ಪುಟ:ಸಂತಾಪಕ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಕರ್ಣಾಟಕ ಚಂದ್ರಿಕೆ.


ಯುವಕನು ಹೀಗಾಗಬಹುದೆಂದು ಮೊದಲೇ ಭಾವಿಸಿದ್ದನಾದುದರಿಂದ
ಕುಮಾರಿಯ ಕೈಯನ್ನು ತಟ್ಟನೆ ಹಿಡಿದುಕೊಂಡು " ಕಮಲೆ! ಇದೇಕೆ ಭಯ
ಪಡುವೆ ? ನನ್ನನ್ನು ಅನ್ಯನೆಂದು ಭಾವಿಸಬೇಡ. ನಿನಗೆ ನನ್ನಲ್ಲಿ ಪ್ರೀತಿ
ಯಿರುವುದೋ ಇಲ್ಲವೋ ಅದನ್ನು ತಿಳಿದುಕೊಳ್ಳಬೇಕೆಂದು ಇಲ್ಲಿಗೆ ಬಂದಿ
ರುವೆನು. ಈಗ ಹೇಳು, ನನ್ನನ್ನು ಪ್ರೀತಿಸುವೆಯೋ ಇಲ್ಲವೋ ? " ಎಂದು
ಮತ್ತೆ ಕೇಳಿದನು. ಕುಮಾರಿಗೆ ಮಾತನಾಡುವುದಕ್ಕೆ ಬಾಯೇ ಬಾರದು.
ಅವಳ ಮನಸ್ಸಿನಲ್ಲಿ ಬಗೆಬಗೆಯ ಭಾವಗಳು ಅಂಕುರಿಸುತ್ತಿದ್ದುವು. ಇದಕ್ಕೆ
ಉತ್ತರವನ್ನು ಹೇಳುವುದು ಬಹುಕಷ್ಟವಾಯಿತು. ಪ್ರೀತಿಸುವುದೆಂದರೇ
ನೋ ಅವಳಿಗೆ ತಿಳಿಯದು. ಏತಕ್ಕೆ ಪ್ರೀತಿಸಬೇಕೋ, ಹೇಗೆ ಪ್ರೀತಿಸ
ಬೇಕೋ, ಯಾರನ್ನು ಪ್ರೀತಿಸಬೇಕೋ, ಅವಳರಿಯದವಳಾಗಿದ್ದಳು.
ಭೀತಿಯೂ ಲಜ್ಜೆಯೂ ಕೋಪವೂ ಏಕಕಾಲದಲ್ಲಿ ಅವಳ ಮನಸ್ಸನ್ನು
ಆಕ್ರಮಣಮಾಡಿದುವು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಕುಮಾ
ರಿಯು ಯುವಕನನ್ನು ಒಂದು ಬಾರಿ ನೋಡಿದಳು. ಮತ್ತೆ ತಲೆಬಾಗಿಸಿದಳು.
ಮುಂದೆ ಯಾವ ಯೋಚನೆಯೂ ಅವಳ ಬುದ್ದಿಗೆ ತೋರದೆ ಹೋಯಿತು.
ತನ್ನ ಕೈಯನ್ನು ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದಳು. ಯುವಕನು
ದೃಢವಾಗಿ ಹಿಡಿದಿದ್ದುದರಿಂದ ಅವಳ ಉದ್ದೇಶವು ಸಫಲವಾಗಲಿಲ್ಲ. ಕುಮಾ
ರಿಯು ಸ್ತಬ್ದಳಾಗಿಬಿಟ್ಟಳು. ಯುವಕನು ಧಾರ್ಷ್ಟ್ಯವನ್ನು ವಹಿಸಿ ಅವಳ
ಗಲ್ಲವನ್ನು ಹಿಡಿದು ಬಲಾತ್ಕರಿಸಿ ಚುಂಬಿಸಿದನು.
ಪಾಠಕಮಹಾಶಯರೇ! ಈ ಯುವಕನ ವರ್ತನವನ್ನು ಕಂಡು
ನೀವು ಕೋಪಗೊಳ್ಳುವಿರೋ ಇಲ್ಲವೋ ನಮಗೆ ತಿಳಿಯದು. ನೀವೇ
ಕುಮಾರಿಯ ಸ್ಥಿತಿಯಲ್ಲಿದ್ದಿರಾದರೆ ಕೋಪಿಸಿಕೊಳ್ಳದೆ ಇರುತ್ತಿರಲಿಲ್ಲವೆಂದು
ನಾವು ದೃಢವಾಗಿಯೂ ಹೇಳಬಲ್ಲೆವು. ಆದರೆ ಕುಮಾರಿಯು ತನ್ನ ಕೋಪ
ವನ್ನು ಅಡಗಿಸಿಕೊಂಡು ' ಏನೋ ಹೇಳಬೇಕೆಂದು ಪ್ರಯತ್ನಿಸಿದಳು.
ಉತ್ತರಕ್ಷಣದಲ್ಲಿಯೇ ಸ್ತ್ರೀಜನಸಹಚಾರಿಣಿಯಾದ ಲಜ್ಜೆಯು ಅಲ್ಲಿಗೆ
ಬಂದು ಕುಮಾರಿಯ ಉದ್ದೇಶವನ್ನು ಭಂಗಗೊಳಿಸಿದಳು. ಕುಮಾರಿಗೂ
ಅವಳಿಗೂ ಸಹಸ್ರಸಹಸ್ರತರ್ಕವಿತರ್ಕಗಳು ನಡೆದುವು. ಕುಮಾರಿಗೆ ಬಹು
ಕೋಪಬಂದಿತು. ಅವಳು ಲಜ್ಜೆಯನ್ನು ಕುರಿತು " ಚಿಃ, ರಾಕ್ಷಸಿಯೆ ! ತೊಲಗು.