ವಿಷಯಕ್ಕೆ ಹೋಗು

ಪುಟ:ಹಗಲಿರುಳು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಹಗಲಿರುಳು.

ಹೀಗೆ ಗಾನಪೂರ್ವಕವಾದ ಕರುದನಗಳ ಮಾತುಕತೆಗಳು ನಡೆಯುತ್ತಿದ್ದುವು. ಆದರೆ, ಹೊರಗೆ ಇಷ್ಟು ಜಾಗ್ರತೆಯುಂಟಾದ ಮಾತ್ರದಿಂದೇನು ? ಜೀವಿಗಳೊಳಗೆ ಪ್ರಮುಖರಾದ ಮನುಷ್ಯರಲ್ಲಿ ಹಲವರು, ಹಾಸಿಗೆಯಲ್ಲಿಯೂ ಮಿಸುಕಲಿಲ್ಲ. ಮಿಸುಕಿದರೂ, ಚಳಿಗೆ ಅಳುಕಿ, ಮುಸುಕುದೆಗೆಯಲಿಲ್ಲ. ತೆಗೆದರೂ, ಬೆಳೆಕಿಗೆ ಕಣ್ಣುದೆರೆಯಲಿಲ್ಲ. ಈಗಿನ ನವನಾಗರಿಕಲೋಕದ ರೀತಿಯೆ ಹೆಚ್ಚಾಗಿ ಹಾಗೆ ಹೊತ್ತು ಮೀರಿ ಹೊಟ್ಟೆ ಕರೆದ ಮೇಲೆ ಮಾತ್ರವೆ ಏಳುತ್ತಾರೆ. ಆದರೆ, ಅರ್ಧಾಂಗವಾದ ಹೆಂಗುಸರಾದರೂ ಪೂರ್ವಾಚಾರವನ್ನು ಬಿಡದೆ ಕಾಲದಲ್ಲಿ ಎದ್ದು ಪುರುಷರ ಆನುಕೂಲ್ಯಗಳನ್ನು ಒದಗಿಸುತ್ತಿರುವುದೆಂದು ಸುಚಿಹ್ನವೆ.. ಕೈಮುಟ್ಟಿ ತಾವು ಮಾಡಿಟ್ಟ ಸಿದ್ಧಾನ್ನವನ್ನು ಎಲ್ಲರಿಗೂ ಇಕ್ಕಿ, ಉಳಿದುದನ್ನೆ ತಾವು ಸೇವಿಸುವ ಆ ಸ್ತ್ರೀಯರ ನಿಸ್ವಾರ್ಥ ಬುದ್ಧಿಯ ಕರ್ತವ್ಯ ನಿಪುಣತೆಯೂ, ಇನ್ನೂ ಕದಲದಿರುವುದು ಭಾಗೋದಯವೆಂದೆ ಹೇಳಬೇಕು, ಆದರೆ, ಹಲವರು, ತಮ್ಮ ನವನಾಗರಿಕತೆಯ ಮಂತ್ರವನ್ನು ಅವರ ಕಿವಿಯಲ್ಲಿಯೂ ಜಪಿಸಹತ್ತಿದ್ದಾರೆ. ಆದರೂ, ಆಪರಾರ್ಥ ಬುದ್ಧಿಯ ಬೇರು, ಭರತಖಂಡದ ಸ್ತ್ರೀರತ್ನಗಳ ಹೃದಯದಿಂದ ಕಿತ್ತುಹೋಗಲಾರದು, ಹುಂ, ಸೂಜಿಗೆ ನೂಲನ್ನು ಎಷ್ಟುದ್ದಕ್ಕೂ ಸುರಿಯಬಹುದಲ್ಲವೆ? ಅದಿರಲಿ, ಮಡಲಕರೆಯಲ್ಲಿ ಆರ್ಯನ ಪತಾಕೆಯ ಕೆಂಪು ತಲೆದೋರಿತು. ಮರದ ಅಡಿಯಲ್ಲಿದ್ದ ಕತ್ತಲೆಕಾಡಿಗೆ, ಅಲ್ಲಿಂದ ಗವಿಗೆ ಹೊಕ್ಕು, ಬೇಟೆಗಾರನಿಗೆ ಭಯಪಟ್ಟ ಮೃಗದಂತೆ, ಮೈಮರೆಯಿಸಿತು, ಆದರೂ, ದುಷ್ಟರ ಅಂತರಂಗ ದಂತಿರುವ ಕೆಲವೆಡೆಗಳಲ್ಲಿ ಮಾತ್ರ, ಮುಂದಿನ ಬಿತ್ತಿಗಾಗಿ, ಮತ್ತೂ ನಿಶ್ಯೇಷ ವಾಗಲಿಲ್ಲ. ಆದರೆ, ನಕ್ಷತ್ರಪತಿ, ತನ್ನ ಹಿಮಕರಗಳಿಂದ, ಆರ್ಯಪತಾಕೆ ಯನ್ನು ಮುಚ್ಚಿ ಮುಸುಕಿದನು, ಅದರಿಂದೇನು? ಹತ್ತಿಯ ಮೂಟೆ ಕಿಡಿ ಯನ್ನು ಒತ್ತಿ ಬಾಳುವುದೆ ? ಮಂಜೆಲ್ಲ ಕರಗಿಹೋಯಿತು, ಆಗ ನಕ್ಷತ್ರಪತಿಯನ್ನೇನು ನೋಡುವುದು ! ಅವನ ಮೋರೆಯೆಂದರೆ, ಆಕಾಶಗಂಗೆಯಲ್ಲಿ ತೇಲಬಿಟ್ಟ ಹಾಲುಕಂಚಿನ ಬಟ್ಟಲೆಂಬಂತೆ ತೋರಿತು. ಅವನ ಒಡನಾಡಿಗಳ ತಲೆಕುಡಿಯನ್ನು ಸಹ ಕಂಡು ಕೇಳಿದವರಿಲ್ಲ. ಅದರಿಂದ, ನಕ್ಷತ್ರಪತಿ ನಿಸ್ತೇಜನಾಗಿ ಮುಂಗಾಣದೆ ಮುನ್ನೀರಮಡುವಿಗೆ ಬೀಳುವುದೊ, ಇನ್ನೆಲ್ಲಾ ದರೂ ಮರೆಯಾಗುವುದೊ ಎಂದು ಕಳವಳಿಸುತ್ತಿದ್ದನು. ಅಷ್ಟರಲ್ಲಿ ಆರ್ಯ ನೂ ದ್ವಿಜಸಮೂಹದ ಸ್ವಸ್ತಿವಾಚನದೊಡನೆ ಮೇಲೇರಿ ಮೂಡುವೆಟ್ಟದ ಮಣೆ ಯನ್ನು ಮಂಡಿಸಿದನು.]