್ತ್ರೀ ಗುಣಕಿಲ್ಲವೈ' (೮೩) 'ವೇಶ್ಯೆಯೆ ವಶ್ಯವೈ' (೮೪)
'ಮಡಿಯೇ ನಿರ್ಮಲಚಿತ್ತವೈ' (೧೦೧) ಇತ್ಯಾದಿ.
ಇಲ್ಲಿ ಕವಿಯ ಲೋಕಾನುಭವ ಮತ್ತು ಸ್ವಾನುಭವಗಳು ಒಟ್ಟಾಗಿಯೇ
ಕೆಲಸಮಾಡಿವೆ.
ಸೋಮ ಲೋಕ ಜ್ಞಾನಿಯಷ್ಟೇ ಅಲ್ಲ, ಪ್ರತಿಭಾನ್ವಿತ ಕವಿಯೂ ಆಗಿದ್ದಾನೆ.
ಇದಕ್ಕೆ ಸೋಮೇಶ್ವರ ಶತಕದಲ್ಲಿ ಅನೇಕ ನಿದರ್ಶನಗಳು ದೊರೆಯುತ್ತವೆ. ಕೆಲವು
ಪದ್ಯಗಳಂತೂ ಆತನ ಕಲ್ಪನಾಶಕ್ತಿಗೆ ಹಿಡಿದ ಕನ್ನಡಿ ಎನಿಸಿವೆ. ಆತನ ಭಾಷಾ
ಪ್ರಭುತ್ವ, ಛಂದೋಪರಿಣತಿ, ಪುರಾಣ ಪ್ರಜ್ಞೆಗಳಿಗೂ ಈ ಶತಕ ಒಂದು ಸ್ಪಷ್ಟ
ಸಾಕ್ಷಿಯಾಗಿ ನಿಂತಿದೆ.

xxviii