ಪುಟ:ಶತಕ ಸಂಪುಟ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೇರಿದವನಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಕವಿಚರಿತೆಕಾರರೂ ಹಾಗೇ
ಗುರುತಿಸಿದ್ದಾರೆ. ಉಳಿದವರೂ ಇದನ್ನು ಅನುಮೋದಿಸುತ್ತ ಬಂದಿದ್ದಾರೆ.
ನಿಜಲಿಂಗಶತಕ:
' ನಿಜಲಿಂಗಶತಕ ' ನಿಜಲಿಂಗಾರಾಧ್ಯನ - ಸದ್ಯಕ್ಕೆ ದೊರೆತ - ಏಕೈಕ ಕೃತಿ. ಇದರಲ್ಲಿ
ಆರಂಭದಲ್ಲಿ ಮೂರುಸಾಲಿನ ಪಲ್ಲ, ಅನಂತರ ೧೦೦ ವಾರ್ಧಕ ಷಟ್ಪದಿಗಳು
ಇವೆ. ಪ್ರತಿಪದ್ಯ 'ನಿಜಲಿಂಗ ಭವಭಂಗ ಶರಣಜನವರದ ಜಯತು' ಎಂದು
ಮುಕ್ತಾಯಗೊಳ್ಳುತ್ತವೆ. " ನಿತ್ಯ ನಿರುಪಮ ವಿಶ್ವಮೂರ್ತಿ
ನಿಜಲಿಂಗೇಶನುತ್ತಮೋತ್ತಮವೆನಿಪ ಶತಕವನು ಬಲ್ಲಂತೆ ಬಿತ್ತರಿಪೆ " ಎಂದು ಕಾವ್ಯ
ಆರಂಭಿಸುವ ಕವಿ ಮುಂದೆ ಉದ್ದಕ್ಕೂ ಶಿವನ ಲೀಲಾ ವಿಲಾಸವನ್ನು ಅನೇಕ
ವಿಶೇಷಣ ಮತ್ತು ದೃಷ್ಟಾಂತಗಳ ಮೂಲಕ ಹೇಳುತ್ತ ಸಾಗುತ್ತಾನೆ. ಯಾವೊಂದು
ಪದ್ಯವೂ ಶಿವಸ್ತುತಿಯಿಂದ ಹೊರತಾಗಿಲ್ಲ. ಏನನ್ನು ಹೇಳಿದರೂ ಅದು ಶಿವನಿಂದಲೇ
ಆದುದು, ಶೀವನೇ ಅದಕ್ಕೆ ಕಾರಣಕರ್ತ. ಹೀಗಾಗಿ ಮಾನವ ತನ್ನೆಲ್ಲ ಸುಖ -
ದುಃಖ, ಭವಬಂಧನಗಳಿಂದ ಬಿಡುಗಡೆ ಹೊಂದಲು ಶಿವನಿಗೆ ಮಾತ್ರ ಮೊರೆ
ಹೋಗಬೇಕು ಎಂದು ತಿಳಿಸುತ್ತಾನೆ. ಒಂದರಿಂದ ಹತ್ತರ ವರೆಗಿನ ಪದ್ಯಗಳನ್ನು
ಒಗಟಿನ ರೂಪದಲ್ಲಿ ಬೆಡಗಿನ ಭಾಷೆಯಲ್ಲಿ ಹೆಣೆದಿದ್ದಾನೆ. ಅವು ಶಿವನ
ಮಹಿಮಾತಿಶಯಗಳನ್ನೆ ಹೇಳುತ್ತವೆ. ಸುಲಭವಾಗಿ ತಿಳಿಯದ ಅವನ್ನು
ಅರ್ಥೈಸಿಕೊಳ್ಳಲು ಓದುಗ ಕಷ್ಟಪಡಬೇಕಾಗುತ್ತದೆ. ಶಾಸ್ತ್ರ - ಪುರಾಣಗಳ ಮೊರೆ
ಹೋಗಬೇಕಾಗುತ್ತದೆ.
ಹನ್ನೊಂದರಿಂದ ಮೂವತ್ತರ ವರೆಗಿನ ಪದ್ಯಗಳಲ್ಲಿ ಶಿವನ ಸಂಸಾರ ಚಿತ್ರವನ್ನು
ಶೃಂಗಾರಮಯವಾಗಿ ಬಿಡಿಸಲಾಗಿದೆ. ಅಲ್ಲಿ ಶಿವನು ಪಾರ್ವತಿಯೊಡನೆ ಗೈದ
ಸರಸ ಸಲ್ಲಾಪ, ಅವನು ಧರಿಸಿದ ವಿಶಿಷ್ಟ - ವಿಚಿತ್ರ ವೇಷಭೂಷಣ, ಅವನು
ಲೋಕಕಲ್ಯಾಣಕ್ಕಾಗಿ ಮಾಡಿದ ಅನೇಕ ಅದ್ಭುತ ಕಾರ್ಯಗಳನ್ನು ಮನದುಂಬಿ
ಬಣ್ಣಿಸಲಾಗಿದೆ. ೩೧ ರಿಂದ ೪೦, ೫೭ ರಿಂದ ೬೦ ಮತ್ತು ೮೭ ರಿಂದ ೯೦ರ
ವರೆಗಿನ ಪದ್ಯಗಳಲ್ಲಿ ಲೋಕನೀತಿಯನ್ನು ನಿರೂಪಿಸಿದರೆ, ೪೦ ರಿಂದ ೫೦ ರವರೆಗಿನ
ಪದ್ಯಗಳಲ್ಲಿ ಮೂರ್ಖರು ಮತ್ತು ಜಾಣರ ಗುಣಲಕ್ಷಣಗಳನ್ನು ತಿಳಿಸಲಾಗಿದೆ. ೫೧
ರಿಂದ ೫೫ ಮತ್ತು ೭೭ ರಿಂದ ೮೦ ರ ವರೆಗಿನ ಪದ್ಯಗಳಲ್ಲಿ ಜೀವಾತ್ಮನ ಹುಟ್ಟು,
ಬಾಲ್ಯ, ಯೌವ್ವನ, ಮುಪ್ಪು - ಅವುಗಳಲ್ಲಿ ಆತ ಅನುಭವಿಸುವ ಕಷ್ಟ - ಸುಖಗಳನ್ನು
ವರ್ಣಿಸಲಾಗಿದೆ. ಮನದ ಚಂಚಲತೆ, ಕಾಮನ ಅಂಡಲೆ, ಧನದ ಮದ, ಕ್ರೋಧ
ಲೋಭ ಮೋಹ ಮತ್ಸರಗಳ ಉಪಟಳ, ಕುಟಿಲರು - ಕುಹಕಿಗಳು, ಚೋರರು,

xxxii