ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ ೧೯೯ ಗೌರಮ್ಮನನ್ನು ಆತ ಕೇಳಿದ:
"ಅಕ್ಕಾ, ನೀನು ಬರುವುದಿಲ್ಲೇನಕ್ಕ?" ಗೌರಮ್ಮ ಅಂದಳು: "ನೋಡಿದಿಯಲ್ಲ.ಸೋಮ? ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರಬೇಕಾದ್ದು ಧರ್ಮ, ಅಲ್ಲವಾ?" ...ಸೋಮಶೇಖರ, ತಂದೆಯ ಕಿರೀಟ, ಖಡ್ಗಗಳೊಡನೆ ಕಾಶಿಗೆ ಮರಳಿದ.ಅಲ್ಲಿ ರಾಣಿ ಗೌರಮ್ಮನ ಸಮಾಧಿಯ ಪಕ್ಕದಲ್ಲಿ ತಂದೆಗೊಂದು ಸ್ಮಾರಕವನ್ನು ನಿರ್ಮಿಸಿದ. ೭೦ ಅಪರಂಪಾರಸ್ವಾಮಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದುದಕ್ಕೆ ಮುಂಚೆ ಸೆರೆ ಮನೆಯ ಅಧಿಕಾರಿ ಅವರೊಡನೆ ಆಗಾಗ್ಗೆ ಸಂಭಾಷಣೆಗೆ ಬರುತ್ತಿದ್ದನಷ್ಟೆ. ಮುಂದೆ ಕುರುಡ ಸ್ವಾಮಿಯನ್ನು ಒಂಟಿ ಕೊಠಡಿಯಲ್ಲಿ ಇರಿಸಿದ ಬಳಿಕ, ಆತ ಆ ಕಡೆಗೆ ಹಾಯಲಿಲ್ಲ. ಡಾಕ್ಟರ್ ಕ್ಯಾಂಪ್ಬೆಲ್ ಅವನು ಸೂಚನೆಕೊಟ್ಟ : "ಅವನ ಜತೆ ಸಲಿಗೆಯಿಂದಿರಬೇಡಿ, ಡಾಕ್ಟರ್. ಕೆಟ್ಟ ಸಹವಾಸ. ಈ ದೇಶೀಯರು ಯಾವ ಘಳಿಗೆಯಲ್ಲಿ ಏನು ಮಾಡುತಾರೋ ಹೇಳುವುದು ಕಷ್ಟ."
ಕ್ಯಾಂಪ್ಬೆಲ್ ನಕ್ಕು ನುಡಿದ : "ಕುರುಡ ಇನ್ನೇನು ತಾನೆ ಮಾಡಾನು? ಆದರೂ ಥ್ಯಾಂಕ್ಸ್.ಹುಷಾರಾಗಿರತೀನಿ." ಕಾಂಪ್ಬೆಲ್ ವಾರಕ್ಕೊಮ್ಮೆಯಾದರೂ ಸೆರೆಮನೆಗೆ ಭೇಟಿ ನೀಡುವುದಿತ್ತು. ಆಗ ಅಪರಂಪಾರನ ಬಳಿಗೆ ಅವನು ತಪ್ಪದೆ ಬರುತ್ತಿದ್ದ.
ಬೂಟುಗಳ ಸಪ್ಪಳದಿಂದಲೇ, ಬರುತ್ತಿರುವಾತ ಕಾಂಪ್ಬೆಲ್ ಎಂದು ಅಪರಂಪಾರ ನಿಗೆ ತಿಳಿಯುತ್ತಿತ್ತು. ఆತ ಹತ್ತಿರ ಬಂದಂತೆ ಇವನ ಮುಖ ರಂಗೇರುತ್ತಿತ್ತು. ಆತನ ಧ್ವನಿ ಕೇಳಲು ಇವನ ಕಿವಿಗಳು ನಿಮಿರುತ್ತಿದ್ದುವು : "ಶರಣು, ಸ್ವಾಮಿಾಜಿ." "ಶರಣು. ವೈದ್ಯರೆ." "ಏನು ಮಾಡುತಾ ಇದೀರಿ ?" "ನಿಮ್ಮನ್ನ ನೋಡುತಾ ಇದೇನೆ." ಕಾಂಪ್ಬೆಲ್ಗೆ ಪಿಚ್ಚೆನಿಸುತ್ತಿತ್ತು. "ಆರೋಗ್ಯವಾಗಿದೀರಾ?" "ಹಾ" "ನಿಮಗೆ ಏನಾದರೂ ಬೇಕೆ?" "ಕೊಡುತೀರೇನು ?" "ಏನು ಬೇಕು ?" "ನನಗೆ ಸ್ವಾತಂತ್ರ್ಯ _ನನ್ನ ದೇಶಕ್ಕೆ ಸ್ವಾತಂತ್ರ್ಯ." ಕ್ಯಾಂಪ್ಬೆಲ್ ನಿರುತ್ತರನಾಗುರತ್ತಿದ್ದ.