ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಷ್ಮಿ

೯೩

ಪಾಲಾದೇನ ಹೊರ್ತು, ನಿನ್ನ ಆಗಲಾಕಿಲ್ಲಾ ನೆನಪಿಡು....... ನಿನ್ನ ಸಂಗತೀ ಎಂದೆಂದೂ ಎಡ್‌ನೇ ಬಾವಾ ಮಾಡಾಕಿಲ್ಲಾ.... "

"ಇಟ್ಟ ಧೀರೇವ ಹೇಳಿದ್ರ ಸಾಕೋ ನನ್ಸ ದೇವ್ರ. ಇಕಾ ಈ ದೇವರ ಮುಂದ ಕುಂತು ನಿನ್ನ ಪಾದಾ ಸಾಕ್ಷೀಮಾಡಿ ನಾನೂ ಹೇಳ್ತೇನಿ. ' ನೀನು ನನ್ನ ಅಂತಾಕರಣದ ಒಡ್ಯಾ-ನೀನ ನನ್ನ ದೇವ್ರು-ನೀನ ನನ್ನ ಗಂಡಾ-ನನ್ನ ಪಂಚಪರಾಣಾ!" ಎಂದು ಉಕ್ಕಿ ಬಂದ ಕಂಠದಿಂದ ಬಿಕ್ಕಿ ಬಿಕ್ಕಿ ಅಳಹತ್ತಿದಳು,

"ಹಾಂಗಾರ ಹೊಂಡೂದ ಹೊಂಟೀದಿ, ಸುಖ-ಸಮಾದಾನದ ಮನಸೀಲೆ ಹೊಂಡೆ ನೋಡೂನು? ನಿನ್ನ ಪಿರೀತಿ ನನ್ನ ಮ್ಯಾಲಿದ್ದದ್ದ ಜರ ಕರೇನಿದ್ರ. -ಅಳಬ್ಯಾಡ ನಾ ನೋಡಲಾರೆ........"

ಹೀಗೆಂದು ತರುಣನು ಅವಳನ್ನು ತನ್ನ ಕಾಲ ಮೇಲಿಂದ ಎಬ್ಬಿಸಿ ಸಂತೈಸಿ ಸಮಾಧಾನಪಡಿಸಿದನು.

"ಹಾಂಗೂ ಹೊಂಟೀವಿ, ಹೀಂಗೂ ಹೊಂಟೇವಿ, ನಾಕ ದಿನಾ ಸುಕಾ ಉಂಡರ ಬರೂನ ದುರ್ಹತಿ?"

ಇಬ್ಬರಿಗೂ ಒಂದು ಬಗೆಯ ಆನಂದ. ಒಬ್ಬರ ಹೆಗಲ ಮೇಲೊಬ್ಬರು ತಲೆಯನ್ನಿರಿಸಿ, ಕೆಲಹೊತ್ತು ಸುಮ್ಮನೆ ಕುಳಿತರು. ನಾಲ್ಕಾರು ನಿಮಿಷ ಸ್ತಬ್ಧವಿತ್ತು. ಕಂಟಿಯಲ್ಲಿ ಸುಳುಸುಳೆಂದು ಸಪ್ಪಳಾಯಿತು. ಗುಡಿಯ ಎದುರಿಗೆ ರಸ್ತೆಯ ಮೇಲೆ ಟಾಂಗಾ ನಿಂತಂತಾಯಿತು.

"ರಾಯ್ರ, ಗಾಡಿಗೆ ನಡೀರಿ, ನಿಂದ್ರೂ ಹಾಂಗಿಲ್ಲಾ, ಹೊತ್ತಿಗೆ ಬರಾಬರಿ ಬಂದೇನಿ."

ತರುಣಿಗೆ ಕಣ್ಸನ್ನೆ ಮಾಡಿ ತರುಣನು ಎದ್ದನು.

ತರುಣನು ಮೊದಲೇ ಟಾಂಗಾದವನಿಗೆ ಹೇಳಿಟ್ಟಿರಬೇಕು. ತನಗಾಗಿ ತನ್ನ ಪ್ರಿಯತಮನು—ತನ್ನ ಹೃದಯದ ಒಡೆಯನು ಎಷ್ಟು ಕಷ್ಟಪಡುತ್ತಿರುವನು ಎಂದವಳಿಗೆ ರೋಮಹರ್ಷವಾಯಿತು.