ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೮೯

ಎಲ್ಲಾ ಮಹಾ ಪುರುಷರೂ ಹೀಗೆಯೇ : ಅವರು ಎಷ್ಟೇ ಕಠಿನವಾದ ವಿಷಯಗಳನ್ನು ತೆಗೆದುಕೊಂಡರೂ ಸುಲಭವಾದ ಮಾತುಗಳಿಂದ ಮನಸ್ಸಿಗೆ ಅಂಟುವಂತೆಯೂ ಮರೆಯದಂತೆಯೂ ಅವುಗಳನ್ನು ವಿವರಿಸಿ ಹೇಳುವರು. ಸಂದರ್ಭಕ್ಕೆ ಅನುಕೂಲವಾದ ಕಥೆಗಳನ್ನೂ ಉಪಮಾನಗಳನ್ನೂ ಹೇಳುವುದೂ ಇವರಲ್ಲಿ ಒಂದು ಸಾಮಾನ್ಯವಾದ ಗುಣ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಟ್ಟರೆ ವ್ಯಕ್ತವಾಗಬಹುದು. ಒ೦ದುಸಾರಿ ಸಾಂಖ್ಯ ದರ್ಶನದ ಪ್ರಸ್ತಾಪ ಬಂದಾಗ ರಾಮಕೃಷ್ಣ ವರಮಹಂಸರು ಹೇಳಿದ್ದು ಏನೆಂದರೆ "ಪುರುಷ ಅಕರ್ತಾ, ಏನೂ ಮಾಡುವುದಿಲ್ಲ; ಪ್ರಕೃತಿಯೇ ಎಲ್ಲಾ ಕಾರ್ಯವನ್ನೂ ಮಾಡುವುದು. ಪುರುಷನು ಪ್ರಕೃತಿಯ ಈ ಸಕಲ ಕಾರ್ಯಗಳನ್ನೂ ಸಾಕ್ಷಿರೂಪವಾಗಿ ನೋಡುತ್ತಿರುತ್ತಾನೆ. ಪ್ರಕೃತಿಯೂ ಪುರುಷನನ್ನು ಬಿಟ್ಟು ತಾನಾಗಿ ತಾನು ಯಾವ ಕೆಲಸವನ್ನೂ ಮಾಡುವುದಕ್ಕೆ ಆಗುವುದಿಲ್ಲ”. ಇದು ಕೇಳಿದವರೆಲ್ಲರಿಗೂ ಅರ್ಥವಾಗಲಿಲ್ಲ. ಅದನ್ನು ನೋಡಿ “ಮನೆಗಳಲ್ಲಿ ನೋಡಿಲ್ಲವೇನಪ್ಪ! ಯಜಮಾನನಾದವನು ಸುಖವಾಗಿ ಒ೦ದು ದಿ೦ಬು ಒರಗಿಕೊ೦ಡು ಕೂತು, ಮಾಡಬೇಕಾದ ಕೆಲಸವನ್ನು ಹೇಳುತ್ತಾನೆ. ಯಜಮಾನಿ ಮಾತ್ರ ನೆರಿಯನ್ನೂ ಸೆರಗನ್ನೂ ಸೆಕ್ಕಿಕೊಂಡು, ಒಂದುಸಲ ಅತ್ತಲಾಗಿ ಒಂದುಸಲ ಇತ್ತಲಾಗಿ ಹೋಗುತ್ತ ಆ ಕೆಲಸವಾಯಿತೇ ಇಲ್ಲವೇ, ಈ ಕೆಲಸವನ್ನು ಮಾಡಿದರೇ ಇಲ್ಲವೇ ಎಂದು ನೋಡುತ್ತಾಳೆ; ಕೇಳುತ್ತಾಳೆ; ಮನೆಯಲ್ಲಿರುವ ಮಕ್ಕಳು ಮರಿಗಳ ಯೋಗಕ್ಷೇಮಗಳನ್ನು ನೋಡುತ್ತಾಳೆ. ಮಧ್ಯೆ ಮಧ್ಯೆ ಬಂದು ಗಂಡನಿಗೆ “ಅದು ಹಾಗಾಯಿತು; ಇದು ಹೀಗಾಯಿತು. ಅದು ಮಾಡುವುದಕ್ಕೆ ಆಗುತ್ತದೆ. ಇದು ಮಾಡುವುದಕ್ಕೆ ಆಗುವುದಿಲ್ಲ” ಎಂದು ಹೇಳುತ್ತಾಳೆ. ಯಜಮಾನನು ಮಾತ್ರ ತಂಬಾಕನ್ನು ತೀಡುತ್ತಲೋ ನಶ್ಯವನ್ನು ಮಾಡುತ್ತಲೋ 'ಹು ಹು' ಎನ್ನುತ್ತಲೂ ತಲೆಯನ್ನೂ ಕೈಯನ್ನೂ ಅಲ್ಲಾಡಿಸುತ್ತಲೂ