ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸರ

ಅರ್ಥವಾಗಲಿ ಉದ್ದೇಶವಾಗಲಿ ಏನು ಎಂಬುದೇ ಮರೆತು ಹೋಗಿದೆ. ಪ್ರಾಣಾಯಾಮವು ಮೂರು ಬೆಟ್ಟುಗಳಿಂದ ಮೂಗಿನ ತುದಿಯನ್ನು ಹಿಡಿಯುವುದರಲ್ಲಿ ಪರಿಣಮಿಸಿದೆ. ದೇವರ ಪೂಜೆಯು ಮನೆ ತುಂಬ ಮೂರ್ತಿಗಳನ್ನು ಇಟ್ಟುಕೊಂಡು ಅವುಗಳ ಮೇಲೆ ಕಾಟಾ ಚಾರಕ್ಕೆ ಹೂವು ತಂದು ಹಾಕುವುದರಲ್ಲಿ ಪರಿಣಮಿಸಿದೆ. ಇತ್ಯಾದಿ. ಹೀಗಿರಲು, ಕಾಲಕ್ರಮೇಣ ಸೇರಿದ ಕೊಳೆಯ ಮೇಲೆ ಮಳೆ ಸುರಿ ಯಿತು. ಆಗಲೋ ಈಗಲೋ ಬಿದ್ದುಹೋಗುವಂತಿರುವ ಮನೆಯ ಮೇಲೆ ಬಿರುಗಾಳಿ ಬೀಸಿದಂತೆ ನಮ್ಮ ಪುರಾತನ ಧರ್ಮ ಗೃಹದ ಮೇಲೆ ಇಂಗ್ಲಿಷರ ಜೊತೆಯಲ್ಲಿ ಪಾಶ್ಚಿಮಾತ್ಯ ನಾಗರಿಕತೆ ಯೆಂಬ ಬಿರುಗಾಳಿ ಬೀಸಿ ಅದನ್ನು ಬುಡಮುಟ್ಟ ಅಲ್ಲಾಡಿಸಿ ಬಿಟ್ಟಿತು.

ಇದಕ್ಕೆ ಕಾರಣವೇನು ? ಬೇರೆ ಬೇರೆ ಸ್ವಭಾವವೂ ಲಕ್ಷವೂ

ಉಳ್ಳ ಎರಡು ಜನರು ಸೇರಿದರೆ ಆಗುವುದು ಹೀಗೆತಾನೆ. ಹಾಲಿಗೆ ಹುಳಿ ಬಿದ್ದರೆ ಅದು ಒಡೆಯುವುದು ಏನಾಶ್ಚರ್ಯ ? ನಮ್ಮವರಿಗೆ ಧರ್ಮವೂ ಪರಲೋಕವೂ ಮುಖ್ಯ ಲಕ್ಷ, ಪಾಶ್ಚಿಮಾತ್ಯರಿಗೆ ಐಹಿಕಸುಖವೇ ಮುಖ್ಯ ಲಕ್ಷ್ಮ, ಇದಕ್ಕೆ ಅವರ ಸ್ಥಿತಿಸ್ವಭಾವಗಳೂ ಭೌತಿಕ ಮುಂತಾದ ಶಾಸ್ತ್ರಗಳೂ ಸಹಕಾರಿಗಳಾದುವು. ಇದರಿಂದ ಅವರು ಸ್ಥಲಜಲಾಂತರಿಕ್ಷಗಳಲ್ಲಿ ನಿರಾಯಾಸವಾಗಿ ಸಂಚಾರ ಮಾಡಬಲ್ಲವರಾದರು. ಅಗ್ನಿ ಪರ್ವತಗಳೂ ಸೂರ್ಯ ಚಂದ್ರರೂ ಗ್ರಹನಕ್ಷತ್ರಗಳೂ ತಮ್ಮ ಗುಟ್ಟನ್ನು ಬಿಟ್ಟು ಕೊಟ್ಟುವು, ಅವರು ತಮ್ಮ ವಾಸಕ್ಕಾಗಿ ಇಹಲೋಕದಲ್ಲಿಯೇ ಇಂದ್ರಭವನಗಳನ್ನು ಕಲ್ಪಿಸಿ ಕೊಂಡರು. ವಿಸ್ತಾರವಾದ ರಾಜ್ಯವನ್ನು ಕಟ್ಟಿದರು, ಅಪಾರ ವಾದ ಸಂಪತ್ತನ್ನು ಪಡೆದರು, ಆದರೆ ಈ ಸುಖಸಾಧನಗಳಿಂದಲೇ ಅತೃಪ್ತಿಯೂ ಅಶಾಂತತೆಯೂ ಹೆಚ್ಚಿದುವು. ಆತ್ಮ, ಈಶ್ವರ, ಮುಕ್ತಿ ಮುಂತಾದ ವಿಷಯಗಳು ಭ್ರಮೆ ಯೆನ್ನುವ ಹಾಗಾಯಿತು. ಪಾಶ್ಚಿಮಾತ್ಯನು ಬಹಿರ್ಮುಖನಾಗಿ ನಾಸ್ತಿಕನೂ ಜಡವಾದಿಯೂ ಆದನು. ಅವನಿಗೆ ಇಹಲೋಕ ಭೋಗವೇ ಭೋಗವಾಯಿತು.